ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, February 26, 2010

ವಿರಾಟಪರ್ವ: ೦೬ ಆರನೆಯ ಸಂಧಿ

ಸೂ: ಚಂಡ ರಿಪುಬಲ ವಿಲಯ ಹರನು
ದ್ದಂಡ ಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ

ಎಲೆ ಪರೀಕ್ಷಿತ ತನಯ ಕೇಳ್ ನೃಪ
ತಿಲಕನತಿ ವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ ೧

ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ
ನರನಿಕಾಯದ ಜಲಚರೌಘದ
ತರದ ವಾದ್ಯಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ ೨

ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ ೩

ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೊ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ ೪

ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ ೫

ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ ೬

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು
ಮಿಸುಕಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ ೭

ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು ೮

ಸಾರಿ ಬರ ಬರಲವನ ತನು ಮಿಗೆ
ಬಾರಿಸಿತು ಮೈ ಮುರಿದು ರೋಮ ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿ ಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ ೯

ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ ೧೦

ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ ೧೧

ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ ೧೨

ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ ೧೩

ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾವನೊ ಸುಭಟನಹನವನು
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ ೧೪

ಈತ ಸಾರಥಿಯಳವಿನಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ವೀಕ್ಷಿಸಲು
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ ೧೫

ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ ೧೬

ಇಟ್ಟಣಿಸಿ ನರ ನೂರು ಹಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ ೧೭

ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ ೧೮

ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ ೧೯

ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ೨೦

ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರಭರವು
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ನರ
ಗುರಿಯೆ ನಡೆ ಕಾಳಗಕೆನುತ ಹಿಡಿದೆಳೆದನುತ್ತರನ ೨೧

ಕೊಳುಗುಳದೊಳೋಡಿದೊಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ
ಅಳಿದನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲವನುಗ್ಗಡಿಸುವನು ವೀರ ಸ್ವರ್ಗವಹುದೆಂದ ೨೨

ಧುರದಲೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಮಗೆ
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನವೆಮಗಿಂದ್ರಪದವಿಯು ಬಿಟ್ಟು ಕಳುಹೆಂದ ೨೩

ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದೊದರಿ ಭಾಷ್ಕಳಗೆಡೆದು ಬಂದೀಗ
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ ೨೪

ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ೨೫

ವಳಿತವನು ವಾರುವನು ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿ ಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ ೨೬

ಪೊಡವಿಪತಿಗಳ ಬಸುರ ಬಂದೀ
ಯೊಡಲ ಕಕ್ಕುಲಿತೆಯನು ಕಾಳಗ
ದೆಡೆಗೆ ಮಾಡಿದರಿಲ್ಲ ಭೂತ ಭವಿಷ್ಯಮಾನದಲಿ
ನುಡಿಯಬಹುದೇ ಬಂಜೆವಾತನು
ಸುಡು ಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರೆಗೆ ಕಾದಲು ಬೇಡ ಬಾಯೆಂದ ೨೭

ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಭೇದತನವನು ಬಿಟ್ಟು ಸಾರಥಿಯಾಗು ಸಾಕೆನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ ೨೮

ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ ೨೯

ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹದರಿನೊಳೌಂಕಿ ತಂದನು ರಥವನೇರಿಸಿದ ೩೦

ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ ೩೧

ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ ೩೨

ಹೊರಗೆ ತೊಗಲಲಿ ಬಿಗಿದು ಕೆಲ ಬಲ
ನರಿಯದಂದದಿ ಪಾಂಡು ನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು ೩೩

ಕಾಲ ಭುಜಗನ ನಾಲಿಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ
ತೋಳು ಧರಿಸುವವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆನುತೋರಂತೆ ಹಲುಬಿದನು ೩೪

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ ೩೫

ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ ೩೬

ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆ ತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ ೩೭

ಗಿರಿಯನೆತ್ತಲು ಬಹುದು ಬಿಲುಗಳ
ಕೆರಳಿಚುವಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು ೩೮

ಹೇಳು ಸಾರಥಿ ಬಿಲ್ಲಿದಾವನ
ತೋಳಿಗಳವಡುವುದು ಮಹಾ ಶರ
ಜಾಲ ಬೆಸೆಗೈದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ ೩೯

ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ ೪೦

ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನ ಸೂನು ಬೆಸಗೊಂಡ ೪೧

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡು ಕು
ಮಾರರಾಯುಧ ತತಿಯ ನೀನೆಂತರಿವೆ ಹೇಳೆಂದ ೪೨

ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರ ಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ ೪೩

ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ ೪೪

ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ ೪೫

ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತ ವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ ೪೬

ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲು ಬೃಹನ್ನಳೆತನದ ಬಹು ರೂಪು
ಅಂಬುಜಾಕ್ಷನ ಸಾಹಸ ಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ ೪೭

ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಿಜ್ಜೋಡಾಯ್ತು ನಿರ್ವಿ
ಘ್ನದಲಿ ನೂಕಿದೆವವಧಿಯನು ತ
ನ್ನದಟುತನವನು ಭೀತಿಗೊಳ್ಳದೆ ನೋಡು ನೀನೆಂದ ೪೮

ಬಳೆಯ ನೆಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ ೪೯

ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣಿ ಮಿಗೆ ಧನುವ ಕೊಂಡನು ತಿರುವನೇರಿಸಿದ ೫೦

ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ ೫೧

ಸಡಿಲ ಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯನೆ ಗಜರು ಮಿಗೆ ಗರ್ಜಿಸಿದವಳ್ಳಿರಿದು
ಕುಡಿ ನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು ೫೨

ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು
ವೀರ ತಿಳುಹೆನಗಿಲ್ಲಿ ಕರ್ಣನ
ದಾರು ನಾ ಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ ೫೩

ಉದಯದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ ೫೪

ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾತನತಿಬಲ
ಶಿವನ ನೊಸಲಂದದಲಿ ಮೆರೆವವ
ನಿವನು ಜಿತಸಂಗ್ರಾಮನಶ್ವತ್ಥಾಮ ನೋಡೆಂದ ೫೫

ಖುರದಲವನಿಯ ಹೊಯ್ದು ಲಹರಿಯ
ಲುರಿ ಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ
ಸರಳ ತಿರುಹುತ ನಿಂದು ಧನುವನು
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿಬಲ ಕೃಪಾಚಾರಿಯನು ನೋಡೆಂದ ೫೬

ಲಲಿತ ರತ್ನಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯ ರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಿಲು ಝೇಂಕಾರ ರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು ೫೭

ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಿಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರ ಗಂಗಾಸುತನು ನೋಡೆಂದ ೫೮

ಅಗಿವ ಹಾವಿನ ಹಳವಿಗೆಯ ಮಿಗೆ
ನೆಗಹಿ ಮುಸುಕಿದ ಝಲ್ಲರಿಯ ಜೋ
ಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ
ನೆಗಹಿ ನಿಗುರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ ೫೯

ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಮತ್ತಾ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನ ನೊಸಲಂದದಲಿ ಮೆರೆವವ
ರವನಿಪಾಲಕನನುಜರನು ನೋಡೆಂದನಾ ಪಾರ್ಥ ೬೦

ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು ೬೧

ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡಾಹವಕೆ
ಅರೆರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ ೬೨

ತುರಗ ಗರ್ಜನೆ ರಥದ ಚೀತ್ಕೃತಿ
ವರ ಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕಿ
ಸುರಿಯೆ ಸುರಕುಲ ಪರಿಯೆ ಭೀತಿಯ ಲಹಿತ ಬಲ ಹರಿಯೆ ೬೩

ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯ ನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ ೬೪

ಏನು ಮತ್ಸ್ಯಕುಮಾರ ಭವಣೆಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿಧಾನವ ಮಾಣು ಮಾಣೆನೆ ಪಾರ್ಥನಿಂತೆಂದ ೬೫

ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ ೬೬

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

Tuesday, February 23, 2010

ದ್ರೋಣಪರ್ವ: ೦೩. ಮೂರನೆಯ ಸಂಧಿ

ಸೂ. ಹನುಮನನುಜನ ಬಾಹುಬಲ ರಿಪು
ವನಧಿಯನು ತುಳುಕಿದನು ಭಗದ
ತ್ತನನು ಮರ್ದಿಸಿ ಮುರಿದನರ್ಜುನ ಸುಪ್ರತೀಕವನು

ಗುರುಗಳಾಡಿದ ಭಾಷೆ ಪರಬಲ
ದರಸ ಕಟ್ಟುವದದು ನಿಲಲಿ ನ
ಮ್ಮರಸ ಸಿಲುಕಿದ ಭೀಮ ಗಜ ಕಟ್ಟಿದುದು ಬೀದಿಗಳ
ತಿರುಗಲಾಪರೆ ಸಮಯವಿದು ಸಂ
ಗರ ಸಮರ್ಥರು ಬರಲಿ ಯೆಂಬ
ಬ್ಬರದೊಳಗೆ ಭಗದತ್ತ ಮೇಳೈಸಿದನು ನಿಜಗಜವ ೧

ಬಲವೊರಜೆ ಎಡವೊರಜೆ ಬೆನ್ನಿನ
ಮಿಳಿಯ ಜಾಳಿಗೆವೊರಜೆ ತಳ ಸಂ
ಕಲೆಯ ತೊಡರಂಕಣಿಯ ಕೊಂಡೆಯ ಪಕ್ಕ ಗಂಟೆಗಳ
ತುಳುಕಿನುಗ್ಗಡಣೆಗಳ ಹಿಣಿಲಿನ
ಬಲುವೊರಜೆಗಳ ಬಾರ ಸಂಕಲೆ
ಗಳನು ಬಿಗಿದರು ಜೋಡಿಸಿದರುಬ್ಬರದ ಮದಗಜವ ೨

ಬಿಗಿದು ಗಳವತ್ತಿಗೆಯನೆದೆವ
ತ್ತಿಗೆಯ ಘನಮುಂಡಿಗೆಯ ಲೌಡಿಯ
ಬಿಗಿದು ಗುಳ ರೆಂಚೆಗಳ ಭಾರಿಯ ಕೈಯ ಪಟ್ಟೆಯವ
ಅಗಿವ ಬಡಿಗೆಯನಂಕುಶದ ಕ
ಟ್ಟಿಗೆಯ ಧಾರೆಯ ಕಮಳದಳ ಕೊಡ
ತಿಗಳ ಕೈಹಾರೆಗಳನಳವಡಿಸಿದರು ವಹಿಲದಲಿ ೩

ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾ ನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ ೪

ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈ ಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು ೫

ಸುತ್ತ ಮೆರೆದವು ಮೇಲೆ ಪಲ್ಲವ
ಸತ್ತಿಗೆಯ ಸಾಲುಗಳು ಬಿರುದಿನ
ಕತ್ತರಿಯ ಹೀಲಿಗಳ ಝಲ್ಲರಿ ಮುಸುಕಿದವು ಗಜವ
ಒತ್ತಿ ಕಿವಿಗಳನೊದೆದು ಶಿರದಲಿ
ತೆತ್ತಿಸಿದರಂಕುಶವನಾ ಭಗ
ದತ್ತ ದಂತಿಯನೇರಿದನು ಜಯರವದ ರಭಸದಲಿ ೬

ಕಾಲುಗಾಹಿನ ಕುದುರೆಗಳ ಕಾ
ಲಾಳ ಕೈವಾರಿಗಳ ಸಬಳದ
ಸೂಲಿಗೆಯ ತೇರುಗಳ ಹರಹಿನ ಹೊಂತಕಾರಿಗಳ
ಆಳ ಬಲು ಬೊಬ್ಬೆಯಲಿ ಘನ ನಿ
ಸ್ಸಾಳತತಿ ಮೊಳಗಿದವು ಡೌಡೆಯ
ತೂಳುವರೆಗಳು ಗಜರಿದವು ತಂಬಟದ ಲಗ್ಗೆಯಲಿ ೭

ಸುರಪ ಕಡಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ ೮

ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಳ ಕುಲ
ದಿಗಿಭವೆಂಟೊಂದಾಯ್ತೊ ಕೈ ಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡಿರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾ ಗಜವೈದಿತಾಹವವ ೯

ಪವನಬಲ ಪರಿದಳಿತ ಕದಳೀ
ನಿವಹದಲಿ ನಭ ಧಾತುಗೆಟ್ಟುದು
ರವಿಗೆ ಕಾಪಥವಾಯ್ತು ಹೊಗಳುವೆನೇನನುದುಭುತವ
ಭುವನ ಕೋಶದೊಳಾದ ವಿಪಿನೋ
ದ್ಭವವೊ ಭಾರಿಯ ದಂತಿ ಮಹದಾ
ಹವದೊಳಿಳಿದುದು ಕೃಷ್ಣನೊಲಿದರಿಗಾವುದರಿದೆಂದ ೧೦

ಹಿಡಿವ ಬಿಡುವೊಬ್ಬುಳಿಗೆ ತಹ ಬಲ
ನೆಡಕೆ ಹಾಯ್ಕುವ ಸುತ್ತಲೊತ್ತುವ
ತಡೆವ ನಡಸುವ ಸೆಳೆವ ತಿರುಹುವ ಹದಿರ ಜೋಕೆಯಲಿ
ಗಡಣಿಸಿದನವನಿಭಪತಿಯನವ
ಗಡಿಸಿ ನೂಕಿದೊಡಮಮ ದಿಕ್ಕರಿ
ನಡುಗೆ ಚೌಕದ ಕಳನ ತುಳಿದುದು ಸುಪ್ರತೀಕಗಜ ೧೧

ಇದು ಗಜಾಸುರನೋ ಮಹಾ ದೇ
ವಿದುವೆ ಮಹಿಷಾಸುರನೊ ಮಾಯಾ
ರದನಿಯೋ ದಿಟವಿದನು ಗೆಲುವರೆ ಭೀಮ ಫಲುಗುಣರು
ತ್ರಿದಶ ರಿಪುಗಳ ಗಂಡನಿದು ಕಾ
ದಿದೆವು ನಾವಿಂದೆನುತ ಸುಭಟರು
ಕದಡಿ ಸರಿದುದು ಸೂರೆಗೊಂಡುದು ಬಲ ಪಲಾಯನವ ೧೨

ಮೊಗವ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊಡೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ ೧೩

ನೆಳಲು ಸುಳಿಯಲು ದಂತಿಯೆಂದ
ಪ್ಪಳಿಸೆ ವಾಸುಕಿ ನೊಂದನಂಬುಧಿ
ತುಳುಕಿದವು ಸತ್ವಾತಿಶಯವೆಂತುಟು ಮಹಾದೇವ
ತುಳಿದುದರಿ ಸುಭಟರನು ಸಾವಿರ
ತಲೆಯ ಸೆಳೆದುದು ಸೊಂಡಿಲಲಿ ವೆ
ಗ್ಗಳೆಯ ಮದಕರಿ ಕೇಣಿಗೊಂಡುದು ವೈರಿಮೋಹರವ ೧೪

ಸೀಳಿ ಹರಹಿತು ಕರಿಗಳನು ನೇ
ಪಾಳಗುದುರೆಯ ಥಟ್ಟುಗಳ ಹಿಂ
ಗಾಲಲಣೆದುರು ರಥವನೈದಾರೇಳನೊಂದಾಗಿ
ತೋಳೊಳಗೆ ನೆಗ್ಗೊತ್ತಿ ಮಿಗೆ ಕಾ
ಲಾಳ ತೊತ್ತಳದುಳಿದು ಕಾಲನ
ಗೂಳೆಯಕ್ಕುಪಕಾರಿಯಾದುದು ಸುಪ್ರತೀಕಗಜ ೧೫

ದ್ವಿಗುಣ ತ್ರಿಗುಣದಲಣೆದು ಜೋಡಿಸಿ
ಚಿಗಿದು ಹಾಯ್ಕುವ ಮೆಟ್ಟಿ ಸೀಳುವ
ತೆಗೆದು ಕಟ್ಟುವ ತಿರುಹಿ ನೂಕುವ ಹೆಡೆತಲೆಯೊಳಡಸಿ
ಉಗುರೊಳೌಕುವ ನಿಗ್ಗವದೊಳಿ
ಬ್ಬಗಿಯ ಮಾಡುವ ಕಾಲುಗೊಲೆಯಲಿ
ವಿಗಡ ಕರಿ ತುಳಿದಾಡಿತಿದಿರಿರಾದ ಪಟುಭಟರ ೧೬

ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರು
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ ೧೭

ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ ೧೮

ಮುರಿದು ಕೊಟ್ಟುದು ದಂತಿ ಗುರುವಿ
ನ್ನುರುಬಿ ರಾಯನ ಹಿಡಿಯದಿರನಿದ
ತರುಬಲಾಪರೆ ಬರಲಿ ಸಾತ್ಯಕಿ ನಕುಲ ಪವನಜರು
ಇರಿತಕಿವರಂಜಿದರೆ ಪಾರ್ಥಂ
ಗರುಹಿ ಬೇಗದೊಳೆನುತ ನಾಯಕ
ರೊರಲುತಿರಲನುವಾದುದಿತ್ತಲು ದೊರೆಗಳೊಗ್ಗಿನಲಿ ೧೯

ಅಳ್ಳೆದೆಯ ಮನ್ನೆಯರನೊಗ್ಗಿನ
ಡೊಳ್ಳುಗರ ಕಟವಾಯ ಕೊಯ್ ತಲೆ
ಗಳ್ಳರಿವದಿರು ತರಿಚುಗೆಡೆವರ ಹೋಗ ಹೇಳೆನುತ
ಬಿಲ್ಲಗೊಲೆಗೇರಿಸುತ ಚೌಪಟ
ಮಲ್ಲ ಹೊಕ್ಕನು ಭೀಮ ಭಟರ
ಲ್ಲಲ್ಲಿ ಕವಿದುದು ದ್ರುಪದ ನಕುಲ ಯುಧಿಷ್ಠಿರಾದಿಗಳು ೨೦

ಕರಿ ಬಲುಹು ಕಲಿ ಭೀಮಸೇನನು
ದುರುಳನಿನ್ನೇನಹನೆನುತ ಮೋ
ಹರಿಸಿ ಕವಿದುದು ಮತ್ಸ್ಯ ಸೃಂಜಯ ಪಂಚ ಕೈಕೆಯರು
ತಿರುವಿಗಂಬನು ತೊಡಚಿ ಸಾತ್ಯಕಿ
ನರನ ಮಗ ಹೈಡಿಂಬ ಯವನೇ
ಶ್ವರರು ಧೃಷ್ಟದ್ಯುಮ್ನ ಮೊದಲಾಗೈದಿದರು ಗಜವ ೨೧

ಗಿರಿಯ ತರಿವರೆ ಶಕ್ರನಲ್ಲದೆ
ನೆರೆದ ದಿವಿಜ ಸಮೂಹ ಮಾಡುವ
ಭರವಸಿಕೆ ತಾನೇನು ಹೊದ್ದಿದರಿವರು ದಿಗ್ಗಜವ
ಸರಳ ಬಲುವಳೆಗಾಲವಹಿತ
ದ್ವಿರದ ಗಿರಿಯಲಿ ಕಾಣಲಾದುದು
ಕೆರಳಿ ಕರಿ ಕೈಕೊಂಡುದರೆಯಟ್ಟಿತು ಮಹಾರಥರ ೨೨

ಚೆಲ್ಲಿತಿದು ದೆಸೆದೆಸೆಗೆ ಚೌಪಟ
ಮಲ್ಲ ಗಿಲ್ಲರ ಪಾಡೆ ನಮ್ಮದು
ಬಲ್ಲಿತಹುದುಸುರಿಲ್ಲದೊಡಲಿನ ಚೆಲುವು ಫಲವೇನು
ಅಲ್ಲಿ ದೈವದ ನೆನೆಹು ಘನ ಜಯ
ವೆಲ್ಲಿಯದು ನಮಗಿನ್ನು ಸಾಕಿ
ನ್ನೆಲ್ಲವೇತಕೆ ಚಿತ್ತವಿಸು ಚೌದಂತನಾಹವವ ೨೩

ಸೆಳೆವಿಡಿದು ತುರುಗಾಹಿ ಪಶು ಸಂ
ಕುಲವ ತೆವರುವವೋಲು ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ
ಬಲುಕಣಿಗಳಿವದಿರನು ಕರಿ ಮುಂ
ಕೊಳಿಸಿ ಕೆಡಹಿತು ಯವನ ಕೌಸಲ
ಬಲವ ಕೈಕೆಯ ಮಗಧ ಭೂಪರ ಕೊಡಹಿ ಹಾಯಿಕಿತು ೨೪

ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ ೨೫

ಮರಳಿ ಮತ್ತೆ ಮಹಾರಥರು ಸಂ
ವರಿಸಿಕೊಂಡುದು ಸರಳ ಮಳೆಗಳ
ಸುರಿದರಾನೆಯ ಮೇಲೆ ಜೋದರ ಕೋಲ ಮನ್ನಿಸದೆ
ಗಿರಿಯ ಮುತ್ತಿದ ಮಿಂಚುಬುಳುವಿನ
ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು ಕರೆದರದುಭುತ ಕಣೆಯ ಸರಿವಳೆಯ ೨೬

ಬಾಲರೆಸುಗೆಯ ಮಿಟ್ಟೆಯಂಬಿಗೆ
ಸೋಲುವುದೆ ಗಿರಿ ವೈರಿ ಸುಭಟರ
ಕೋಲ ಕೊಂಬುದೆ ವೀರ ಕುಂಜರ ಮತ್ತೆ ಮೊಗ ನೆಗಹಿ
ಆಳೊಳಗೆ ಬೆರಸಿತು ಮಹಾ ರಥ
ರೋಳಿ ಮುರಿದುದು ಕುರಿಯ ಹಿಂಡಿನ
ತೋಳನೈ ನಿನ್ನಾನೆ ಸವರಿತು ಮತ್ತೆ ಮಾರ್ಬಲವ ೨೭

ಹಡಗು ಜಲಧಿಯೊಳೋಡಿ ಗಿರಿಗಳ
ನೆಡಹಿ ನುಗ್ಗಾದಂತೆ ಸುಭಟರ
ಗಡಣ ಗಜವನು ತಾಗಿ ತಾಗಿ ವಿಘಾತಿಯಲಿ ನೊಂದು
ಒಡಲ ಮೇಲೆಳ್ಳನಿತು ಮೋಹವ
ಹಿಡಿಯದಿವರೌಕಿದರು ಹಾವಿನ
ಕೊಡನು ದೋಷಿಗೆ ಸುಲಭವೇ ಧೃತರಾಷ್ಟ್ರ ಕೇಳೆಂದ ೨೮

ಮುರಿದು ಮೋದಿತು ಸಮ್ಮುಖದೊಳಿ
ಟ್ಟೊರಸಿತೆಡದಲಿ ಹೊಯ್ದು ಸೀಳಿತು
ಹರಹಿತಪಸವ್ಯದಲಿ ಮೆದೆಗೆಡಹಿತು ಮಹಾರಥರ
ಹೊರೆದ ರಕುತದ ಧಾರೆಗಳ ತುದಿ
ಕರದೊಳೆಳಲುವ ತಲೆಗಳಂಘ್ರಿಯೊ
ಳೊರೆದ ನೆಣನಡಗಿನ ಮಹಾಗಜ ಮೊಗೆದುದರಿಬಲವ ೨೯

ಹಿಂದೆ ಹಿಡಿವರು ಮುರಿದರೆಡದಲಿ
ಸಂದಣಿಸುವರು ತಿರುಗಿದರೆ ಬಲ
ದಿಂದ ಕೈ ಮಾಡುವರು ಕವಿದರೆ ಸಿಡಿವರೆಡಬಲಕೆ
ಮುಂದೆ ಕಟ್ಟುವರಟ್ಟಿದರೆ ಮುರಿ
ವಿಂದ ಜಾರುವರಾ ಮಹಾರಥ
ವೃಂದ ಕಾದಿತು ಮದಕರಿಯ ಬೇಸರದೆ ಬಳಿಸಲಿಸಿ ೩೦

ಕರಿಯ ಕೋಲಾಹಲವನಾ ಜೋ
ದರ ಶರೌಘವ ಸೈರಿಸುತ ಮು
ಕ್ಕುರಿಕಿ ಧರ್ಮಜ ನಕುಲ ಸಾತ್ಯಕಿ ಭೀಮ ನಂದನರು
ಸರಳ ಸಾರವ ಕಟ್ಟಿದರು ಮಿಗೆ
ಕೆರಳಿದನು ಭಗದತ್ತನನಿಬರ
ಹರೆಗಡಿದು ಹೊಗರಂಬ ಸುರಿದನು ಸರಿದರತಿರಥರು ೩೧

ಹತ್ತು ಶರದಲಿ ಧರ್ಮಜನನಿ
ಪ್ಪತ್ತರಿಂದಭಿಮನ್ಯುವನು ತೊಂ
ಬತ್ತು ಶರದಲಿ ನಕುಲ ಸಾತ್ಯಕಿ ದ್ರುಪದ ಕೈಕೆಯರ
ಕೆತ್ತಿದನು ಹದಿನೆಂಟು ಬಾಣದ
ಲಿತ್ತ ಭೀಮನ ನಂದನನನೈ
ವತ್ತು ಶರದಲಿ ಸಕಲ ರಥಿಕರನೆಚ್ಚು ಬೊಬ್ಬಿರಿದ ೩೨

ಬಿನುಗುಗಳ ತೆಗೆ ಭೀಮಸೇನನ
ಮೊನೆಗೆ ಬಿಡು ಬಿಡು ಗಜವನೆಂದು
ಬ್ಬಿನಲಿ ತಿರುಹಿದನಾನೆಯನು ಪವನಜನ ಸಮ್ಮುಖಕೆ
ಧನುವ ಬಿಸುಟನು ಗದೆಯ ತುಡುಕಿದ
ನನುವರದೊಳಡ್ಡೈಸಿ ದಂತಿಯ
ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದದಲಿ ೩೩

ಭುಜದ ಸಾಹಸ ಹತ್ತು ಸಾವಿರ
ಗಜದ ಘಾಡಿಕೆ ಸಿಂಹನಾದದ
ವಿಜಯ ವಿಗ್ರಹ ವೀರ ಹಳಚಿದನಮಮ ಮದಕರಿಯ
ತ್ರಿಜಗ ತಲೆಕೆಳಗಾಗೆ ದಿವಿಜ
ವ್ರಜ ಭಯಂಗೊಳೆ ಮಿಕ್ಕು ಸುರಪನ
ಗಜದ ಹೊಯ್ ಕೈಯಾನೆ ಹೆಣಗಿತು ಭೀಮಸೇನನಲಿ ೩೪

ಚಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದವು ನಗಂಗಳ
ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ
ಜಿಗಿವ ರಕುತದ ಗದೆಯ ಬಿರುವೊ
ಯ್ಲುಗಳೊಳಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ ೩೫

ಹೊಯ್ದು ಹಿಂಗದ ಮುನ್ನ ಭೀಮನ
ಕೈದುಡುಕಿದರೆ ಮುರಿದು ಹಿಂದಕೆ
ಹಾಯ್ದಡೊಡೆಮುರಿಯಿತ್ತು ಕುಸಿದರೆ ಕಾಲೊಳೊಡೆಯವುಚಿ
ಮೈದೆಗೆದರಿಟ್ಟಣಿಸಿ ಪೂತ್ಕೃತಿ
ಗೈದು ಸುಭಟನ ಸಿಂಹನಾದಕೆ
ಮುಯ್ದೆಗೆದು ಕರಿ ಕಾದುತಿರ್ದುದು ಭೀಮಸೇನನಲಿ ೩೬

ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗ ನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡಿಹಿಂಗೆ ಲಾಗಿಸುತಿರ್ದುದಾ ದಂತಿ ೩೭

ಭೀಮನಿನ್ನರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಂತಿಯ
ತಾಮಸಿಕೆ ಘನ ತೆಗೆಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು ೩೮

ಮತ್ತೆ ರಥವರುವತ್ತು ಸಾವಿರ
ಮುತ್ತಿಕೊಂಡುದು ಗಜವನಾ ಭಗ
ದತ್ತ ಬಳಲಿದನವಧಿಯಿಲ್ಲದೆ ಶರವ ನೆರೆ ತುಳುಕಿ
ಮೆತ್ತಿದವು ಶರವಿಭದ ಮೆಯ್ಯಲಿ
ಬೆತ್ತ ಬೆಳೆದದ್ರಿಯವೊಲಿದ್ದುದು
ಮತ್ತಗಜ ನೊಂದರಿಯದನಿಬರ ಬಾಣ ಹತಿಗಳಲಿ ೩೯

ಕರಿ ವಿನೋದದಿ ಕುಡಿದ ಜಲವನು
ಕರಣಿಯಲಿ ತೆಗೆತೆಗೆದು ರಿಪು ಮೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ
ಕರ ತುಷಾರದಲಿವರು ಮೋರೆಯ
ತಿರುಹೆ ನನೆದವು ಬಾಹುರಿಕೆ ಹ
ಕ್ಕರಿಕೆ ಹಲ್ಲಣ ಜೋಡು ಸೀಸಕ ಛತ್ರ ಚಮರಿಗಳು ೪೦

ಸಾಕು ಬಳಲಿದಿರಕಟಕಟ ನಿಮ
ಗೇಕೆ ಸಂಗರವಾನೆಯೊಡನೆ ಪಿ
ನಾಕಿ ಸಮರದೊಳಳುಕುವನು ಕರಿ ನಿಮ್ಮ ಪಾಡೇನು
ಆ ಕಿರೀಟಿಯ ಕರಸಿಕೊಳ್ಳಿ ವಿ
ವೇಕವುಳ್ಳರೆ ತೊಲಗಿಯೆನುತವೆ
ನೂಕಿದನು ಭಗದತ್ತನನಿಬರ ಮೇಲೆ ದಿಗ್ಗಜವ ೪೧

ಮಿಗೆ ತಿಮಿಂಗಿಲನೊಡನೆ ಹುಲು ಮೀ
ನುಗಳು ಮಾಡುವುದೇನು ಹೊರ ಕಾ
ಲುಗಳ ಹೋರಟೆ ಕಾಣಲಾದುದು ಪರರ ಥಟ್ಟಿನಲಿ
ತೆಗೆಯೆ ರಿಪುಬಲ ಕೊಲುತ ಬಂದುದು
ದಿಗಿಭವಿದರೊಡನೈದಿ ದ್ರೋಣಾ
ದಿಗಳು ಹೊಕ್ಕುದು ಧರ್ಮಪುತ್ರನ ಹಿಡಿವ ತವಕದಲಿ ೪೨

ತಿದ್ದಿತೋ ಕಲಿ ಪಾರ್ಥನಿದ್ದರೆ
ಹೊದ್ದ ಹೇಳೋ ರಾಯದಳವಡಿ
ಗದ್ದುದೋ ಬಿದ್ದುದು ಭಯಾಂಬುಧಿಯೊಳಗೆ ಭಟನಿಕರ
ಹದ್ದು ಕಾಗೆಯ ಮನೆಗೆ ಬಾಣಸ
ವಿದ್ದುದೋ ಗಜವೆನುತ ಬೊಬ್ಬಿಡು
ತಿದ್ದುದರಿ ಬಲವಿತ್ತ ಹರಿ ಕೇಳಿದನು ಕಳಕಳವ ೪೩

ಮರಳು ಫಲುಗುಣ ಸುಪ್ರತೀಕದ
ಖುರಪುಟವ ನೋಡಿತ್ತಲಗ್ಗದ
ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ
ತೆರಳುತಿದೆ ನಮ್ಮವರು ದಿಕ್ಕರಿ
ಹರಹಿ ಕೊಲುತಿದೆ ಮಾತಿಗಿಲ್ಲವ
ಸರವೆನುತ ಕರಿಯತ್ತ ತಿರುಹಿದನಸುರರಿಪು ರಥವ ೪೪

ಹೆದರದಿರು ನರ ಹೋಗದಿರು ಹೋ
ಗದಿರು ಕೊಡು ಕೊಡು ಕಾಳೆಗವನೆಂ
ದದಟರಟ್ಟಿತು ವೀರ ಸಮಸಪ್ತಕರು ಸೂಠಿಯಲಿ
ಇದಿರಲಿನಸುತ ಶಲ್ಯರಡಗ
ಟ್ಟಿದರು ಖತಿಯಲಿ ಪಾರ್ಥನನಿಬರ
ಸದೆದು ವಹಿಲದಲೈದಿದನು ದಿಕ್ಕರಿಯ ಸಮ್ಮುಖಕೆ ೪೫

ಬಲು ಬಿಸಿಲೊಳುರೆ ನೊಂದ ನೈದಿಲೆ
ಗಳಿಗೆ ಚಂದ್ರಿಕೆ ದೈತ್ಯರುರುಬೆಗೆ
ಸಿಲುಕಿದಮರರಿಗಸುರಹರನ ಕಟಾಕ್ಷವಿಕ್ಷೇಪ
ಬಲಿದ ತಾಪತ್ರಯದ ಭವಗೋ
ಟಲೆಯ ಜೀವಿಗೆ ಸುಪ್ರಬೋಧದ
ಸುಳುವಿನಂತಿರೆ ಪಾರ್ಥ ಮೈದೋರಿದನು ನಿಜಬಲಕೆ ೪೬

ಕೆದರಿತೀ ಬಲ ಬೆರಳ ತುಟಿಗಳೊ
ದರಿತಾ ಬಲ ತಾಪಶಿಖಿಯಲಿ
ಕುದಿದುದೀ ಬಲ ಭೀತಿಕಂಚುಕ ಕಳೆದುದಾ ಬಲಕೆ
ಕದಡಿತೀ ಬಲ ರೋಮಪುಳಕವ
ಹೊದೆದುದಾ ಬಲ ಹಿಂಡೊಡೆದು ನೆರೆ
ಕದುಬಿತೀ ಬಲ ನೆರೆದುದಾ ಬಲ ನರನ ರಥ ಸುಳಿಯೆ ೪೭

ಗಿರಿಯ ವಿಸಟಂಬರಿಯನಮರೇ
ಶ್ವರನು ತಡೆವವೊಲಳ್ಳಿರಿವ ದಿ
ಕ್ಕರಿಯನಡಗಟ್ಟಿದನು ಕಾಯದೊಳೊಟ್ಟಿದನು ಶರವ
ಕೆರಳಿದನು ಭಗದತ್ತನಿವನೇ
ನರನು ಫಡ ನಿಲ್ಲು ನಿಲ್ಲೆನು
ತುರು ಶರೌಘವ ಕರೆದು ಮುಸುಕಿದನರ್ಜುನನ ರಥವ ೪೮

ಪೂತುರೇ ಭಗದತ್ತ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ಶರ
ಪಾತವಿನಿತಿಲ್ಲದಡೆ ಹೊಳ್ಳಿಸಬಹುದೆ ನೃಪ ಧನವ
ನೂತನ ದ್ವಿಪದಿಂದ ವೈರಿ
ವ್ರಾತವನು ಸೋಲಿಸಿದ ಗರ್ವದ
ರೀತಿಗಿದು ಠಾವಲ್ಲೆನುತ ತೆಗೆದೆಚ್ಚನಾ ಪಾರ್ಥ ೪೯

ನರನ ಶರಜಾಲವನು ಖಂಡಿಸಿ
ಸುರಿದನಂಬನು ಕೃಷ್ಣರಾಯನ
ಸಿರಿಯೊಡಲ ಸೋಂಕಿದವು ನೂಕಿದವಂಬು ಗರಿ ಸಹಿತ
ನರನ ಕುದುರೆಯ ಮೇಲೆ ಸಿಂಧದ
ಹರಿಯ ತನುವಿನ ಮೇಲೆ ತಳಿತವು
ಶರನಿಕರ ಬಿಡದೆಚ್ಚನಾ ಭಗದತ್ತನರ್ಜುನನ ೫೦

ಸೆಳೆದು ಬಾಣತ್ರಯದಲೆಚ್ಚನು
ಫಲುಗುಣನ ಮಕುಟವನು ಮುರಿದುದು
ಕೆಲಕೆ ಸಡಿಲುವ ಮಣಿಗಳಲಿ ವರಮೌಳಿಯೋಸರಿಸೆ
ಬಲಿದು ಸಸಿನವ ಮಾಡಿ ಖಾತಿಯ
ತಳೆದು ಕೂರಂಬಿನಲಿ ಹೂಳಿದ
ನಳವಿನಲಿ ರಿಪುಗಜವನಾ ಭಗದತ್ತನವಯವವ ೫೧

ಇಳುಹಿದನು ಬಲುಗುಳವ ಖಂಡಿಸಿ
ಕಳಚಿದನು ಮೊಗರಂಬವನು ಹೊ
ಮ್ಮಿಳಿಯ ಕುಣಿಕೆಯ ಮುರಿದು ತರಿದನು ಸುತ್ತ ರೆಂಚೆಗಳ
ಹಳವಿಗೆಯನಾ ಛತ್ರಚಮರಾ
ವಳಿಯ ಸೀಳಿದು ಬಿಸುಟನಾ ಗಜ
ತಿಲಕ ಮುಂಡಾಸನದಲಿರ್ದುದು ಭೂಪ ಕೇಳೆಂದ ೫೨

ಮತ್ತೆ ಖಾತಿಯೊಳಂಕುಶದಿನೊಡೆ
ಯೊತ್ತಿ ಬಿಟ್ಟನು ಗಜವನರ್ಜುನ
ನತ್ತಲಿಭ ತೂಳಿದಡೆ ತಿರುಹಿದನಸುರರಿಪು ರಥವ
ಇತ್ತ ಬಲದಲಿ ಬಲಕೆ ಮೊಗವಿಡ
ಲತ್ತಲೆಡದಲಿ ಮರಳಲಲ್ಲಿಂ
ದತ್ತ ತಿರುಗಿಸಿ ಬಳಲಿಸಿದನಸುರಾರಿ ದಿಗ್ಗಜವ ೫೩

ಸಾರಥಿಯ ಕೊಂದಲ್ಲದರ್ಜುನ
ತೀರುವವನಲ್ಲೆನುತ ದಳ್ಳುರಿ
ಧಾರೆಯಂಬೈದರಲಿ ದೇವನನೆಸಲು ಮಧ್ಯದಲಿ
ಹಾರಿಸಿದನಾ ಪಾರ್ಥನಿವನೆಡೆ
ಗೋರಿದನಲಾಯೆನುತ ಕೆಡೆಯೆನು
ತಾರಿ ಸುರಿದನು ನೂರು ಬಾಣವನರ್ಜುನನ ಮೇಲೆ ೫೪

ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ ೫೫

ತೈಲ ಲೇಪದ ನಯದ ಹೊಗರಿನ
ಜಾಳಿಗೆಯ ಗಹಗಹಿಕೆಗಳ ಹೂ
ಮಾಲೆಗಳ ಸಿಂಪಿಸಿದ ಗಂಧದ ಬಂಧದಕ್ಷತೆಯ
ಕೀಲಣೆಯ ಮಣಿವೆಳಗುಗುಳ ಹರಿ
ದಾಳಿಯಲಿ ಕಾಳೋರಗನ ಕುಡಿ
ನಾಲಿಗೆಯವೋಲೆಸೆದುದಂಕುಶ ಭಟನ ಮುಷ್ಟಿಯಲಿ ೫೬

ಕುಡಿ ಕಿರೀಟಿಯ ರಕುತವನು ಹಗೆ
ಕೆಡಲಿ ಕೌರವ ರಾಯನಾಳಲಿ
ಪೊಡವಿಯನು(ದು?) ಪರಿತೋಷವಾಗಲಿ ನೃಪನ ಮಿತ್ರರಿಗೆ
ತಡೆದು ಹಲಕಾಲದಲುಪಾಸಂ
ಬಡಿಸಿದೆನ್ನದು ದೋಷ ಖಾತಿಯ
ಹಿಡಿಯದಿರು ನೀನೆನುತ ತಿರುಹಿಟ್ಟನು ಮಹಾಂಕುಶವ ೫೭

ತೀರಿತಿನ್ನೇನಕಟ ಪಾಂಡವ
ವೀರರುಬ್ಬಟೆ ಹಾರಿತೇ ತ್ರಿಪು
ರಾರಿಯುರಿಗಣ್ಣಿಂದ ಸೋಲದ ಕೈದುಗೊಂಡನಲ
ಧಾರುಣಿಯನಿನ್ನುಣಲಿ ಧರ್ಮ ಕು
ಮಾರನಕಟಿನ್ನಾರು ಕಾವವ
ರಾರೆನುತ ತಲ್ಲಣಿಸುತಿರ್ದುದು ಪಾಂಡುಸುತ ಸೇನೆ ೫೮

ಹಾ ಯುಧಿಷ್ಠಿರ ರಾಯ ಶಿವ ಶಿವ
ವಾಯುಸುತ ಹಾ ಪಾರ್ಥ ಹಾ ಮಾ
ದ್ರೇಯರಿರ ಹಾಯೆನುತ ಹರೆದುದು ಸೇನೆ ದೆಸೆದೆಸೆಗೆ
ಬಾಯ ಬಿಟ್ಟುದು ದಿವಿಜಬಲ ನಿ
ರ್ದಾಯದಲಿ ನೆಲನಾಯಿತಲ ಕುರು
ರಾಯಗೆನುತಿರ್ದುದು ಜಗತ್ರಯವೊಂದು ನಿಮಿಷದಲಿ ೫೯

ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು ೬೦

ಮೆರೆದುದುರದಲಿ ಕೌಸ್ತುಭದ ಮಣಿ
ಮರಿಯನಿಳುಹಿದ ವೋಲು ಬೆಳಗಿನ
ತುರುಗಲಲಿ ತೂಗಾಡುತಿದ್ದುದು ಕೈದು ತೊಡವಾಗಿ
ಮುರಿದುದಗ್ಗದ ಭೀತಿ ಹರುಷದ
ಸೆರೆಗೆ ಬಿಡುಗಡೆಯಾಯ್ತು ಬಲು ಬೊ
ಬ್ಬಿರಿವುತಿರ್ದುದು ವೈರಿಕಟಕದೊಳರಸ ಕೇಳೆಂದ ೬೧

ಕೌತುಕವನಿದ ಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನೆ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ೬೨

ತಿರುಗಿ ಕಂಡನು ಕೃಷ್ಣನೀತನ
ಪರಿಯನರಿದನು ಮನದಲಿವನು
ತ್ತರವ ಕೇಳುವೆವೆಂದು ಪಾರ್ಥನ ನುಡಿಸಿದನು ನಗುತ
ಉರವಣಿಸುತಿದೆ ಮತ್ತೆ ಕರಿ ನಿಜ
ಕರದೊಳಾಯುಧವಿಲ್ಲ ಘನ ಸಂ
ಗರಕೆ ಬೇಸರು ತೋರಿತೇ ತನ್ನಾಣೆ ಹೇಳೆಂದ ೬೩

ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೊ ಕೃಷ್ಣ ನೀನೇ
ಕಾದು ವಾಘೆಯ ತಾಯೆನಲು ಮರು
ಳಾದನೈ ನರನೆನುತ ಮುರಾರಿಯಿಂತೆಂದ
(ಈ ಸಾಲು ಷಟ್ಪದಿಯ ಅಳತೆಗೆ ಕೂಡದು.
"ಳಾದನೈ ತಾ ನರನೆನುತ ಮುರ ವೈರಿಯಿಂತೆಂದ" ಇರಬೇಕು - ಸಂ) ೬೪

ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ ೬೫

ವಿಲಸದುಪನಿಷದುರು ರಹಸ್ಯವ
ತಿಳುಹಿದೆನು ನಿನಗೊಮ್ಮೆ ಮತ್ತೆಯು
ತಿಳಿದುದಿಲ್ಲಾ ಕ್ಷತ್ರತಾಮಸ ಬಿಡದು ಬುದ್ಧಿಯಲಿ
ಸುಲಭವಂತರ್ನಿಷ್ಠರಿಗೆ ನಿ
ಷ್ಕಳ ನಿರೂಪನನಂತ ನಿಜ ನಿ
ರ್ಮಳವೆನಿಪ ಪರಮಾತ್ಮ ಚಿನುಮಯ ರೂಪ ತಾನೆಂದ ೬೬

ಸಂಗಿಯಲ್ಲದ ವಿಮಳ ಪರಮಾ
ತ್ಮಂಗೆ ಲೀಲೆಯೊಳಾಯ್ತು ಮಾಯಾ
ಸಂಗವದರಿಂದಾಯ್ತು ನಾಲಕು ಮೂರ್ತಿಗಳು ತನಗೆ
ಅಂಗಿಯಂಗ ವಿಭಾಗವಿಲ್ಲದ
ಭಂಗ ಸನ್ಮಾತ್ರಂಗೆ ಭಾವಿಸ
ಲಂಗ ಕಲ್ಪನೆ ಮಿಥ್ಯವಲ್ಲಾ ಪಾರ್ಥ ಹೇಳೆಂದ ೬೭

ಇಂದು ಕಮಳಭವ ಪ್ರಜೇಶ್ವರ
ರೊಂದು ಮೂರುತಿ ವಿಷ್ಣು ಮನುಗಳು
ಸಂದ ಪಾರ್ಥಿವ ಲೋಕಪಾಲಕರೊಂದು ಮೂರ್ತಿಯದು
ಇಂದು ಶೇಖರನಗ್ನಿ ಯಮನರ
ವಿಂದಸಖ ಕಾಲಾಗ್ನಿ ಮೂರ್ತಿಯ
ರೊಂದು ಮೂರುತಿ ವಿಶ್ವದೊಳು ನಿಷ್ಯೂತ ಚೈತನ್ಯ ೬೮

ಇದುವೆ ಮತ ಕೆಲಬರಿಗೆ ಕೆಲಬರಿ
ಗಿದು ಮತವು ವಿವಿಧಾವತಾರದ
ಲುದಿಸುತೊಂದಿಹುದೊಂದು ಮೂರ್ತಿ ತಪೋ ವಿನೋದದಲಿ
ಉದಧಿಯೊಳು ವರ ಯೋಗ ನಿದ್ರಾ
ಸ್ಪದದಲೊಂದಿಹುದೊಂದಖಿಳ ವಿ
ಶ್ವದ ಸುಕೃತ ದುಷ್ಕೃತವನೀಕ್ಷಿಸುತಿಹುದು ಕೇಳೆಂದ ೬೯

ಕೆಲರು ಧರ್ಮಾರ್ಥಾದಿ ನಾಲುಕು
ಲಲಿತ ಮೂರ್ತಿಗಳೆಂಬರಿದರೊಳು
ಕೆಲರು ಜಾಗರಣಾದ್ಯವಸ್ಥೆಗಳೆಂಬ ಮೂರ್ತಿಗಳು
ತಿಳಿಯಲೋತಪ್ರೋತದಲಿ ನಿ
ಷ್ಕಳವೆ ಸಕಳವೆಯಾಗಿ ವಿಶ್ವದೊ
ಳೊಳಗು ಹೊರಗಾನಲ್ಲದಿಲ್ಲೆಲೆ ಪಾರ್ಥ ಕೇಳೆಂದ ೭೦

ಉದಧಿಶಯನನ ಮೂರ್ತಿ ಕಲ್ಪಾಂ
ತದಲಿ ಕರಗಿದ ಧರೆಯನುದ್ದರಿ
ಸಿದೆನು ಯಜ್ಞವರಾಹ ರೂಪಿನಲಂದು ಕರುಣದಲಿ
ಪದವ ಭಜಿಸಿಯೆ ಭೂಮಿ ತಾ ಬೇ
ಡಿದಳು ಪುತ್ರನನಾಕೆಯಲಿ ಜನಿ
ಸಿದನು ನರಕಾಸುರನವಧ್ಯನು ಸಕಲ ದಿವಿಜರಿಗೆ ೭೧

ಇದು ವರಾಹನ ದಾಡೆಯಿದನಾ
ತ್ರಿದಿಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದು(ದು?) ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ ೭೨

ತೀರಿತಾತನ ಶಕ್ತಿ ಚಾಪದ
ನಾರಿ ಬೆಸಲಾಗಲಿ ಮಹಾಸ್ತ್ರವ
ನಾರುಭಟೆಯಲಿ ಗಜವ ಮುರಿ ಕೆಡೆಯೆಸು ಮಹೀಸುತನ
ಹೋರದಿರು ಹೊಗು ಬವರಕೆನಲಸು
ರಾರಿಯಂಘ್ರಿಯೊಳೆರಗಿ ಕರುಣಾ
ವಾರಿಧಿಯೊಳಭಯವನು ಪಡೆದನು ತುಡುಕಿದನು ಧನುವ ೭೩

ಎಲವೆಲವೊ ಭಗದತ್ತ ಕಲಿತನ
ದಳವ ತೋರಿನ್ನೆನಗೆನುತ ಹೊಳೆ
ಹೊಳೆವ ಕೂರಂಬಿನಲಿ ಕೋದನು ಗಜದ ಮಸ್ತಕವ
ನಿಲುಕಿ ನೆತ್ತಿಯನೊಡೆದು ನಿಡು ಪ
ಚ್ಚಳಕೆ ಹಾಯ್ದವು ಬಾಣ ದಿಕ್ಕರಿ
ನೆಲಕೆ ದಾಡೆಯನೂರಿ ಕೆಡೆದುದು ಸುಪ್ರತೀಕಗಜ ೭೪

ಸುತ್ತಿದುರಗನ ಮಂದರಾಚಲ
ಕಿತ್ತು ಬೀಳ್ವಂದದಲಿ ಬರಿಕೈ
ಸುತ್ತಿ ಮಗ್ಗುಲನೂರಿ ಕೆಡೆದುದು ಸುಪ್ರತೀಕಗಜ
ಇತ್ತಲರ್ಜುನ ದೇವನುಗಿದನು
ಬತ್ತಳಿಕೆಯಲಿ ದಿವ್ಯ ಶರವನು
ತೆತ್ತಿಸಿದನವನುರವನಿಬ್ಬಗಿಯಾದುದರಿ ದೇಹ ೭೫

ಗಿರಿಯ ಶಿರದಲಿ ಹೂತ ಕಕ್ಕೆಯ
ಮರ ಮುರಿದು ಬೀಳ್ವಂತೆ ವಿಮಳಾ
ಭರಣ ಕಾಂತಿಯ ಕಡಲ ಕೋಮಲಕಾಯ ಭಗದತ್ತ
ಉರುಳಿದನು ಗಜದಿಂದ ಕುರುಬಲ
ಸರಿಯೆ ಸುರಕುಲ ಕುಸುಮ ವೃಷ್ಟಿಯ
ಸುರಿಯೆ ರಿಪುಸೇನೆಯಲಿ ಹರುಷದ ಹೊನಲು ಬಿರಿವರಿಯೆ ೭೬

ಹರಿದುದಗ್ಗದ ಸುಪ್ರತೀಕ
ದ್ವಿರದ ಭಗದತ್ತಾಂಕನವನಿಯೊ
ಳುರುಳಿದನು ದಳ ಮುರಿದುದಿನ್ನೇನೆನುತ ಬಲ ಬೆದರೆ
ನರನ ತಡೆದರು ಸುಬಲ ಸುತರಿ
ಬ್ಬರು ನೃಪಾಲ ಕುಮಾರರೈನೂ
ರುರುಬಿದರು ಗಾಂಧಾರ ರಾಜರು ಶಕುನಿಯೊಡಗೂಡಿ ೭೭

ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವೃಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ ೭೮

ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರ ಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ ೭೯

ತಿರುಗಿದರು ಕೌರವರು ದ್ರೋಣನ
ಬೆರಳ ಸನ್ನೆಗೆ ಸನ್ನೆಗಾಳೆಗ
ಳುರವಣಿಸಿತೆನೆ ತಂಬಟದ ನಿಸ್ಸಾಳ ರಭಸದಲಿ
ಮುರಿದರಿವರಳ್ಳಿರಿವ ಬೊಬ್ಬೆಯ
ಧರಧುರದ ಕಹಳೆಗಳ ಭೇರಿಯ
ಭರಿತ ರವದಲಿ ವೀರನಾರಾಯಣನ ಕರುಣದಲಿ ೮೦

(ಸಂಗ್ರಹ : ಸತ್ಯ,ಶೈಲ,ಮೋಹನ ಮತ್ತು ಪ್ರಿಯ - ಹಾಸನ)

ವಿರಾಟಪರ್ವ: ೦೫ ಐದನೆಯ ಸಂಧಿ

ಸೂ: ವೈರಿಭಟ ಸಂವರ್ತನೂತನ
ಭೈರವನು ಕಲಿಪಾರ್ಥ ಸಮರೋ
ದ್ಧಾರ ಸಾರಥಿಯಾದನಂದು ವಿರಾಟನಂದನಗೆ

ಕೇಳು ಜನಮೇಜಯ ಸುಯೋಧನ
ನಾಳು ಮುತ್ತಿತು ತುರುಗಳನು ಮೇ
ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ
ಕೋಲ ಸೂಟಿಯ ಸರಿವಳೆಗೆ ಗೋ
ಪಾಲ ಪಡೆ ಮುಗ್ಗಿದುದು ಗೋವರ
ಸಾಲ ಹೊಯ್ದರು ಕರ್ಣ ದುಶ್ಶಾಸನ ಜಯದ್ರಥರು ೧

ರಾಯ ಚೂಣಿಯ ಚಾತುರಂಗದ
ನಾಯಕರು ಮೇಳವಿಸಿ ಸಮರೋ
ಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು
ಸಾಯಲಲಸದ ಗೋವರನು ಕೈ
ಗಾಯದೆಸುತವ ಸೆರೆಯ ಕೊಂಡರು
ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ ೨

ಮೇಲುದಳಕಿದಿರಾಗಿ ಬರೆ ಹರಿ
ಗಾಳಗದೊಳೊಡೆಮುರಿದು ಗೋವರು
ಧೂಳಿಗೋಟೆಯಗೊಂಡರಮರರ ರಾಜಧಾನಿಗಳ
ಸಾಲರಿದು ಕೆಟ್ಟೋಡಿದರು ಗೋ
ಪಾಲನೊಬ್ಬನ ಹಿಡಿದು ಮೂಗಿನ
ಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ ೩

ಗರುವ ಗೋವರು ಹುಯ್ಯಲಿಗೆ ಹರಿ
ಹರಿದು ಕೆಡೆದರು ರಾಯ ಮೋಹರ
ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ
ಬಿರುದರನು ಬರಹೇಳು ಹೋಗೆನೆ
ಕರದ ಬಿಲ್ಲನು ಬಿಸುಟು ಬದುಕಿದ
ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ ೪

ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಭಾರಣಿ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ
ರಣವು ಕಿರಿದಲ್ಲೆನುತ ಢಗೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ ೫

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿ ನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಅಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ ೬

ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವ ರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ ೭

ಏನೆಲವೊ ತುದಿ ಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು
ಏನು ಭಯ ಬೇಡಿನ್ನು ಕಲಹನಿ
ಧಾನ ವಾರ್ತೆಯದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ ೮

ರಾಯ ತಾನೈತಂದನಾತನ
ನಾಯಕರು ಗುರುಸುತನು ಗುರು ಗಾಂ
ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು
ಜೀಯ ಬಿನ್ನಹ ದಳದ ತೆರಳಿಕೆ
ತಾಯಿಮಳಲಂಬುಧಿಗೆ ಮೋಹರ
ದಾಯತವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ ೯

ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಥವಾಜಿ (ಪಾ: ರಣವಾಜಿ) ರೂಢಿಯ ರಾಯ ರಾವುತರು
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ ೧೦

ಒಡ್ಡಿದರೊ ಪಡಿನೆಲನನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ
ಅಡ್ಡ ಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ ೧೧

ಒಳಗೆ ನೀ ಕಾದುವೊಡೆ ದುರ್ಗವ
ಬಲಿಸು ಬವರಕೆ ಹಿಂದುಗಳೆಯದೆ
ನಿಲುವ ಮನ ನಿನಗೀಗಲುಂಟೇ ನಡೆಯಬೇಕೆನಲು
ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡತುತ್ತರ ಬಿರುದ ಕೆದರಿದನು ೧೨

ನೂಕು ಕುನ್ನಿಯನಾಹವದ ಭೀ
ತಾಕುಳನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯಲೊಟ್ಟೈಸಿ ಬಂದೆನೆಗೆ
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ ೧೩

ಎನಿತು ಬಲ ಘನವಾದೊಡೇನದು
ನಿನಗೆ ಗಹನವೆ ಜೀಯ ಜಗದಲಿ
ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ
ಬಿನುಗು ರಾಯರ ಬಿಂಕ ಗೋವರ
ಮೊನೆಗೆ ಮೆರೆದೊಡೆ ಸಾಕು ನಿಂದಿರು
ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ ೧೪

ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ
ಸಂದಣಿಸಿ ರೋಮಾಂಚ ಕೆಲಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ ೧೫

ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ೧೬

ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೧೭

ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ ೧೮

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು ೧೯

ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದುರಿನಲಿ ೨೦

ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರಿಯತವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದಕುವನಾವನೆಂದನು ಖಂಡೆಯವ ಜಡಿದು ೨೧

ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ ೨೨

ಅರಿಯನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ ೨೩

ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ
ಗಡಣಿಸುವ ಸಾರಥಿಯನೊಬ್ಬನ
ಪಡೆದನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ ೨೪

ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ ೨೫

ಕೇಳಿದನು ಕಲಿಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ ೨೬

ನರನ ಸಾರಥಿಯೆಂದು ನೀನು
ತ್ತರೆಗೆ ಸೂಚಿಸಿ ತನ್ನನೀಗಳೆ
ಕರೆಸೆನಲು ಕೈಕೊಂಡು ದುರುಪದಿ ಬಂದಳೊಲವಿನಲಿ
ತರುಣಿ ಕೇಳರ್ಜುನನ ಸಾರಥಿ
ವರ ಬೃಹನ್ನಳೆ ಖಾಂಡವಾಗ್ನಿಯ
ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು ೨೭

ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣ ದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ ೨೮

ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವವ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ
ಮಂಗಳವಲೇ ಬಳಿಕ ರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ ೨೯

ಎಂದಳೀ ಸೈರೇಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ
ಹಿಂದುಗಳೆಯದೆ ಕರೆಸು ನಮ್ಮ ಬೃ
ಹನ್ನಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರೇಂಧ್ರಿಗಿಂತೆಂದ ೩೦

ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವದು ೩೧

ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ ೩೨

ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು
ಒಯ್ದುಕೊಳ್ಳನೆ ಮುನಿಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ ೩೩

ಅರಳುಗಂಗಳ ಬೆಳಗು ಹೊಯ್ದ
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ
ಸರಸತರ ಲಾವಣ್ಯ ರಸದಿಂ
ದುರಿ ಮಸಗೆ ಜನ ಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ ೩೪

ನಡೆ ನಡೆಯ ಬಂಧಿಸಿತು ನೋಟವ
ನುಡುಗಿಸಿತು ಕುಡಿನೋಟ ಸಖಿಯರ
ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು
ಕೆಡಿಸಿತಧರದ ರಾಗ ರಾಗವ
ಬಡತನವ ಹೆಚ್ಚಿಸಿತು ನಡುವಿನ
ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ ೩೫

ಕುರುಳ ತಿದ್ದುತ ಮೊಲೆಗೆ ಮೇಲುದ
ಸರಿವುತೇಕಾವಳಿಯ ಮೆಲ್ಲನೆ
ತಿರುಪಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ
ವರ ನಿಖಾರಿಯ ನಿರಿಯ ರಭಸದ
ಚರಣದಂದುಗೆ ದನಿಯ ಗಮನದ
ಭರದಿ ಕಿರುಬೆಮರಿಡುತ ನಡೆತರುತಿರ್ದಳಿಂದುಮುಖಿ ೩೬

ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪೆನೆನೆ ಮೀರಬಲ್ಲೆನೆ ಮಗಳೆ ಹೇಳೆಂದ ೩೭

ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ ೩೮

ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ ೩೯

ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ ೪೦

ಭರತ ವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈ ಮನ
ಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲೆಂದ ೪೧

ಆನಿರಲು ಭೀಷ್ಮಾದಿಗಳು ನಿನ
ಗೇನು ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ
ತಾನದಾರೆಂದರಿಯಲಾ ಗುರು
ಸೂನು ಕರ್ಣ ದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ ೪೨

ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ ೪೩

ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡು ಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ ೪೪

ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು ೪೫

ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣ ಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡು ಬಾಯೆಂದಳು ಸರೋಜಮುಖಿ ೪೬

ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು
ಹೊಸ ಪರಿಯ ಸಾರಥಿಯಲಾ ನಮ
ಗಸದಳವು ಸಂಗಾತ ಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ ೪೭

ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿ ಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ ೪೮

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ

ಸೂ. ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾನಟರಾಯ ಧೂರ್ಜಟಿಯ

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲಪತಿಗಳ ತೀರದಲಿ ತೊಳಲಿದರು ಬೇಸರದೆ ೧

ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ ೨

ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ ೩

ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ
ಆದೊಡಿದೆ ಕುರುರಾಜ ವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ ೪

ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ ೫

ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ ೬

ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ
ಭಾಸುರ ಕ್ರತುಶತದ ರೂಪ ವಿ
ಳಾಸವೊ ಶ್ರುತಿಕೋಟಿ ಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ ೭

ಹಾ ಮಹಾ ದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ ೮

ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ
ಯುವತಿ ಪದಕೆರಗಿದೊಡೆ "ಭೂಯಾತ್
ತವ ಮನೋರಥ" ವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ ೯

ಇದೆ ಪವಿತ್ರ ಪಲಾಶ ಪತ್ರದ
ಲುದಕವರ್ಘ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾ ಸಂಭವದಲೆಂದನು ಧರ್ಮನಂದನನು ೧೦

ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲಲೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ ೧೧

ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ ೧೨

ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ ೧೩

ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲು ನೋಟದಲಿ
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ ೧೪

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ ೧೫

ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸಿದನರಸಂಗೆ ೧೬

ಪಾರ್ಥ(ಪಾ: ಪ್ರಾರ್ಥ)ನೈದುವುದಿಂದ್ರ ಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ೧೭

ಇಂದುಮುಖಿಯನು ಭೀಮನನು ಯಮ
ನಂದನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ ೧೮

ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ ೧೯

ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿ ದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ೨೦

ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ ೨೧

ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳೆಂದ ೨೨

ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ ೨೩

ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ ೨೪

ಭ್ರಾತೃ ಮಿತ್ರ ವಿರೋಧಿಕಗೆ ಪಿತೃ
ಮಾತೃಘಾತಿಗೆ (ಪಾ: ಮಾತೃವಿಘಾತಿಗೆ) ಖಳನಿಗುತ್ತಮ
ಜಾತಿನಾಶಕನಿಂಗೆ (ಪಾ: ಜಾತಿನಾಶಕಂಗೆ) ವರ್ಣಾಶ್ರಮ ವಿದೂಷಕಗೆ
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ೨೫

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ೨೬

ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರಸಿ ಕಾಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ ೨೭

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ ೨೮

ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ ೨೯

ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ ೩೦

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ ೩೧

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ ೩೨

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ ೩೩

ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲಗತಿಯಲಿ ಮೇಲೆ ಪರರಿಗೆ
ಕಾಲಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ ೩೪

ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದಿನಾ ಹರಿವರುಷ ಸೀಮೆಯಲಿ
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾ ವನಾಂತರವ ೩೫

ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿ ನವಿಲ ಕೇಕಾ ರವದ ನಯಸರದ
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ ೩೬

ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳೆಂದ ೩೭

ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬ ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ೩೮

ವಿಲಸದಭ್ರದಲಿಹ ಮಹಾ ತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳೆಂದ ೩೯

ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ ೪೦

ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿ ಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂದ್ಯಾಭಿಮುಖದಲಿ
ತರಣಿಗರ್ಘ್ಯವನಿತ್ತು ದೇವವ್ರಜಕೆ ಕೈಮುಗಿದ ೪೧

ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಚೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ ೪೨

ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ
ಬಿಗಿದ ಬಿಲ್ಲಿನ ಬೆನ್ನ ಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸತಪಸಿ ತೊಡಗಿದನು ಬಲುತಪವ ೪೩

ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ ೪೪

ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ
ಆವುದಿದರಭಿಧಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗೆಳೆಂಬುದನರಿಯೆ ನಾನೆಂದ ೪೫

ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿಸಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ ೪೬

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ ೪೭

(ಸಂಗ್ರಹ: ಹೊಳೆನರಸಿಪುರ ಮಂಜುನಾಥ)

Sunday, February 21, 2010

ವಿರಾಟಪರ್ವ: ೦೪. ನಾಲ್ಕನೆಯ ಸಂಧಿ

ಸೂ: ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ ೧

ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು ೨

ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ ೩

ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ ೪

ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೇ
ಮೇಲಣವರಿಗೆ ಮರ್ತ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ ೫

ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ ೬

ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ ೭

ಪರಿಮಳವ ಕದ್ದೋಡವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ೮

ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬುವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ ೯

ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯನುಯೆಂದ ೧೦

ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು ೧೧

ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ೧೨

ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ
ಎಲ್ಲಿ ನೆಲೆಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ ೧೩

ಅತ್ತ ಹಿಮಗಿರಿ ಮೇಲೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯ ದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ ೧೪

ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ೧೫

ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ರ್ವ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ ೧೬

ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳಬಂದುದೈ ನೀ ಸಮಯದೊಳು ಕರೆಸಿ
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ ೧೭

ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ ೧೮

ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ ೧೯

ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವೆಂದನಾ ಕರ್ಣ ೨೦

ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು ೨೧

ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ ೨೨

ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು ೨೩

ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ಕಟಕಾಳಿ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿ ಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ ೨೪

ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವೊಂಟರೊಗ್ಗಿನಲಿ ೨೫

ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ ೨೬

ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರನ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ ೨೭

ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ ೨೮

ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದುವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ ೨೯

ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ ೩೦

ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ ೩೧

ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ ೩೨

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ ೩೩

ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ ೩೪

ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ದಾಳಿಯಿಟ್ಟನು ತೆಂಕ ದೆಸೆಗಾಗಿ ೩೫

ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ ೩೬

ಆಳು ಸುತ್ತಲು ಕಟ್ಟಿ ತುರುಗಳ
ಕೋಳ ಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು ೩೭

ಮಿಸುಪ ಕಂಬಳಿ ಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ ೩೮

ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡೆಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶುಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ ೩೯

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ ೪೦

ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಲಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ ೪೧

ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು ೪೨

ಅವಧಿ ತೀರಲಿ ಮೇಣು ಮಾಣಲಿ
ಎನಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು ೪೩

ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತ ಕೋಮಲಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ ೪೪

ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ ೪೫

ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದದು ಪರಬಲವ ೪೬

ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕದು ಕೂಡೆ ಕುರುಸೇನೆ ೪೭

ಕುದುರೆ ಹೊಕ್ಕವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ ೪೮

ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ ೪೯

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು ೫೦

ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತುರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ ೫೧

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ ೫೨

ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು ೫೩

ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು ೫೪

ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು ೫೫

ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು ೫೬

ಉಗ್ರ ಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ
ವಿಗ್ರಹವ ಜಯಿಸೆನಲು ಕುರುಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ ೫೭

ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ ೫೮

ವಲಲ ಮೆಚ್ಚಿದೆನೈ ಮಹಾ ದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡು ನಂದನರು ೫೯

ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು ೬೦

ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ೬೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

ದ್ರೋಣಪರ್ವ: ೦೨. ಎರಡನೆಯ ಸಂಧಿ

ಸೂ: ಉಭಯ ಕಟಕಾಚಾರ್ಯ ಪಾಂಡವ
ವಿಭುವ ಹಿಡಿತಹೆನೆಂದು ಕೌರವ
ಸಭೆಗೆ ಭಾಷೆಯ ಕೊಟ್ಟು ಸಮರಕೆ ದ್ರೋಣನನುವಾದ

ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಂಗಳಿಗಿರುಳು ಕೌರವನಿತ್ತನೋಲಗವ
ಹೇಳು ಕರ್ಣ ದ್ರೋಣ ರಿಪು ಭೂ
ಪಾಲಕನನರೆಯಟ್ಟಿದನು ಗಡ
ಕಾಳೆಗದ ಹದನೇನೆನುತ ಕುರುರಾಯ ಬೆಸಗೊಂಡ ೧

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ ೨

ಅಳವಿಗೊಟ್ಟನು ನೃಪತಿ ಗುರು ಕೈ
ಚಳಕದಲಿ ತೆಗೆದೆಸುತ ನಡೆದಿ
ಟ್ಟಳಿಸಿ ಹಿಡಿಹಿಂಗೊಳಗುಮಾಡಿ ವಿಘಾತಿಯಲಿ ತಡೆಯೆ
ಎಲೆಲೆ ದೊರೆ ಸಿಕ್ಕಿದನು ಸಿಕ್ಕಿದ
ನಳಿದುದೋ ದ್ರೌಪದಿಯ ಸಿರಿಯೆಂ
ಬುಲುಹ ಕೇಳುತ ಪಾರ್ಥ ಬಂದನು ಬಿಟ್ಟ ಸೂಠಿಯಲಿ ೩

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ ೪

ಕೇಳು ಸೇನಾನಾಥ ಕುರುಪತಿ
ಕೇಳು ಕೇಳೈ ಕರ್ಣ ಸುಭಟರು
ಕೇಳಿರೈ ದೇಶಾಧಿನಾಥರು ವೀರ ಪರಿವಾರ
ನಾಳೆ ಮೊದಲಾಗರ್ಜುನನ ನಾವ್
ಕಾಳೆಗಕೆ ಬರಲೀಯೆವೆಮ್ಮಯ
ಕಾಳೆಗದಲೇ ಸವೆಯಬೇಹುದು ಪಾರ್ಥನಂಬುಗಳು ೫

ಹಿಂದೆ ಹಿಡಿ ನೀ ಮೇಣು ಬಿಡು ಯಮ
ನಂದನನನೊಲಿದಂತೆ ಮಾಡಿ
ಲ್ಲಿಂದ ಮೇಲರ್ಜುನನ ಭಯ ನಿಮಗಿಲ್ಲ ನಂಬುವುದು
ಎಂದು ಶಪಥವ ತಮ್ಮಿನಿಬರೈ
ತಂದು ವಿಪ್ರರ ಕರೆಸಿ ವೈದಿಕ
ದಿಂದ ರಚಿಸಿದರಗ್ನಿಯನು ಮಾಡಿದರು ಭಾಷೆಗಳ ೬

ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರುವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಂದು ಸಾರಿದರು ೭

ನುಡಿದ ನುಡಿಗೇಡುಗನ ವಿಪ್ರರ
ಮಡುಹಿದಾತನನಮಳ ಗುರುವಿನ
ಮಡದಿಯರಿಗಳುಪಿದನ ಸಾಕಿದ ಪತಿಗೆ ತಪ್ಪಿದನ
ಹಿಡಿದ ಶರಣಾಗತರ ಕಾಯದೆ
ಬಿಡುವವನ ನಾಸ್ತಿಕನ ವಿಪ್ರರ
ಜಡಿದು ನುಡಿದನ ಗತಿಗಳಾಗಲಿ ರಣದೊಳೋಡಿದರೆ ೮

ಎಂದು ಸಮಸಪ್ತಕರು ತಮ್ಮೊಳ
ಗಂದು ಶಪಥವ ಮಾಡಿ ವಿಪ್ರರ
ಮಂದಿಗಿತ್ತರು ಗೋ ಹಿರಣ್ಯ ಸಮಸ್ತ ವಸ್ತುಗಳ
ಇಂದು ರವಿ ಜಲ ವಹ್ನಿಯನಿಲ ಪು
ರಂದರಾದಿ ಸುರೌಘ ಸಾಕ್ಷಿಗ
ಳೆಂದು ಸೂಳೈಸಿದರು ಭುಜವನು ಸಿಡಿಲು ತನಿಹೆದರೆ ೯

ಇವರ ಮೊದಲಿಗ ಸತ್ಯರಥನಿಂ
ತಿವನ ಬಳಿ ರಥ ಹತ್ತು ಸಾವಿರ
ವಿವನೊಡನೆ ಸೇರುವೆಯ ರಥ ಮೂವತ್ತು ಸಾವಿರದ
ಭುವನವೀರ ಸುಶರ್ಮ ಮಾಳವ
ಯವನರತಿರಥ ಹತ್ತು ಸಾವಿರ
ಬವರಕಿಂತೈವತ್ತು ಸಾವಿರ ರಥಗಳೊಗ್ಗಾಯ್ತು ೧೦

ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ ೧೧

ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹವದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ ೧೨

ಸಸಿ ವರುಣ ದಿಗುವಧುವನಾಲಿಂ
ಗಿಸಲು ಕುಮುದಿನಿ ಖತಿಯ ಹಿಡಿದಳು
ಮಸುಳಿದವು ತಾರೆಗಳು ರಜನೀನಾರಿ ಹಿಂಗಿದಳು
ಒಸೆದು ಕಮಲಿನಿ ನಗಲು ಮಿಗೆ ಹುರು
ಡಿಸುತ ಪೂರ್ವದಿಶಾನಿತಂಬಿನಿ
ನಿಶಿತ ಕೋಪದ ಕಿಡಿಯನುಗುಳಿದಳೆನಲು ರವಿ ಮೆರೆದ ೧೩

ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘಮ್ಮಿಡೆ ದೆಸೆದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ ೧೪

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ ೧೫

ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ ೧೬

ನಡೆಯಿ ನೀವಾಹವಕೆ ಮೆಚ್ಚಿಸಿ
ಕೊಡುವೆನೀ ಬಹೆನೆಂದು ಮುರಹರ
ನೊಡನೆ ಮುದದಲಿ ರಥಕೆ ಬಂದನು ಬಿಲ್ಲನೊದರಿಸುತ
ನುಡಿದನಂತಕಸೂನು ಕಳಶಜ
ಹಿಡಿಯಲೆಂದೇರಿಸಿದ ನುಡಿ ತ
ನ್ನೊಡನೆ ನಿಂದಾವವನು ಕಾದುವ ಪಾರ್ಥ ಹೇಳೆಂದ ೧೭

ಕರಸಿದರೆ ಕಾಳೆಗದೊಳೆನಗೆಡೆ
ಮುರಿಯಬಾರದು ನಿಮ್ಮ ಕಾಹಿಂ
ಗಿರಲಿ ನೀಲನು ಸತ್ಯಜಿತು ಕೌಶಲ ಶತಾನೀಕ
ವರ ಘಟೋತ್ಕಚ ದ್ರುಪದ ಕೈಕೆಯ
ರಿರಲಿ ಪವನಜ ನಕುಲ ಸಹದೇವ
ವರಿಗೆ ದ್ರೋಣನ ಬವರವಾಗಲಿ ಎಂದನಾ ಪಾರ್ಥ ೧೮

ಎಂದು ಸಮಸಪ್ತಕರ ಮೋಹರ
ಕಂದು ತಿರುಗಿದ ಪಾರ್ಥನಿತ್ತಲು
ಸಂದಣಿಸಿತರಿ ರಾಯದಳ ಜಲರಾಸಿ ಜರಿವಂತೆ
ಮುಂದೆ ತವಕಿಗ ಭಟರ ತೆರಳಿಕೆ
ಯಿಂದ ಮೊರೆವ ಗಭೀರ ಬೇರಿಯ
ಮಂದರದ ಮುರಿಗಡಲ ಗಜರಿನೊಲೊದರಿತರಿಸೇನೆ ೧೯

ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ ೨೦

ಗರುಡನಾಕಾರದಲಿ ಬಲವನು
ಸರಿಸ ಮಿಗೆ ಮೋಹಿದನು ವಿಹಗನ
ಶಿರಕೆ ಕೃಪ ಕುರುರಾಯ ದುಶ್ಯಾಸನನ ನಿಲಿಸಿದನು
ಕರೆದು ಭೂರಿಶ್ರವನ ಮಾದ್ರೇ
ಶ್ವರನ ಭಗದತ್ತನ ಸುಬಾಹುವ
ನಿರಿಸಿದನು ಬಲದೆರಕೆಯೊಳಗಕ್ಷೋಹಿಣೀ ಬಲವ ೨೧

ವಿಂದ್ಯನಶ್ವತ್ಥಾಮ ಕರ್ಣನ
ನಂದನರು ಕಾಂಭೋಜ ಕೌಶಲ
ಸಿಂಧು ನೃಪರಕ್ಷೋಹಿಣಿಯ ತಂದೆಡದ ಪಕ್ಕದಲಿ
ನಿಂದುದಲ (ಪಾ: ನಿಂದುದಲಾ) ಮೋಹರದ ಜೋಕೆಯ
ಹಿಂದೆ ಲಕ್ಷ ಕಳಿಂಗ ಘಟೆಗಳು
ಸಂದಣಿಸಿದವು ದ್ರೋಣ ನಿಂದನು ಬಲದ ಕಾಹಿನಲಿ ೨೨

ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದೊರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ ೨೩

ಕರಸಿ ಧೃಷ್ಟದ್ಯುಮ್ನ ನಿಜ ಮೋ
ಹರವ ರಚಿಸಿದನರ್ಧ ಚಂದ್ರೋ
ತ್ಕರ ವಿಳಾಸದೊಳಳ್ಳಿರಿವ ನಿಸ್ಸಾಳ ಕೋಟಿಗಳ
ಧುರಕೆ ನಿಗುರುವ ಭಟರ ತೂಳುವ
ಕರಿಘಟೆಯ ಕೆಲಬಲಕೆ ಸೂಸುವ
ತುರುಗ ರಾಜಿಯ ತೇರ ಗಮನದ ಗಜರು ಘಾಡಿಸಿತು ೨೪

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿ ಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ ೨೫

ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ ೨೬

ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾವ್ತರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ ೨೭

ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತನವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ ೨೮

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ ೨೯

ಬಿಲ್ಲನೊದರಿಸಿ ಕೆಲಬಲದ ಭಟ
ರೆಲ್ಲರಿಗೆ ಕೈವೀಸಿ ಚೌಪಟ
ಮಲ್ಲ ನುಡಿದನು ತನ್ನ ಸಾರಥಿಗಿತ್ತು ವೀಳೆಯವ
ಖುಲ್ಲ ರಿಪುಗಳ ಬಿಸುಟು ಹೊದರಿನ
ಹೊಳ್ಳುಗರನೊಡೆಹಾಯ್ಸಿ ಧರ್ಮಜ
ನೆಲ್ಲಿ ಮೋಹರದೆಗೆವನತ್ತಲೆ ರಥವ ಹರಿಸೆಂದ ೩೦

ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವೃಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮೆಳೆಯ ಹೊಕ್ಕಂತೆ ೩೧

ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈ ತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು ೩೨

ಫಡ ಫಡಾನಿರುತಿರಲು ರಾಯನ
ಹಿಡಿದವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ
ಬಿಡು ರಥವನಾ ದ್ರೋಣನಿದಿರಲಿ
ತಡೆಯೆನುತ ಸಾರಥಿಗೆ ಸೂಚಿಸಿ
ತುಡುಕಿದನು ಬಲುಬಿಲ್ಲ ದೃಷ್ಟದ್ಯುಮ್ನನಿದಿರಾದ ೩೩

ಬಲ್ಲೆನೀತನ ಬಲುಹ ಸಾಕೀ
ಯೊಳ್ಳೆಗನನೆಡಕಿಕ್ಕಿ ಹಾಯಿಸು
ಕಲ್ಲೆಯಲಿ ಮುರಿನೂಕು ನಡೆ ಭೂಪತಿಯ ಸಮ್ಮುಖಕೆ
ನಿಲ್ಲದೊಡ್ಡೈಸೆನುತ ಸಾಹಸ
ಮಲ್ಲ ಸಾರಥಿಗರುಹೆ ಬಲವ
ಲ್ಲಲ್ಲಿ ಭಯಗೊಳೆ ದ್ರೋಣ ಹೊಕ್ಕನು ರಾಯಮೋಹರವ ೩೪

ಶಿವಶಿವಾ ಸಿಕ್ಕಿದನು ಸಿಕ್ಕಿದ
ನವನಿಪತಿಯೆನಲೌಂಕಿದರು ಗಜ
ನಿವಹವಗಿದಬ್ಬರಿಸೆ ಮುಕ್ಕುರುಕಿದವು ಕುದುರೆಗಳು
ತವಕದಲಿ ಬದ್ದರದ ಬಂಡಿಗ
ಳವುಚಿದವು ತಲೆವರಿಗೆಗಳಲಾ
ಹವವ ಹೊಕ್ಕುದು ಪಾಯದಳವಾಚಾರ್ಯನಿದಿರಿನಲಿ ೩೫

ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯವಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ ೩೬

ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿದ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯ ಸಾಗರವ ೩೭

ಬಲವ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಆಳಿದರರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ ೩೮

ಫಡ ಫಡುರವಣೆ ಬೇಡ ತೆಗೆ ಬಾ
ಯ್ಬಡಿಕತನವಿದು ಗುರುವರಂಗವೆ
ಕಡುಹ ನಾಲಗೆಯರುಹಲೇತಕೆ ಕೈಯ ಧನುವಿರಲು
ಒಡನೆ ತಾನಿರುತಿರಲು ರಾಯನ
ಹಿಡಿವ ಭಟನೇ ನೀನೆನುತ ಬಿಲು
ದುಡುಕಿ ಮುಂದೆ ಶಿಖಂಡಿ ದ್ರೋಣನ ರಥಕೆ ಮಾರಾಂತ ೩೯

ಅಕಟ ಸಿಂಹಕೆ ಮಲೆತುದೋ ಜಂ
ಬುಕನು ನೋಡೈ ಸೂತ ಭೀಷ್ಮನ
ಶಕುತಿಗಂದಿದಿರಾದ ಮದದಲಿ ಮುಂದುಗಾಣನಿವ
ಚಕಿತ ಚಾಪ ಶಿಖಂಡಿ ನಿಲು ಸಾ
ಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆನುತ ಕಣೆಗೆದರಿದನು ದ್ರೋಣ ೪೦

ಗುರುವಿನಂಬಿನ ಬಂಬಲನು ಕ
ತ್ತರಿಸಿ ಕೈದೋರಿದನು ದಿಗುತಟ
ಬಿರಿಯೆ ದಿಙ್ಮಯವಾದವಂಬುಗಳೇನನುಸುರುವೆನು
ಅರಿ ಶಿಖಂಡಿಯ ಕೈಚಳಕ ಕಾ
ಹುರವಲೇ ಲೇಸಾಯ್ತು ಬಿಲ್ಲಿನ
ಭರವಸಿಕೆಯಹುದೆನುತ ಕೈಕೊಂಡೆಚ್ಚನಾ ದ್ರೋಣ ೪೧

ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ ೪೨

ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲ್ಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರ (ನು?) ಶತಾನೀಕಾದಿ ನಾಯಕರು ೪೩

ಬರಿಯ ಕಾರ್ಪಣ್ಯದಲಿ ಮೇಘದ
ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆಲೆ ಕುಂತೀ ಕುಮಾರಕನೆ
ಇರಿದು ಮೆರೆವುದು ಮಹಿಮೆಯನು ಕೈ
ಮರೆಯದಿರು ಮೈಮಾರಿಗಳ ಮು
ಕ್ಕುರಿಕಿದಿವದಿರ ತಿದ್ದಿ ಬಹೆನಿದೆಯೆನುತ ತೆಗೆದೆಚ್ಚ ೪೪

ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತ ಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳೆಂದ ೪೫

ಕೋಲಿಗೊಬ್ಬರ ಕೆಡಹಿದನು ಪಾಂ
ಚಾಲ ಬಲದಲಿ ಸತ್ಯಜಿತುವನು
ಮೇಲಣಾಹವದೊಳು ಶತಾನೀಕ ಕ್ಷಿತೀಶ್ವರನ
ಸೀಳಿದನು ಮಿಡುಕುವ ಮಹಾರಥ
ರೇಳು ನೂರನು ತುರಗ ಗಜ ಕಾ
ಲಾಳನಳಿದುದನಾವನೆಣಿಸುವನಹಿತ ಸೇನೆಯಲಿ ೪೬

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಂತಿಯ ಜಠರವಲ್ಪವಲೆ
ನಿನ್ನುನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ ೪೭

ರಾಯನಾಪತ್ತಿಂದ ಮುನ್ನವೆ
ಸಾಯಬೇಹುದು ತನಗೆನುತಲಡ
ಹಾಯಿದನು ಕಲಿ ಮತ್ಸ್ಯನೃಪ ನಿಜಬಂಧುಗಳ ಸಹಿತ
ನೋಯಬೇಹುದು ಮುನ್ನ ತಾವೆನು
ತಾಯತಿಕೆಯಲಿ ಪಂಚ ಕೈಕೆಯ
ರಾಯುಧದ ಬೆಳಗಳ್ಳಿರಿಯ ನೂಕಿದರು ತೇರುಗಳ ೪೮

ತಲೆಗೆ ಕೊಂಡೆವು ಹಣವನಿನ್ನಿದ
ನುಳುಹಿಕೊಂಡಿರಲಾಗದೆಂದಿ
ಟ್ಟಳಿಸಿ ಹೊಕ್ಕುದು ಯವನ ಸಂವೀರರು ಸುಷೇಣಕರು
ಅಳವಿಗಳುಕುವುದಾಳುತನದ
ಗ್ಗಳಿಕೆಯೇ ಸುಡಲೆನುತ ಮನ ಮುಂ
ಕೊಳಿಸಿ ಕುಂತೀಭೋಜ ಹೊಕ್ಕನು ಸಕಲದಳ ಸಹಿತ ೪೯

ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ ೫೦

ತೊಲಗು ವಿಪ್ರಾಧಮ ಸುಯೋಧನ
ಬಲದೊಳಗೆ ಬಹು ಭಾಷೆತನದಲಿ
ಗಳಹಿ ಬಂದರೆ ಹಿಡಿಯ ಬಲ್ಲೈ ಧರ್ಮನಂದನನ
ಗಳದ ಸತ್ವವನರಿಯದದ್ರಿಗೆ
ತಲೆಯನೊಡ್ಡುವರೇ ವೃಥಾ ಕಳ
ಕಳಿಸಿ ನುಡಿವರೆ ಮಾನ್ಯರೆನುತಿದಿರಾದನಾ ದ್ರುಪದ ೫೧

ದಿಟ್ಟನಹೆಯೋ ದ್ರುಪದ ಹಾ ಜಗ
ಜಟ್ಟಿಗಳಿಗುಪಹಾಸ್ಯವೇ ಗರಿ
ಗಟ್ಟಿದಿರಿ ನೀವ್ ಹಿಡಿಯಲೀವಿರೆ ಧರ್ಮನಂದನನ
ತೊಟ್ಟ ಜೋಹಕೆ ತಕ್ಕ ನುಡಿಗಳ
ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ ಎನುತ ಕರೆದನು ಸರಳ ಸರಿವಳೆಯ ೫೨

ದರ್ಪದಾಭರಣಕ್ಕೆ ಸೂಸಿದ
ವೊಪ್ಪಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿ ಕದಂಬವನೀತನಂಬುಗಳು ೫೩

ಮರುಳೆ ಮಂಜಿನ ಮಳೆಗೆ ಕುಲಗಿರಿ
ಕರಗುವುದೆ ನೀನೆಚ್ಚ ಶರ ಪಂ
ಜರಕೆ ಸಿಲುಕುವ ವೀರರೇ ಪಾಂಡವ ಮಹಾರಥರು
ಕೊರಳ ರಕ್ಷಿಸಿಕೊಳ್ಳೆನುತ ಚ
ಪ್ಪರಿಸಿ ದ್ರುಪದ ವಿರಾಟರೆಚ್ಚರು
ಸರಳ ರಶ್ಮಿಯ ಮಾಲೆ ಮುಕ್ಕುರುಕಿದವು ದಿಗುತಟವ ೫೪

ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ದಾರೆಗಳ ಕಿಡಿ
ಹೊರಳಿಗಳ ಹೊಗರಂಬು ಹೊಕ್ಕವು ಪಾಂಡು ಸೈನ್ಯದಲಿ ೫೫

ನರರ ಕಡಿಯಾನೆಗಳ ಕಡಿಯಲಿ
ಬೆರಸಿದವು ತೇಜಿಗಳ ಕರುಳಲಿ
ಕರಿ ಘಟೆಯ ಕರುಳುಗಳು ತೊಡಕಿದವುಡಿದ ತೇರುಗಳು
ಜರಿದ ಜೋಡಿನೊಳೊಂದಿದವು ಕ
ತ್ತರಿಸಿದಾಯುಧ ಕಡಿದ ಸಿಂಧದ
ಹೊರಳಿಯಲಿ ಹೋಳಿದವು ನಿಮಿಷಕೆ ಪಾಂಡು ಸೇನೆಯಲಿ ೫೬

ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ ೫೭

ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೈಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು ೫೮

ಘಾಯವಡೆದನು ದ್ರುಪದ ಮತ್ಸ್ಯನ
ಬಾಯೊಳೊಕ್ಕುದು ರಕುತ ಕೈಕೆಯ
ರಾಯುಧಂಗಳನೊಪ್ಪಿಸಿದರಿಳಿದೋಡಿದರು ರಥವ
ಸಾಯಲಾದನು ಧೃಷ್ಟಕೇತು ವಿ
ಡಾಯಿಗೆಟ್ಟನು ಭೋಜನಿತ್ತಲು
ರಾಯನಲ್ಲಿಗೆ ರಥವ ದುವ್ವಾಳಿಸಿದನಾ ದ್ರೋಣ ೫೯

ತೀರಿತಿನ್ನೇನರಿ ನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿನಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥ ಕುಮಾರರನುವಾಯ್ತು ೬೦

ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘು ಭುಜಬಲ ಭಾನು ನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ ೬೧

ಗೆಲುವು ನಮಗೆಲ್ಲಿಯದು ಧರ್ಮಜ
ಸಿಲುಕುವುದು ತಾನಿಲ್ಲ ಕೃಷ್ಣನ
ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು
ನೆಲನ ತಿಣ್ಣವ ತಿದ್ದಲೋಸುಗ
ಸುಳಿದನರಿಯಾ ಕೃಷ್ಣನೀತನ
ಬಲದವರಿಗೆಂತಹುದು ಬಾಧೆಗಳೆಂದನಾ ಕರ್ಣ ೬೨

ಗಿರಿಯ ಕೊರಳಿಗೆ ವಜ್ರಮಣಿಯಾ
ಭರಣವೇ ದಳ್ಳುರಿಯ ಜೋಡುಗ
ಳರಗಿನೋಲೆಯಕಾರರಿಗೆ ಸುಯಿಧಾನವೇ ನೃಪತಿ
ವರ ತಿಮಿರ ರಾಜಂಗೆ ಮಂಗಳ
ಕರವೆ ಆ ರವಿ ಕೃಷ್ಣ ಭಕ್ತರ
ಪರಿಭವವು ಜೀವರಿಗೆ ಪಥ್ಯವೆ ಎಂದನಾ ಕರ್ಣ ೬೩

ಇರಲಿ ಮೇಣ್ ದೂರದಲಿ ಹತ್ತಿರೆ
ಯಿರಲಿ ತನ್ನವರೆಂದರತ್ತಲೆ
ಹರಹಿಕೊಂಬನು ಕೃಷ್ಣನದು ತನಗೇರಿಸಿದ ಬಿರುದು
ಹರಿ ಸಮೀಪದೊಳಿಲ್ಲ ದ್ರೋಣಂ
ಗರಸ ಸಿಲುಕಿದನೆಂದು ಬಗೆದೈ
ಮರುಳೆ ಮುರವೈರಿಯ ಕಟಾಕ್ಷದ ಕಾಹು ಘನವೆಂದ ೬೪

ಆ ಹದನದಂತಿರಲಿ ನಮ್ಮೀ
ಯಾಹವಕೆ ಕಲಿ ಭೀಮ ಸಾತ್ಯಕಿ
ರೂಹುದೋರಿದರದೆ ಘಟೋತ್ಕಚ ಪಾರ್ಥಸುತರೊಡನೆ
ಸಾಹಸಿಕರೊಗ್ಗಾಯ್ತು ದ್ರೋಣಂ
ಗೀ ಹದನು ಭಾರಾಂಕವೀಗಳೆ
ಬೇಹ ಸುಭಟರ ಕಳುಹು ಕಾಳೆಗಕೆಂದನಾ ಕರ್ಣ ೬೫

ಎನಲು ನೂಕಿದನರಸ ದುಶ್ಯಾ
ಸನ ಜಯದ್ರಥನಿನತನುಜ ಗುರು
ತನುಜ ಕೃಪ ಮಾದ್ರೇಶ ಭಗದತ್ತಾದಿಗಳು ಸಹಿತ
ತನತನಗೆ ನಾಯಕರು ದ್ರೋಣನ
ಮೊನೆಯ ಬಲಿದರು ಹಿಡಿ ಯುಧಿಷ್ಠಿರ
ಜನಪತಿಯನೆನುತುರುಬಿದರು ತುರುಬಿದರು ಪರಬಲವ ೬೬

ಫಡಫಡಾರೋ ಧರ್ಮಪುತ್ರನ
ಹಿಡಿವವರು ಬಾಯ್ಬಡಿಕರೈ ಕಾ
ಳ್ಗೆಡೆದಡೇನಹುದೆನುತ ಹೊಕ್ಕನು ಭೀಮನುರವಣಿಸಿ
ಕಡಲ ಕಡುಹಿನ ಬಹಳ ಲಹರಿಯ
ನೊಡೆಮುರಿವ ಮಂದರದವೋಲವ
ಗಡಿಸಿ ಹೊಕ್ಕನು ಗದೆಯ ಘಾಡದ ಹೊದರ ಹೊಯ್ಲಿನಲಿ ೬೭

ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡೆಜೋಡು ಬಲು ಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬಿದುದು ನಿಬ್ಬರವಾಗಿ ಬಹುವಿದ ವಾದ್ಯ ನಿರ್ಘೋಷ ೬೮

ತೆತ್ತಿಗರ ಬರಹೇಳು ಭೀಮಂ
ಗೆತ್ತಣದು ಜಯವೆನುತ ಸುಭಟರು
ಮುತ್ತಿಕೊಂಡರು ಮುಸುಕಿದರು ಮೆತ್ತಿದರು ಸರಳುಗಳ
ಕತ್ತಲೆಯ ಹೇರಾಸಿ ಸೂರ್ಯನ
ನೊತ್ತಿ ತಹ ದಿನವಾಯ್ತಲಾ ಎನು
ತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ ೬೯

ಒಂದು ಕಡೆಯಲಿ ಭೀಮ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಶರ
ವೊಂದು ಕಡೆಯಲಿ ಪಾರ್ಥನಂದನ ಭೀಮನಂದನರು
ಒಂದು ಕಡೆಯಲಿ ನಕುಲ ಪಾಂಡವ
ನಂದನರು ಮತ್ತೊಂದು ದೆಸೆಯಲಿ
ಮುಂದುವರಿದರು ಮುರಿದರರಿಗಳ ಹೊದರ ಹೊಸ ಮೆಳೆಯ ೭೦

ಥಟ್ಟು ನುಗ್ಗಾಯಿತು ವಿರೋಧಿಗ
ಳಿಟ್ಟಣಿಸುತಿದೆ ದ್ರೋಣನೊಬ್ಬನ
ಬಿಟ್ಟು ನೋಡುವುದುಚಿತವಲ್ಲೆನುತೆಡಬಲನ ನೋಡಿ
ಬಿಟ್ಟನಾಹವಕಹಿತಬಲ ಜಗ
ಜಟ್ಟಿ ಕೌರವ ನೃಪತಿ ರಥವನು
ಹೊಟ್ಟುಗರ ತೆಗೆ ಹೋಗ ಹೇಳೆಂದೆಚ್ಚನತಿರಥರ ೭೧

ಮಗನ ತೆಗೆಯೋ ಸಾತ್ಯಕಿಯ ಹೆರ
ತೆಗೆಯ ಹೇಳೋ ಬೇಡ ನಕುಲಾ
ದಿಗಳ ನೂಕಭಿಮನ್ಯುವನು ಹಿಮ್ಮೆಟ್ಟ ಹೇಳೆನುತ
ಮೊಗದ ಹೊಗರಿನ ಕೆಂಪನುಗುಳ್ವಾ
ಲಿಗಳ ದಂತದಲೌಕಿದಧರದ
ಬಿಗಿದ ಹುಬ್ಬಿನ ಭೀಮ ಹೊಕ್ಕನು ಗದೆಯ ತಿರುಗಿಸುತ ೭೨

ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ ೭೩

ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವದುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರುಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಶಾಸನಾದಿಗಳು ೭೪

ವರ ವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಯಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತ
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ ೭೫

ಎಚ್ಚ ಶರವನು ಗದೆಯಲಣೆದಿಡು
ಗಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚು ಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳೆಂದ ೭೬

ಸರಿದರೀ ನಾಲುವರು ರಾಯನ
ಮರಳಲೀಯದೆ ಮತ್ತೆ ಮಾರುತಿ
ಹರಸಿದನು ನಿಜರಥವನತಿರಥರೊಡ್ಡು ಲಟಕಟಿಸೆ
ದೊರೆಯ ತೆಗಯೋ ನೂಕು ನೂಕಲಿ
ಕರಿಘಟೆಯನೆನೆ ಮುಗಿಲ ಮೋಹರ
ಧರೆಗೆ ತಿರುಗಿದವೆನಲು ಜೋಡಿಸಿದರು ಗಜವ್ರಜವ ೭೭

ವಂಗನಂಬಟ್ಟನು ವರಾಳ ಕ
ಳಿಂಗ ಬರ್ಬರರಾನೆಗಳ ಥ
ಟ್ಟಿಂಗೆ ಕೈವೀಸಿದರು ಕೊಂಡರು ನಾಳಿವಿಲ್ಲುಗಳ
ವಂಗಡದಲೆಂಬತ್ತು ಸಾವಿರ
ತುಂಗ ಗಜಘಟೆ ಕವಿದವಿದಕಿ
ನ್ನಂಗವಿಸುವವರಾರೆನುತ ಗಜಬಜಿಸಿತರಿಸೇನೆ ೭೮

ಆಳ ಹೆದರಿಸಿ ನುಡಿವ ನಾಯ್ಗಳ
ಬೀಳ ಬಡಿ ಬಡಬಾಗ್ನಿ ನೊರಜಿನ
ದಾಳಿಗಳುಕುವುದುಂಟೆ ಫಡ ಫಡಯೆನುತ ಬೊಬ್ಬಿರಿದ
ಕಾಲ ದಂಡವ ತಿರುಹಿ ಭುವನದ
ಲೂಳಿಗವ ಮಾಡುವ ಕೃತಾಂತನ
ಹೋಲುವೆಯ ಹೊಸಬಿಗನು ಹೊಕ್ಕನು ಭೀಮನುರವಣಿಸಿ ೭೯

ಗದೆಯಲಪ್ಪಳಿಸಿದನು ಕೋದಂ
ಡದಲಿ ಕಾದಿದ ಮುದ್ಗರದಲೊರ
ಸಿದನು ಲೌಡಿಯಲರೆದನುರೆ ತರಿದನು ಕೃಪಾಣದಲಿ
ಒದೆದು ಕೆಲವನು ಮುಷ್ಟಿಯಲಿ ಮೋ
ದಿದನು ಕೆಲವನು ನಿಖಿಳ ಶಸ್ತ್ರಾ
ಸ್ತ್ರದಲಿ ಕಾದಿದನನಿಲಸುತನಿಭಬಲವ ಬರಿಕೈದು ೮೦

ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿ ಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ೮೧

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗ ಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ ೮೨

(ಸಂಗ್ರಹ: ಸತ್ಯ, ಶೈಲ, ಮೋಹನ ಮತ್ತು ಪ್ರಿಯ - ಹಾಸನ)

Tuesday, February 9, 2010

ಅರಣ್ಯಪರ್ವ: ೦೩. ಮೂರನೆಯ ಸಂಧಿ

ಸೂ. ಬರುತ ಕ೦ಡನು ಕಣ್ವನಾಶ್ರಮ
ವರದ ಜಂಬೂಫಲವ ಮಾರುತಿ
ತರಲು ಯಮಸುತ ಹಲುಬೆ ಮುರರಿಪು ಶಾಖೆಗಡರಿಸಿದ

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳ ಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ ೧

ಬರಬರಲು ಮುಂದೊಂದು ವನದೊಳು
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗುಳನೀಕ್ಷಿಸುವ ಮರಿದುಂಬಿಗಳ ಮೇಳವದ
ಪರಿಪರಿಯ ಮರ ಪೂ ಫಲಂಗಳ
ನಿರದೆ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ಬನದ ಸುತ್ತಲು ರಾಯ ಕೇಳೆಂದ ೨

ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ
ಕುಂಭಿನಿಯೊಳುಳ್ಳಖಿಲ ವೃಕ್ಷ ಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತ ನಂದನದ ೩

ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳೆಂದ ೪

ಬಂದು ಭೂಪತಿ ಕೊಳನ ತೀರದೆ
ನಿಂದು ತಮಗಾಶ್ರಯದ ಠಾವಹು
ದೆಂದು ಭೀಮಂಗರುಹಲಾ ಕ್ಷಣವಾತನೈತಂದು
ತಂದು ತಳಿರನು ಪರ್ಣಶಾಲೆಗ
ಳಂದದಲಿ ರಚಿಸಿದನು ಭೂಸುರ
ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ ೫

ದಿನಪನಪರಾಂಬುಧಿಯನೈದಲು
ವನಜ ಮುಗಿದವು ಚಕ್ರವಾಕದ
ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ
ಕನಕಮಯ ವರ ರಥವನಡರಿದು
ದನುಜರನು ಸಂಹರಿಸೆ ಕಮಲಿನಿ
ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ ೬

ಋಷಿಗಳೊಳು ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲ್ಲಿಯೆ (ಪಾ: ಪ್ರಸರದಲಿ) ಸ್ನಾನ ಭೋಜನ ಕಾಲದಲಿ ಪಾನ
ಮಿಸುಪ ಸುತಿಯ ವಿಲಾಸಗಳ ಸಂ
ತಸದಿ ಕೇಳ್ವ ಸಮಾಸಪೂರಿತ
ವಸುಮತೀಧರ ಯಮಜನೆಸೆದನು ಭೂಪ ಕೇಳೆಂದ ೭

ಇರುತಿರಲು ಕಲಿಭೀಮ ಮೃಗಯಾ
ತುರದಲಖಿಳ ಕಿರಾತರುಗಳೊಡ
ವೆರಸಿ ಹೊಕ್ಕನು ಗಿರಿತರುವ್ರಜ ಬಹಳ ಕಾನನವ
ವರಹ ಮರೆ ಸಾರಂಗ ಪೆರ್ಬುಲಿ
ಕರಡಿ ವೃಕ ಶಾರ್ದೂಲ ಕೇಸರಿ
ಕರಿ ಕಳಭವೋಡಿದವು ದೆಸೆದೆಸೆಗೈದಿ ತಲ್ಲಣಿಸಿ ೮

ಹಾಸಗಳಹರಿವಿಡಿವ ನಾಯ್ಗಳ
ಬೀಸುವಲೆಗಳ ಕಾಲಗಣ್ಣಿಯ
ಸೂಸುವಲೆಗಳ ಧನು ಸರಳ ಭಾಸುರದ ಕುಪ್ಪಸದ
ಕೇಶದಲಿ ತಳಿರುಗಳ ಬಿಗಿದು ವಿ
ಳಾಸದಲಿ ಹೊರವಂಟು ಹೆಬ್ಬಲೆ
ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ ೯

ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ ೧೦

ಬಂದನತಿಬೇಂಟೆಯಲಿ ಚರಿಸುತ
ನಿಂದು ಹತವಾದಖಿಳ ಮೃಗಗಳ
ನಂದು ವ್ಯಾಧರ ನಿಕರಕಿತ್ತನು ಪವನಜಾತ್ಮಜನು
ತಂದರವದಿರು ತವತವಗೆ ಪರಿ
ತಂದು ತರು ಶಿಖಿಯಿಂದ ದಹಿಸಿದ
ರಂದು ಮಾಂಸವನೊಲಿದು ಭಕ್ಷಿಸಿದರು ವಿನೋದದಲಿ ೧೧

ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರು ನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ
ಗೊಂದಣದ ತರು ಮಧ್ಯದಲ್ಲಿಹು
ದೊಂದು ಜಂಬೂವೃಕ್ಷ ಮೆರೆದಿರೆ
ನಿಂದು ನೋಡಿದು ಭೀಮ ವಿಸ್ಮಯಗೊಂಡನಾ ಕ್ಷಣಕೆ ೧೨

ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ತಾ
ನಿದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ
ಗದೆಯ ಕಕ್ಷದಲೌಕಿ ಮಾರುತಿ
ಮಧುರಿಪುವ ನೆನೆವುತ್ತಲಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ನಿಮಿಷದಲಿ ೧೩

ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು ೧೪

ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ ೧೫

ವರುಷಕೊಂದೇ ಫಲವಹುದು ಅದ
ನರಿತು ಯೋಗಧ್ಯಾನದಲಿ ಕಂ
ದೆರೆದು ಕರ ಸಂಪುಟವನರಳಿಚಲಾಗಲಾ ಫಲವು
ಇರದೆ ಹಸ್ತದೊಳಿಳಿಯಲಾ ಮುನಿ
ಹರುಷದಿಂದದ ತಳೆದು ಕೊಂಬನು
ಪರಶಿವ ಧ್ಯಾನೈಕ ದೃಷ್ಟಿಯೊಳಿಪ್ಪನಾ ಮುನಿಪ ೧೬

ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ೧೭

ಕಂಡು ಯಮಸುತನತಿ ಭಯದಿನಿದ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ
ಚಂಡವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ ೧೮

ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ ೧೯

ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ರಾವಣಾಂತಕನೆ
ಮನಸಿಜನ ಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು ೨೦

ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ
ಮಂದಮತಿ ಪವಮಾನುಜನ ಕತ
ದಿಂದ ಪಾಂಡು ಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ ೨೧

ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನದುರಿತ ದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು ೨೨

ತೆಗೆದು ತಕ್ಕೈಸಿದನು ಭೂಪನ
ಮಿಗೆ ಹರುಷದಲಿ ಭೀಮ ಪಾರ್ಥರ
ನೆಗಹಿ ಮೈದಡವಿದನು ಮಾದ್ರೀಸುತರ ದ್ರೌಪದಿಯ
ನಗುತ ಋಷಿಜನ ವಿಪ್ರ ಧೌಮ್ಯಾ
ದಿಗಳನುಚಿತೋಕ್ತಿಯಲಿ ಮನ್ನಿಸು
ತಗಧರನು ನೋಡಿದನು ಜಂಬೂಫಲದ ಘನತರುವ ೨೩

ಕಾಳು ಮಾಡದಿರಕಟಕಟ ನೀವ್
ಮೇಲನರಿಯದೆ ಋಷಿಯ ಶಾಪವ
ನಾಲಿಸದೆ (ಪಾ: ನಾಲಿಸಿದೆ) ವರ ಮೂರ್ಖತನದಲೆ ನೆನೆದಿರನುಚಿತವ
ಏಳಿ ಫಲವನು ತೊಟ್ಟ ಸರಿಸಕೆ
ಕಾಲದಲಿ ತಂದಿರಿಸಿ ನಿಮ್ಮನು
ಕೂಲಧರ್ಮಂಗಳನು ಬೇಗದಿ ಹೇಳಿ ನೀವೆಂದ ೨೪

ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳೆನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ ೨೫

ಶ್ಲೋಕ -
ಮಾತೃವತ್ ಪರದಾರಾಣಿ
ಪರದ್ರವ್ಯಾಣಿ ಲೋಷ್ಠವತ್
ಆತ್ಮವತ್ ಸರ್ವಭೂತಾನಿ
ಯಃ ಪಶ್ಯತಿ ಸ ಪಶ್ಯತಿ = ೧

ಪರಸತಿಯೆ ನಿಜಜನನಿ ಪರ ಧನ
ವಿರದೆ ಲೋಷ್ಠವು ಜೀವರಾಶಿಯ
ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ
ನಿರುತವೆನೆ ಫಲ ಧರೆಯ ಬಿಟ್ಟಂ
ತರದೊಳೊಮ್ಮೊಳ ನೆಗೆಯೆ ಮುರಹರ
ಮರುತಸುತ ಬಾರೆನಲು ನುಡಿದನು ಮುಗಿದು ಕರಯುಗವ ೨೬

ಶ್ಲೋಕ -
ಪ್ರಾಣಮೇವ ಪರಿತ್ಯಜ್ಯ
ಮಾನಮೇವಾಭಿರಕ್ಷತು
ಆನಿತ್ಯಮಧ್ರುವಂ ಪ್ರಾಣಂ
ಮಾನಮಾಚಂದ್ರತಾರಕಂ = ೨

ಜೀವವೀಕ್ಷಣವಿಳಿದು ಹೋಗಲಿ
ಕಾವುದಭಿಮಾನವನು ನಿತ್ಯದ
ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ
ನಾವು ಬೇರೊಂದರಿಯೆವಿದ್ದುದ
ದೇವರಿಗೆ ಬಿನ್ನವಿಸಿದೆವುಯೆನ
ಲಾವ ಬೇಗದಲಡರಿದುದೊ ಫಲವರಸ ಕೇಳೆಂದ ೨೭

ಏನಭಿಮತವು ಪಾರ್ಥ (ನಿನ್ನ) ನಿ
ಧಾನವನು ನುಡಿಯೆನಲು ಹೇಳುವೆ
ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ
ಧ್ಯಾನದಲಿ ಕೈಮುಗಿದು ಶಂಕರ
ನೀನೆ ಗತಿಯೆಂದೆನುತಲಾ ಶಶಿ
ಭಾನು ದಿಗುಪಾಲರಿಗೆ ನಮಿಸುತ ಕೇಳಿ ನೀವೆಂದ ೨೮

ಶ್ಲೋಕ -
ನಿಮಂತ್ರಣೋತ್ಸವೋ ವಿಪ್ರಾಃ
ಗಾವೋ ನವ ತೃಣೋತ್ಸವಾಃ
ಸುಭರ್ತಾರೋತ್ಸವಾ ನಾರ್ಯಃ
ಅಹಂ ಕೃಷ್ಣ ರಣೋತ್ಸವಃ = ೩

ಪರಗೃಹದ ಭೋಜನಕೆ ವಿಪ್ರರು
ಪರಿಣಮಿಸುವೋಲ್ ಪಶು ಸಮೂಹವು
ಇರದೆ ನವತೃಣದಿಂದ ತುಷ್ಟಿಯನೈದುವಂದದಲಿ
ವರಸತಿಯು ನಿಜಪತಿಯ ಕಂಡಾ
ಹರುಷವಹುದೆನಗಾಹವದಲೆಲೆ
ಹರಿಯೆಯೆನೆ ಬೇಗದಲಿ ಫಲವಡರಿತ್ತು ನಿಮಿಷದಲಿ ೨೯

ಶ್ಲೋಕ -
ಧರ್ಮೋ ಜಯತು ನಾಧರ್ಮಃ
ಸತ್ಯಂ ಜಯತು ನಾನೃತಂ
ಕ್ಷಮಾ ಜಯತು ನ ಕ್ರೋಧೋ
ವಿಷ್ಣುರ್ಜಯತು ನಾಸುರಃ = ೪

ಧರ್ಮವನು ನೆರೆ ಜಯಿಸಲರಿಯದ
ಧರ್ಮ ಸತ್ಯವ ಮೀರಲರಿವುದೆ
ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ ಭಾವಿಸಲು
ಕರ್ಮಹರ ಕೃಷ್ಣನನು ಗೆಲುವರೆ
ದುರ್ಮತಿಗಳಹ ಅಸುರರೆನಲಾ
ಧರ್ಮತತ್ವವ ನಕುಲ ವಿರಚಿಸಲೈದಿತಾ ಫಲವು ೩೦

ಶ್ಲೋಕ -
ಸತ್ಯಂ ಮಾತಾ ಪಿತಾ ಜ್ಞಾನಂ
ಧರ್ಮೋಭ್ರಾತಾ ದಯಾ ಸಖಾ
ಶಾಂತಿ:ಪತ್ನೀ ಕ್ಷಮಾಸೂನು
ಷ್ಷಡೈತೇ ಮಮ ಬಾಂಧವಾಃ = ೫

ಸತ್ಯವೇ ನಿಜಮಾತೆ ಜ್ಞಾನವೆ
ನಿತ್ಯವಹ ಪಿತ ಧರ್ಮವನುಜನು
ಮತ್ತೆ ದಯವೇ ಮಿತ್ರ ಶಾಂತಿಯೆ ಪತಿ(ಯು) ಕ್ಷಮೆಸೂನು
ಸತ್ಯವನು ಸಹದೇವ ನುಡಿಯಲಿ
ಕತ್ಯಧಿಕಫಲ ಮೇಲೆ ಚಿಗಿಯಲು
ಮತ್ತೆ ಮುರರಿಪು ದ್ರುಪದಸುತೆ ಬಾಯೆಂದನುಚಿತದಲಿ ೩೧

ಶ್ಲೋಕ -
ಸುಂದರಂ ಪುರುಷಂ ದೃಷ್ಟ್ವಾ
ಪಿತರಂ ಭ್ರಾತರಂ ಸುತಂ
ಯೋನಿರ್ದ್ರವತಿ ನಾರೀಣಾಂ
ಸತ್ಯಂ ಬ್ರೂಮೀಹ ಕೇಶವ = ೬

ಭಾವವಹ ಪುರುಷರನು ಕಾಣುತ
ಭಾವಿಸಲು ಪಿತ ಸುತರ ಅನುಜರ
ಠಾವಿನಲಿಯಾದರೆಯು ಯೋನಿದ್ರವಣ (ಪಾ: ಯೋನಿರ್ದ್ರವಣ) ಸತಿಯರಿಗೆ
ಭಾವದಲಿ ಮರೆವಿಡಿದು ನುಡಿಯಲಿ
ಕಾ ವಿಗಡ ಫಲವಡರದಿರುತಿರೆ
ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ ೩೨

ಶ್ಲೋಕ -
ಪಂಚ ಮೇ ಪತಯಸ್ಸಂತಿ
ಷಷ್ಠಸ್ತು ಮಮ ರೋಚತೇ
ಪುರುಷಾಣಾಮಭಾವೇನ
ಸರ್ವ ನಾರ್ಯಾಃ ಪತಿವ್ರತಾಃ = ೭

ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥಿವಿಯಲಿ ಪರಪುರುಷನು ದು
ರ್ಮತಿಯೊಳೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು ೩೩

ಹರುಷ ಮಿಗೆ ಋಷಿಜನಕೆ ಧೌಮ್ಯನು
ಕರಗಳನು ನೆಗಹುತ ಯುಧಿಷ್ಠಿರ
ಧರಣಿಪತಿ ಕೇಳ್ ಕೃಷ್ಣನಿರೆ ನಿನಗಾವುದರಿದೆಂದು
ಇರದೆ ದೇವನ ಪಾದ ಪಂಕಜ
ಕೆರಗಿದುದು ಮುನಿನಿಕರ ಬುಧಜನ
ನಿರತ ಪರಮಾನಂದದಿಂದೈದಿದರು ತದ್ವನವ ೩೪

ಮುನಿಪ ಕಣ್ವನು ಕಣ್ದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನೆದು ಬಿದ್ದುದು ಪಣ್ಣು ಕಂಡನು ನಗುತ ಮನದೊಳಗೆ
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ ೩೫

ಇದಿರೊಳಿರಿಸಿದನಾ ಫಲವ ಸಂ
ಮುದದಿ ಹೊಂಪುಳಿಯೋಗಿ ಮುನಿಯಾ
ಪದುಮನಾಭಂಗೆರಗಿ ತೆಗೆ ನೀ ಫಲವನೆಂದೆನಲು
ಮದನಪಿತ ನಸುನಗುತ ಮುನಿಪನ
ಹದುಳ ಮಿಗೆ ಸೈಪಿಟ್ಟು ನೆಗಹಿದ
ನುದಿತ ಫಲವನು ಹಂಚ ಹೇಳಿದನಾ ನೃಪಾಲಂಗೆ ೩೬

ಬರಿಸಿ ಋಷಿಗಳನವರವರ ತರ
ವರಿದು ಕೊಡಿಸಿದನುಳಿದುದನು ಭೂ
ಸುರ ಸಹೋದರರಿಂಗೆ ಮುನಿಸತಿಯರಿಗೆ ದ್ರೌಪದಿಗೆ
ಮುರಹರಗೆ ತನ್ಮುನಿಪ ಕಣ್ವಂ
ಗಿರಿಸಿ ಕೈವೀಸಿದೊಡೆ ಫಲವನು
ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ ೩೭

ಪಾರಣೆಯನುರೆ ಮಾಡಿ ಮುನಿಪ ಮ
ಹೀರಮಣನನು ಬೀಳುಕೊಟ್ಟನು
ದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು
ಸಾರವಹ ಸುಸ್ಥಾನಕೈದಿದ
ನಾರು ಭಾವಿಸಬಲ್ಲರಾ ಮುರ
ವೈರಿಯನುಪಮ ಮಹಿಮೆಗಳ ಭೂಪಾಲ ಕೇಳೆಂದ ೩೮

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರವೇದ ಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ ೩೯

ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ
ಉರುತರೋತ್ತರ ಸಿದ್ಧಿ ನಿಮಗಿ
ನ್ನಿರದೆ ಫಲಿಸುವುದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗಮನನಾದ ೪೦

ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥಯಮಳ ದ್ರೌಪದಾದೇವಿ
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಾಯಣ ೪೧

(ಸಂಗ್ರಹ: ಹೊಳೆನರಸಿಪುರ ಮಂಜುನಾಥ)

Monday, February 8, 2010

ದ್ರೋಣಪರ್ವ: ೦೧. ಒಂದನೆಯ ಸಂಧಿ

ಸೂ: ರಾಯ ಕಟಕ ಪಿತಾಮಹನ ತರು
ವಾಯಲಭಿಷೇಕವನು ಕೌರವ
ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ.

ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲು ಪೋಗಿನ ಕಥೆಯನವಧಾನದಲಿ ಕೇಳೆಂದ ೧

ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು
ಮೃತ್ಯು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ ೨

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರರ ನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ ೩

ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ ೪

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ ೫

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ ೬

ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡ ಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ ೭

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ ೮

ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರವುದು ಬಂಧುವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ ೯

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ ೧೦

ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ ೧೧

ಗಾಹು ಕೊಳ್ಳದು ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ ೧೨

ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾ ಮಂತ್ರಿಗಳು ಬಂದರು ರಾಯನೋಲಗಕೆ ೧೩

ತೊಡರ ಝಣಝಣ ರವದ ಹೆಗಲಲಿ
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡಿಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ ೧೪

ಇತ್ತ ಬಾರೈ ಕರ್ಣ ಕುರುಕುಲ
ಮತ್ತವಾರಣ ಕುಳ್ಳಿರೈ ಬಾ
ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು
ಹತ್ತಿರಾತನ ನಿಲಿಸಿ ಬಟ್ಟಲ
ಲಿತ್ತು ವೀಳೆಯವನು ಸುಯೋಧನ
ಕೆತ್ತುಕೊಂಡಿರೆ ನುಡಿಸಿದನು ಕಲಿಕರ್ಣನವನಿಪನ ೧೫

ಜೀಯ ದುಗುಡವಿದೇಕೆ ಬಿಡು ಗಾಂ
ಗೇಯನಳುಕಿದರೇನು ಕಾಣೆಯ
ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು
ರಾಯ ಜಗಜಟ್ಟಿಗಳು ರಣದೊಳ
ಜೇಯರಿದೆ ಪರಿವಾರವನು ನಿ
ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ ೧೬

ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟ ಮ
ಹಾರ್ಣವಕೆ ಬಿಡು ನಿನ್ನ ವಿಕ್ರಮ ಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ ೧೭

ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ ೧೮

ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ ೧೯

ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ ೨೦

ಸರಳ ಮಂಚವ ಹೊದ್ದಿ ಭೀಷ್ಮನ
ಚರಣಕಮಲವ ಹಿಡಿದು ನೊಸಲಿನೊ
ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ
ಕರುಣಿಸೈ ಗಾಂಗೇಯ ಕರುಣಾ
ಶರಧಿಯೈ ಖಳತಿಲಕ ಕರ್ಣನ
ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ ೨೧

ಎನಲು ಹೃದಯಾಂಬುಜದ ಪೀಠದ
ವನಜನಾಭ ಧ್ಯಾನಸುಧೆಯಲಿ
ನೆನದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ ೨೨

ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ ೨೩

ಗಾರುಗೆಡೆದೆನು ನಿಮ್ಮನೋಲೆಯ
ಕಾರತನದುಬ್ಬಿನಲಿ ತನಿ ಮದ
ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ
ದೂರ ಹೊತ್ತೆನು ರಣದ ಮೀಸಲಿ
ನೇರು ತಪ್ಪಿತು ನೀಲಮಣಿ ತಲೆ
ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ ೨೪

ತನುಜ ತಪ್ಪೇನದಕೆ ಕಾಳೆಗ
ವೆನಗೆ ತಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳೆಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ ೨೫

ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ ೨೬

ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯೆಂದವನನುಳುಹುವ ಹದನ ಮಾಡೆಂದ ೨೭

ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನ ವಂದಿಗರಿರಲು ನೂಕದು
ತನ್ನ ಸಾಹಸವೆಲ್ಲಿ ಪರಿಯಂತಹುದು ಕದನದಲಿ
ಗನ್ನಕಾರನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ ೨೮

ಆಲವಟ್ಟದ ಗಾಳಿಯಲಿ ಮೇ
ಘಾಳಿಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ ೨೯

ಲೇಸನಾಡಿದೆ ಕರ್ಣ ದಿಟ ನೀ
ನೀಸು ಸಮ್ಯಜ್ಞಾನಿಯೆಂಬುದ
ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ
ಆ ಸುಯೋಧನಗರುಹಿ ಸಂಧಿಯ
ನೀ ಸಮಯದಲಿ ಘಟಿಸು ನೀನೆನ
ಲೈಸ ಮೀರನು ಪಾಂಡವರ ಸಂಪ್ರತಿಯ ಮಾಡೆಂದ ೩೦

ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ ೩೧

ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ದಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ ೩೨

ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ ೩೩

ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರದ ಹಿಡಿಯಬೇಹುದು ವೈರಿ ರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ ೩೪

ಪ್ರಭೆಯ ದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ ೩೫

ಜಾಗು ಜಾಗುರೆ ಕರ್ಣ ಪರರ ಗು
ಣಾಗಮನ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝು ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ ೩೬

ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ ೩೭

ಸಕಲ ಸಾವಂತರು ಮಹೀಷಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟ ರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ ೩೮

ಅರಸ ಬೇಡೈ ವರವನೆನ್ನನು
ಕರೆದು ಮಿಗೆ ಪತಿಕರಿಸೆ ಬಳಿಕಾ
ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ
ಹೊರೆ ಹೊಗದೆ ಹೇಳೆನಲು ನಗೆ ಮೊಗ
ವರಳಿ ಹೊಂಪುಳಿಯೋಗಿ ಕೌರವ
ರರಸ ನುಡಿದನು ಕಟ್ಟಿಕೊಡಿ ಧರ್ಮಜನ ನನಗೆಂದ ೩೯

ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ ೪೦

ಕೊಡುವಡಿದು ವರವಲ್ಲದಿದ್ದರೆ
ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ
ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ
ಹಿಡಿದು ಬಿಗಿವೆನು ಪಾರ್ಥನನು ಕೆಲ
ಕಡೆಗೆ ತಪ್ಪಿಸಿ ಧರ್ಮಪುತ್ರನ
ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ ೪೧

ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾ ಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡೆತಲೆಗೆ ಹಗರಿಕ್ಕಿದನು ಚಂದ್ರಮನ ೪೨

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ ೪೩

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡೆತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದವು ಕುಣಿವುತಿದ್ದುವು ಕೂಡೆ ವಾಜಿಗಳು ೪೪

ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಯಕೆ
ಅಳವು ಕಿರಿದರಿರಾಯರಿಗೆ ದಿಗು
ವಳೆಯವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ ೪೫

ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿ ಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ ೪೬

ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿ(ಪಾ: ತ್ತಿ)ದ್ದವು ಗೌರುಗಹಳೆಗಳು ೪೭

ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿ ಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡು ವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ ೪೮

ಕಳನ ಗೆಲಿದುದು ಬಂದು ಕೌರವ
ಬಲ ಯುಧಿಷ್ಠಿರರಾಯ ದಳ ಮುಂ
ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ
ಬಲಿದರೊಡ್ಡನು ಮಂಡಳಾಕೃತಿ
ಗೊಳಿಸಿ ಕೌರವರಿವರು ಥಟ್ಟನು
ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ ೪೯

ಚಾರಿಗಳು ಬಲವೆರಡರೊಳಗೊ
ಯ್ಯಾರದಲಿ ತೂಗಿದವು ಚೂಣಿಯ
ವೀರರುರವಣಿ ಮಿಗಿಲು ಹೊಯ್ದರು ಹೊಕ್ಕು ಪರಬಲವ
ಮಾರಿ ಮೊಗವಡದೆರೆದವೊಲು ಜ
ಜ್ಝಾರ ಮಾಸಾಳುಗಳು ನಿಜ ದಾ
ತಾರನವಸರಕೊದಗಿ ಹಣವಿನ ಋಣನ ನೀಗಿದರು ೫೦

ಬಿಟ್ಟಸೂಠಿಯೊಳೇರಿ ಕುದುರೆಗ
ಳಟ್ಟಿದವು ಕಿವಿಗೌಂಕಿದುಂಗುಟ
ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು
ನಿಟ್ಟುವರಿಯಲು ಕೂಡೆ ರಥ ಸಾ
ಲಿಟ್ಟು ಹರಿದವು ಬಿಡದೆ ಸುಭಟರು
ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ ೫೧

ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈ ಮಾಡಿ ಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರ ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ ೫೨

ತೆಗೆಸು ದೊದ್ದೆಯನುರವಣಿಸದಿರಿ
ವಿಗಡ ಸುಭಟರು ಸಾಹಸದ ತನಿ
ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು
ಹೊಗುವ ಬಿನುಗನು ಹೊಯ್ಯದಿರಿ ತೆಗೆ
ತೆಗೆಯೆನುತ ಸಾವಿರ ಮಹಾ ರಥ
ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ ೫೩

ಸಾರಿರೈ ಸಾಹಸಿಕರಿರ ಕೆಲ
ಸಾರಿರೈ ಪಾಂಚಾಲ ಮತ್ಸ್ಯರು
ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ
ಸಾರಿರೈ ನಮ್ಮೊಡನೆ ಕೈ ಮನ
ವಾರೆ ಕಾದುವ ಬಳಿಕ ಮೊದಲೊಳು
ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ ೫೪

ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನ(ಪಾ: ಧೃಷ್ಟದ್ನುಮ್ನ)ನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ ೫೫

ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ ೫೬

ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದನು ಪಾಂಚಾಲ ನಾಯಕರು
ಮುಸುಡ ಬಿಗುವಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು ೫೭

ರಾಯರೊಳು ಪಾಂಚಾಲರುಬ್ಬಟೆ
ಕಾಯಗಟ್ಟಿತು ಪೂತು ಮಝ ಕುರು
ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ
ನೋಯಿಸಿದನುರವಣಿಸಿ ಹರಿತಹ
ನಾಯಕರನುಬ್ಬೆದ್ದ ಬಿರುದರ
ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ ೫೮

ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ ೫೯

ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ ೬೦

ಅರಸ ಫಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರುವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸಿ ಧನುವನೊದರಿಸಿ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ ೬೧

ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವದುಭುತವ
ನಿಮಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನಮಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ ೬೨

ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಅರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ ೬೩

ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆ ಅಕಟೆನುತ ಹಲುಮೊರೆದನಾ ದ್ರೋಣ ೬೪

ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಪಲುಗುಣನಡ್ಡವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ ೬೫

ಎರಡು ಬಲದಲಿ ವೀರ ನೀ ಮಡ
ಮುರಿಯಲಿವನೇಸರವನಂಧಾ
ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೋ
ಗುರುಗಳಿದಿರಲಿ ವೀರವೇ ಸಾ
ಕಿರಲಿ ಮೂದಲೆಯೆನುತಲಾ ಬಿಲು
ದಿರುವ ಮಿಡಿದೈದಿದರು ನಾಸಾವಿರ ಮಹಾರಥರು ೬೬

ಫಡ ಫಡವೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದನಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ ೬೭

ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿ ಸಾವಿರ ಮಹಾರಥರ ೬೮

ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ ೬೯

ನಿಮಗೆ ಸದರವೆ ಪಾರ್ಥನಲೆ ವಿ
ಕ್ರಮದರಿದ್ರರಿರಾ ವೃಥಾ ಸಂ
ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ
ಸಮರವಿಜಯತ್ಯಾಗಿಯೇ ತಾ
ನಮರಪತಿ ನಂದನನು ಸಾಕೀ
ಕುಮತಿಗಳ ತಡೆಯದಿರಿ ಹೋಗಲಿ ಎಂದನಾ ದ್ರೋಣ ೭೦

ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ ೭೧

(ಸಂಗ್ರಹ : ಸತ್ಯನಾರಾಯಣ)