ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, August 15, 2010

ಶಲ್ಯಪರ್ವ: ೦೧. ಮೊದಲನೆಯ ಸಂಧಿ

ಸೂ.ರಾಯಕೇಳೈ ಕದನದಲಿ ರಾ
ಧೇಯನವಸಾನದಲಿ ಕೌರವ
ರಾಯ ದಳಪತಿಯಾಗಿ ಹೊಕ್ಕನು ಶಲ್ಯನಾಹವವ

ಹೇಳರೇ ಭೀಷ್ಮಾದಿ ಹಿರಿಯರು
ಮೇಲುದಾಯವ ಬಲ್ಲವರು ಹೆ
ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ
ಮೇಲಣಾಹವದೊಳಗೆ ದೇಹವ
ಬೀಳುಕೊಂಡನು ಶಲ್ಯನಲ್ಲಿಂ
ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ ೧

ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ ೨

ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ ೩

ಹದುಳಿಸೈ ರಾಜೇಂದ್ರ ನೀ ಬಿ
ತ್ತಿದ ವಿಷದ್ರುಮ ಫಲಿತವಾಯಿತು
ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು
ಕದನದಲಿ ಸುತೆ(ಸುತ?)ನಿಧಿಯ ಹೋಗಾ
ಡಿದೆ ನಿಜಾನ್ವಯ ಕಲ್ಪತರುವನು
ಮದಕರಿಗೆಮಾರಿದೆಯೆನುತ ನೆಗಹಿದನು ಭೂಪತಿಯ ೪

ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ
ಅಳಲಶ್ರವಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ ೫

ಅಹುದು ಸಂಜಯ ಶೋಕಶಿಖಿ ನೆರೆ
ದಹಿಸಿತೆನ್ನನು ಬೆಂದ ವಸ್ತುಗೆ
ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ
ಮಿಹಿರಸುತ ಪರಿಯಂತ ಕಥೆ ನಿ
ರ್ವಹಿಸಿ ಬಂದುದು ಶಲ್ಯಕೌರವ
ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ ೬

ತೆಗೆದುದಾಚೆಯಲವರ ಬಲ ಜಗ
ದಗಲದುಬ್ಬಿನ ಬೊಬ್ಬೆಯಲಿ ಮೊರೆ
ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ
ಬಿಗಿದಮೋನದ ಬೀತ ಹರುಷದ
ಹೊಗೆಯ ಮೋರೆಯ ಹೊತ್ತುವೆದೆಗಳ
ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ ೭

ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ ೮

ಬಂದು ಕರ್ಣನ ಹಾನಿ ಕೌರವ
ವೃಂದವನು ವೇಢೈಸಿತೇ ಹಾ
ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ
ತಂದು ಬಾಚಿಸಿದರಸನಿರವೆಂ
ತೆಂದುಸುರನಾರೈದು ವಿಧಿಯನು
ನಿಂದಿಸಿದರವಧಾನ ಜೀಯವಧಾನ ಜೀಯೆನುತ ೯

ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ ೧೦

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ೧೧

ಏನು ಗುರುಸುತ ಮಡಿದನೇ ತ
ನ್ನಾನೆ ಬವರದಲಕಟ ಕುಂತೀ
ಸೂನುವೇಕೈ ತಪ್ಪು ಮಾಡಿದನೇ ಮಹಾದೇವ
ಭಾನುಸನ್ನಿಭ ಸರಿದನೇ ತ
ಪ್ಪೇನು ಪಾರ್ಥನ ಬಸುರಲೆನ್ನ ನಿ
ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ ೧೨

ತಾಪವಡಗಿತು ಮನದ ಕಡುಹಿನ
ಕೋಪ ತಳಿತುದು ಭೀಮ ಪಾರ್ಥರ
ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ
ಭೂಪ ಕೇಳೈ ಪಾಳಯಕೆ ಕುರು
ಭೂಪ ಬಂದನು ನಾಳೆ ಕರ್ಣೋ
ತ್ಥಾಪನವಲಾ ಎನುತ ಹೂಕ್ಕನು ಭದ್ರಮಂಟಪವ ೧೩

ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ ೧೪

ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾವಿಚ್ಚೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ ೧೫

ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ ೧೬

ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ಮಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ ೧೭

ನಾವು ಹೊಯ್ದಾಡುವೆವು ಭುಜಸ
ತ್ವಾವಲಂಬವ ತೋರುವೆವು ಕ
ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ
ನೀವು ಸೇನಾಪತ್ಯವನು ಸಂ
ಭಾವಿಸಿರೆ ಸಾಕಿನ್ನು ಮಿಗಿಲಾ
ದೈವಕೃತ ಪೌರುಷವ ನಾಳಿನೊಳರಿಯಬಹುದೆಂದು ೧೮

ಧರಣಿಪತಿ ಚಿತ್ತೈಸು ಸೇನಾ
ಧುರವನೀವುದು ಮದ್ರಭೂಪತಿ
ಗೆರವಲಾ ಜಯಲಕ್ಶ್ಮಿ ಬಳಿಕಾ ಪಾಂಡುತನಯರಿಗೆ
ಸುರನದೀಜ ದ್ರೋಣ ರಾಧೇ
ಯರಿಗೆ ಸರಿಮಿಗಿಲಿಂದು ಮಾದ್ರೇ
ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮಥಟ್ಟಿನಲಿ ೧೯

ನೀವು ಕಟಕಾಚಾರ್ಯಪುತ್ರರು
ನೀವಿರಲು ಕೃಪನಿರಲು ದಳವಾಯ್
ನಾವಹೆವೆ ನೀವಿಂದು ತೇಜೊದ್ವಯದಲಧಿಕರಲೆ
ನಾವು ತರುವಾಯವರೆನಲು ಜಯ
ಜೀವಿಗಳು ನೀವನ್ಯಗುಣಸಂ
ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ ೨೦

ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ ೨೧

ಸುರನದೀಜ ದ್ರೋಣ ಕೃಪರೀ
ಕುರುಬಲಕೆ ಕಟ್ಟೊಡೆಯರವರಿ
ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು
ಗುರುಸುತನೊ ಶಲ್ಯನೊ ಚಮೊಮು
ಖ್ಯರನು ನೀವೇ ಬೆಸಸಿಯೆಂದನು
ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ ೨೨

ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ
ಈ ದುರಂತದ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ ೨೩

ತರಸಿ ಮಂಗಳವಸ್ತುಗಳನಾ
ದರಿಸಿ ಭದ್ರಾಸನದಲೀತನ
ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ
ಮೊರೆವ ವಾದ್ಯದ ಸಿಡಿಲ ಧರಣೀ
ಸುರರ ಮಂತ್ರಾಕ್ಷತೆಯ ಮಳೆಗಳೊ
ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು ೨೪

ಆದುದುತ್ಸವ ಕರ್ಣಮರಣದ
ಖೇದವುಕ್ಕಿತು ಹಗೆಗೆ ಕಾಲ್ದೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೊಗಿಗೆ ಕದಪ ಹೊಯ್ದನು ನಿನ್ನ ಮಗನೆಂದ ೨೫

ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ ೨೬

ಪತಿಕರಿಸಿದೈ ವೀರಸುಭಟ
ಪ್ರತಿತ (ಪ್ರತತಿ?) ಮಧ್ಯದಲೆಮ್ಮನಹಿತ
ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ
ಕೃತಕವಿಲ್ಲದೆ ಕಾದುವೆನು ಯಮ
ಸುತರೊಡನೆ ಜಯಸಿರಿಗೆ ನೀನೇ
ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ ೨೭

ಉಬ್ಬಿದನಲೈ ಮಧುರವಚನದ
ಹಬ್ಬದಲಿ ನಿನ್ನಾತನಿತ್ತಲು
ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ
ಸರ್ಬ (ಸಬ್ಬ?) ವೃತ್ತಾಂತವನು ಗಾಢದ
ಗರ್ಭ (ಗಬ್ಬ?) ಮುರಿದುದು ಕೃಷ್ಣರಾಯನ
ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ ೨೮

ದೇವ ಚಿತ್ತೈಸಿದಿರೆ ಬೊಪ್ಪನ
ಭಾವನನು ಸೇನಾಧಿಪತ್ಯದ
ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ
ಆವನಂಘೈಸುವನೊ ಪಾರ್ಥನೊ
ಪಾವಮಾನಿಯೊ ನಕುಲನೋ ಸಹ
ದೇವನೋ ತಾನೋ ನಿದಾನಿಸಲರಿಯೆ ನಾನೆಂದ ೨೯

ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ ೩೦

ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೊಪ
ಇರಿವಡಾ ಮಾದ್ರೇಶನನು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ ೩೧

ಲೇಸನಾಡಿದೆ ಕೃಷ್ಣ ಶಲ್ಯಂ
ಗೀಸು ಬಲುಹುಂಟಾದಡನುಜರು
ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ
ಈ ಸಮರಜಯವೆನಗೆ ನಾಳಿನೊ
ಳೈಸಲೇ ನಳ ನಹುಷ ಭರತ ಮ
ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ ೩೨

ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ ೩೩

ಸಂದವೈ ಹದಿನೇಳು ರಾತ್ರಿಗ
ಳಿಂದಿನಿರುಳಾ ಸೇನೆ ನಿರ್ಭಯ
ದಿಂದ ನಿದ್ರಾವ್ಯಸನನಿರ್ಭರ ಪೂರ್ಣ ಹರುಷದಲಿ
ಸಂದುದೀ ನಿನ್ನವರು ರಾಧಾ
ನಂದನವ್ಯಪಗಮನನಷ್ಟಾ
ನಂದವಿಹ್ವಲಕರಣರಿದ್ದರು ಭೂಪ ಕೇಳೆಂದ ೩೪

ಆ ಶಿಖಂಡಿಯ ತೋರಿ ಸರಳಿನ
ಹಾಸಿಕೆಯಲೊಬ್ಬನನು ಮಾತಿನ
ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ
ಘಾಸಿ ಮಾಡಿದನೊಬ್ಬನನು ಧರ
ಣೀಶ ಚೇಷ್ಟೆಯಲೊಬ್ಬನನು ಕೃಪೆ
ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ೩೫

(ಸಂಗ್ರಹ: ಪಾರ್ಥಸಾರಥಿ.ಎಚ್.ವಿ)

Tuesday, June 22, 2010

ದ್ರೋಣಪರ್ವ: ೦೫. ಐದನೆಯ ಸಂಧಿ

ಸೂ: ವೀರ ರಿಪುಕದಳೀವನಕೆ ಮದ
ವಾರಣನು ಫಲಗುಣನ ತನಯನು
ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ

ಅವಧರಿಸು ಧೃತರಾಷ್ಟ್ರ ನೃಪ ಸ್ಶೆಂ
ಧವನ ಗೆಲಿದಾ ವ್ಯೊಹ ಭೇದಾ
ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ
ತಿವಿದನುರುಬುವ ರಥ ಪದಾತಿಯ
ಕವಿವ ಗರುವ ತುರಂಗಗಳ ಬಲು
ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ ೧

ಹರಿಯ ಚಕ್ರ ವರೂಥ ಚಕ್ರದೊ
ಳುರವಣಿಪ ತೇಜಿಗಳ ಕಡುಹಿನ
ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ
ಹರನ ನಯನಜ್ವಾಲೆ ಪಾರ್ಥಿಯ
ಸರಳ ಕಿಡಿಯಲಿ ಪಲ್ಲಟಿಸೆ ಸಂ
ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ ೨

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ ೩

ಕದಳಿಯೊಳು ಮದದಾನೆ ಹೊಕ್ಕಂ
ದದಲಿ ಹೆಚ್ಚಿದ ಚಾತುರಂಗದ
ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು
ಇದಿರೊಳೆಚ್ಚನು ಕೆಲಬಲದೊಳಿಹ
ಕದನಗಲಿಗಳ ಸೀಳಿದನು ಕಾ
ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ ೪

ಜೋಡೊಡೆದು ಥಟ್ಟುಗಿದು ಬೆನ್ನಲಿ
ಮೂಡಲದಟರ ಸೀಳಿದನು ಖುರ
ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ
ನೋಡಲಮ್ಮುವರಿಲ್ಲ ಮಿಗೆ ಕೈ
ಮಾಡಲಮ್ಮುವರಿಲ್ಲ ಬಲದ
ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ ೫

ಆವ ವಹಿಲದೊಳಂಬ ತೊಡಚುವ
ನಾವ ವೇಗದೊಳಿದಿರಲೆಸುವನ
ದಾವ ನಿರುತದಲೊಡ್ದುವನು ಕೊರಳಿಂಗೆ ಕೋಲುಗಳ
ಆವ ದೃಢತೆಯೊ ದೃಷ್ಟಿವಾಳವಿ
ದಾವ ಗರುಡಿಶ್ರಮವೆನುತ ದಿವಿ
ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ ೬

ಎಡದಲೌಕುವ ರಾವುತರ ವಂ
ಗಡವನೆಚ್ಚನು ಸಮ್ಮುಖದೊಳವ
ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ
ಕಡುಗಿ ಬಲದಲಿ ಕವಿವ ರಥಿಕರ
ಕೆಡಹಿದನು ಕಾಲಾಳು ತೇರಿನ
ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ ೭

ಉರವಣಿಸಿದರು ಮತ್ತೆ ಭಟರ
ಬ್ಬರವ ಖತಿಯಲಿ ನಿಖಿಳ ಮನ್ವಂ
ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ
ಸರಳು ಕಡಿದವು ಸಕುತಿ ಸೆಲ್ಲೆಹ
ಪರಶು ಕವಿದವು ಖಡ್ಗ ತೋಮರ
ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ ೮

ತೊಲಗಿರೈ ಕಾಲಾಳು ಮೇಲಾ
ಳಳವಿಗೊಡಲಿ ಮಹಾರಥರು ಮುಂ
ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ
ಕೆಲದ ದೊರೆಗಳು ಬರಲಿ ಮಾರಿದ
ತಲೆಯ ಭಂಡವ ಹೊತ್ತಿರದೆ ಕೈ
ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು ೯

ಕಾರಗಲಿಸಿದನಮಮ ರಾಜ ಕು
ಮಾರ ಕಂಠೀರವನು ರಿಪು ಪರಿ
ವಾರವನು ನಡೆಗೊಳಿಸಿದನು ಯಮರಾಜನಾಲಯಕೆ
ಮಾರಿ ಮೊಗವಡದೆರೆದಳೋ ಕೈ
ವಾರವೋ ತರುವಲಿಗಿದೆತ್ತಣ
ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ ೧೦

ಕೊಡೆನೆಗೆದವಟ್ಟೆಗಳು ರಕುತದ
ಕಡಲೊಳರೆಜೀವದ ಭಟರು ಬಾ
ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ
ಅಡಸಿ ನೆಗೆವಾನೆಗಳ ತಲೆಗಳ
ಗಡಣ ಮೆರೆದವು ಮಿಕ್ಕ ತೇಜಿಯ
ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ ೧೧

ಕರಿಭಟೆಯ ಕಲಕಿದನು ಹಯ ಮೋ
ಹರವ ಜರುಹಿದನೌಕಿ ಹರಿತಹ
ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ
ಹುರಿಯೊಡೆದು ಮೈದೆಗೆದು ಸಲೆ ಕೈ
ಮರೆದು ಕೈದುವ ಹಾಯ್ಕಿ ಪಡೆ ಮೊಗ
ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ ೧೨

ತಳಿತ ಹೊಗರಿನ ಬಾಯಿ ಧಾರೆಯ
ಹೊಳಹುಗಳ ಹೊಸ ಮಸೆಯ ತಳಪದ
ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ
ಲುಳಿಯ ಹಂಗನ ಗರಿಯ ಬಿಗುಹಿನ
ಹಿಳುಕುಗಳ ಹೊಗರಂಬು ಕವಿದವು
ತುಳುಕಿದವು ತೂರಿದವು ಕೆದರಿದವಹಿತ ಬಲದಸುವ ೧೩

ಅಳವಿಗೆಡೆ ಧುಮ್ಮಿಕ್ಕಿ ರಥದವ
ರಿಳಿಯ ಬಿದ್ದರು ಭಯದಿ ತೇಜಿಯ
ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ
ಗುಳವ ಸಡಿಲಿಸಿ ಹಾಯ್ಕಿ ಜೋದಾ
ವಳಿಗಳಿಳಿದುದು ಕೈಯ ಕೈದುವ
ನಿಳುವ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ ೧೪

ಎಸಳ ಮೊನೆ ಮೋಹರದ ಸಂದಣಿ
ಯಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ ೧೫

ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ ೧೬

ತಂದೆ ಹಡೆಯನೆ ಮಗನನಹುದೋ
ಕಂದ ಕಲ್ಪ ಸಹಸ್ರ ನೋಂತಳೊ
ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ
ಇಂದಿನೀ ಬಲವೀ ಸಮರ ಜಯ
ದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆಂದನವನೀಶ ೧೭

ಹುರುಡ ಮರೆದೆನು ಮಗನೆ ಸಾಲದೆ
ಭರತಕುಲದಲಿ ನಿನ್ನ ಬೆಳವಿಗೆ
ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ
ಕರುಳು ಬೀಳವೆ ತನ್ನ ಬಸುರಿಂ
ದುರುಳಿದವದಿರಲೇನು ಫಲ ಮ
ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ೧೮

ಎನುತ ಬಿಲುದುಡುಕಿದನು ಸೇನಾ
ವನಧಿಗಭಯವನಿತ್ತು ಮರಳುವ
ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ
ಮೊನೆಗಣೆಯ ತೂಗುತ್ತ ನರ ನಂ
ದನನ ರಥವನು ತರುಬಿ ನಿನ್ನಯ
ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ ೧೯

ಮಗುವು ನೀ ಕೆಡಬೇಡ ಹೋಗೆನು
ತಗಣಿತಾಸ್ತ್ರವ ಸುರಿವುತೈತರೆ
ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ
ಮಗುವು ತಾನಹೆ ತನ್ನ ಬಾಣಕೆ
ಮಗುವುತನ ಬೇರಿಲ್ಲ ನೋಡೆಂ
ದಗಲದಲಿ ಕೂರಂಬ ಸುರಿದನು ಪಾರ್ಥನಂದನನು ೨೦

ಎಸಲು ಕಣೆ ಮುಕ್ಕುರುಕಿದವು ಹೊಸ
ಮಸೆಯ ಧಾರೆಯ ತೋರ ಕಿಡಿಯಲಿ
ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು
ಬಸಿವ ರಕುತವ ಜರಿವ ಜೋಡಿನ
ನಸಿದ ಗರ್ವದ ನೆಗ್ಗಿದಾಳ್ತನ
ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ ೨೧

ರಾಯಸಿಲುಕಿದನಕಟಕಟ ರಾ
ಧೇಯ ನಡೆ ಕೃಪ ಹೋಗು ಮಗನೆ ನಿ
ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ
ರಾಯನನುಜರು ಕೈದುಗೊಳಿ ರಣ
ದಾಯ ತಪ್ಪಿತು ನೃಪತಿ ಮಾರಿಯ
ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ ೨೨

ಮಾತು ಹಿಂಚಿತು ಮುಂಚಿ ಸುಭಟ
ವ್ರಾತ ಹೊಕ್ಕುದು ಸಿಕ್ಕಿದರಸನ
ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ
ಸೋತೆವಾವ್ ನೀ ಗೆಲಿದೆ ನಿ
ಮ್ಮಾತಗಳನೀ ಭ್ರೂಣಹತ್ಯಾ
ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ ೨೩

ರಾಯನನು ತೊಲಗಿಸಿದರಾ ಕ
ರ್ಣಾಯತಾಸ್ತ್ರರು ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭುಟರಿಗೆ
ಸಾಯಕವ ಸರಿಗೊಳಿಸಿದರು ವ
ಜ್ರಾಯುಧನ ಮೊಮ್ಮನ ರಥವ ನಿ
ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು ೨೪

ಹಸುಳೆತನದಲಿ ಹರನ ಮಗನಾ
ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
ಶಿಶುವೆ ನೋಡಭಿಮನ್ಯು ಸುಭಟ
ಪ್ರಸರದಿನಿಬರನೊಂದು ಘಾಯದೊ
ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ ೨೫

ಗುರುಸುತನನೊಟ್ಟೈಸಿ ಶಲ್ಯನ
ಭರವಸವ ನಿಲಿಸಿದನು ಕೃಪನು
ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ
ಅರಸನನುಜರ ಸದೆದು ಬಾಹ್ಲಿಕ
ದುರುಳ ಸೌಬಲ ಸೋಮದತ್ತರ
ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ ೨೬

ಮುಳುಗಿದಂಬಿನ ಮರುಮೊನೆಯ ಮೈ
ಗಳ ಮಹಾರಥರಾಜಿ ಕದನದ
ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ
ಬಿಲುದುಡುಕಿ ಸಾರಥಿಗೆ ಸೂಚಿಸಿ
ಮಲೆತ ನೋಡೈ ಮಗುವು ಫಡ ಫಡ
ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ ೨೭

ಗಾರುಗೆಡೆದರೆ ಮೆರೆಯದೋಲೆಯ
ಕಾರತನವೆಮ್ಮೊಡನೆ ನೀ ಮೈ
ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು
ತೋರುವೆನು ಕೈಗುಣವನೆನುತೈ
ದಾರು ಶರದಲಿ ಕರ್ಣನೆದೆಯನು
ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ ೨೮

ಬೆದರಿ ಭೂಕಂಪದಲಿ ಕುಲಗಿರಿ
ಯದಿರುವಂತಿರೆ ಚರಿಸಿ ಕಾಯುವ
ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ
ಕೆದರಿತೀ ಬಲವಕಟ ಕರ್ಣನ
ಸದೆದನೋ ಸಾಹಸಿಕ ಶಿಶು ಕಾ
ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ ೨೯

ಬಾಲಕನೆ ಹಿಮ್ಮೆಟ್ಟು ಹಿಮ್ಮೆ
ಟ್ಟಾಳುತನವೆಮ್ಮೊಡನೆಯೇ ಮರು
ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ
ಮೇಲನರಿಯಾ ಶಲ್ಯನೊಡನೆಯು
ಕಾಳೆಗವೆ ನಿಮ್ಮಯ್ಯನಿಂದಿನ
ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ ೩೦

ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು ೩೧

ಸರಳ ಸರಳಲಿ ಕಡಿದು ಸವೆಯದೆ
ಸರಿ ಮಿಗಿಲ ಕಾದಿದರೆ ಶಲ್ಯನ
ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ
ಸರಳ ಹದಿನೈದರಲಿ ಶಲ್ಯನ
ಬರಿಯ ಕೆತ್ತಿದನೈದು ಬಾಣದೊ
ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ ೩೨

ತಲೆ ತಿರುಗಿ ತುಟಿಯೊಣಗಿ ಕಂಗಳ
ಬಳೆ ಮರಳಿ ಬಸವಳಿಯೆ ಸಾರಥಿ
ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ
ನಿಲುಕಿ ಕಂಡನು ಶಲ್ಯನನುಜನು
ಹಿಳುಕು ಹಿಳುಕಿನ ಮೇಲೆ ಸಂಧಿಸಿ
ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ ೩೩

ಪೂತು ಶಲ್ಯನ ತಮ್ಮನೇ ಮಾ
ರಾಂತನಣ್ಣನ ಹರಿಬವನು ದಿಟ
ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ
ಆತನಂಬೈದಾರ ಮನ್ನಿಸಿ
ಸೋತುವೊಲು ಮನಗೆಲವ ಮಾಡಿ ನಿ
ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ ೩೪

ದೊರೆ ಮಡಿಯೆ ಮದ್ರಾನುಜನ ಬಲ
ತಿರುಗಿತಭಿಮನ್ಯುವಿನ ಹೊಯ್ಲಲಿ
ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ
ತರಹರವ ನಾ ಕಾಣೆನೀ ಮೋ
ಹರಕೆ ಗತಿಯೇನೆನುತ ಭರದಲಿ
ಕರೆದು ತೋರಿದನಾ ಕೃಪಾಚಾರ್ಯಂಗೆ ಕಲಿ ದ್ರೋಣ ೩೫

ಮಗುವೆ ನೋಡಭಿಮನ್ಯು ನಮಗಿದು
ಹೊಗುವಡಳವೇ ಕಾಲರುದ್ರನ
ತಗಹು ನಿಟ್ಟಂತಿದೆ ಕುಮಾರನ ಕೋಪದಾಟೋಪ
ಮೊಗಸಲರಿದು ಭುಜಪ್ರತಾಪದ
ಹೊಗರು ಹೊಸಪರಿಯೆನುತ ರಿಪುಗಳ
ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ ೩೬

ಕೇಳುತಿರ್ದೈ ಕರ್ಣ ಸೆಲೆ ನ
ಮ್ಮಾಳ ಬೆದರಿಸಿ ನುಡಿದು ರಿಪು ಭಟ
ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು
ಖೂಳರೆಂಬೆವೆ ಗುರುಗಳಿಂದು ವಿ
ಶಾಲಮತಿಗಳು ತಮ್ಮ ಭಾಗ್ಯದ
ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ ೩೭

ವೀರರಂಗವನೆತ್ತ ಬಲ್ಲರು
ಹಾರುವರು ಬೆಳುದಿಂಗಳಿನ ಬಿರು
ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು
ವೈರಿಭಟನಿವ ಮಗುವಲಾ ಮನ
ವಾರೆ ಕಾದಲು ಲಕ್ಷ್ಯವಿಲ್ಲೀ
ಯೂರುಗರ ಬೈದೇನು ಫಲವೆಂದರಸ ಹೊರವಂಟ ೩೮

ಎನಲು ದುಶ್ಯಾಸನನು ರಾಯನ
ಕನಲಿದನು ಖತಿಯೇಕೆ ಜೀಯಿಂ
ದೆನಗೆ ಬೆಸಸಾ ಸಾಕು ಭಂಡರ ಬೈದು ಫಲವೇನು
ದಿನಪ ದೀವಿಗೆಯಾಗಲುಳಿದೀ
ಬಿನಗು ಬೆಳಗಿನ ಹಂಗು ಬೇಹುದೆ
ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ ೩೯

ತಳಿತುದೆಡಬಲವಂಕದಲಿ ಹೆ
ಬ್ಬಲ ಛಡಾಳಿಸಿ ಮೊರೆವ ಭೇರಿಯ
ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ
ಹಳವಿಗೆಯ ಸೀಗುರಿಯ ಚಮರಾ
ವಳಿಯ ವಿಮಳಚ್ಛತ್ರ ಪಙ್ತೆಯ
ವಳಯದಲಿ ನಭ ಮುಳುಗೆ ಮುತ್ತಿತು (ಪಾ: ಮೂತ್ತಿತು) ಸೇನೆ ರಿಪುಭಟನ ೪೦

ತಿರುಹು ತೇಜಿಯನಿತ್ತಲಿವದಿರ
ನೊರಸಿ ದುಶ್ಯಾಸನನ ಬೆನ್ನಲಿ
ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ
ಅರಗಿನರಸನ ಬಾಗಿಲಲಿ ದ
ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ
ಳೊರಸಿದನು ಚತುರಂಗ ಬಲವನು ಕೌರವಾನುಜನ ೪೧

ಎಲವೊ ಕೌರವ ಕೊಬ್ಬಿ ನರಿ ಹೆ
ಬ್ಬುಲಿಯ ಕೂಸನು ಬೇಡುವಂದದಿ
ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ
ಮಲೆತು ನೀನೆನ್ನೊಡನೆ ರಣದಲಿ
ಹಳಚಿ ನೀ ತಲೆವೆರಸಿ ಮರಳಿದ
ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ ೪೨

ಸಾಕು ತರುವಲಿತನದ ಮಾತುಗ
ಳೇಕೆ ಗರುವರ ಮುಂದೆ ವೀರೋ
ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ
ಆ ಕಿರೀಟಿ ವೃಕೋದರರು ಮೈ
ಸೋಕಿದರೆ ಸಂತೋಷ ನೀನವಿ
ವೇಕಿ ಬಾಲಕನೇನ ಮಾಡುವೆನೆಂದನವ ನಗುತ ೪೩

ಕೊಳಚೆ ನೀರೊಳಗಾಳುತೇಳುತ
ಜಲಧಿ ಕಾಲ್ದೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿ ರಕುತದಲಿ ತಾಯ ತುರುಬನು ನಾದಿಸುವೆನೆಂದ ೪೪

ಕಾತರಿಸದಿರು ಬಾಲ ಭಾಷೆಗ
ಳೇತಕೀವು ನೀ ಕಲಿತ ಬಿಲು ವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ ೪೫

ಬಿಲ್ಲ ಹಿಡಿಯಲು ಕೌರವಾನುಜ
ಬಲ್ಲ ನೋಡೈ ಸೂತ ಮಿಗೆ ತ
ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ
ನಿಲ್ಲು ನಿಲ್ಲಾದರೆಯೆನುತ ಬಲು
ಬಿಲ್ಲನುಗುಳಿಸಿದನು ಶರೌಘವ
ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು ೪೬

ಅವನ ನೂರಂಬುಗಳ ಕಡಿದವ
ನವಯವವ ಕೀಲಿಸಿದಡಾಕ್ಷಣ
ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ
ಅವಗಡಿಸಿ ಖಾತಿಯಲಿ ಖಳ ಶರ
ನಿವಹವನು ತುಡುಕಿದನು ಕೊಡಹಿದ
ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು ೪೭

ತಾಯ ತುರುಬಿಗೆ ಹಾಯ್ದು ಪಾತಕಿ
ನಾಯ ಕೊಂಡಾಡುವರೆ ಕೊಬ್ಬಿದ
ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ
ತಾಯ ಕರಸುವೆನೆನುತ ಕಮಳ ದ
ಳಾಯತಾಂಬಕನಳಿಯನನುಪಮ
ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ ೪೮

ಇವನ ಕೊಂದರೆ ತಂದೆ ಮಿಗೆ ಮೆ
ಚ್ಚುವನೊ ಮುನಿನನೊ ತನ್ನ ನುಡಿ ಸಂ
ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು
ಇವನ ತಾನೇ ಕೊಲಲಿ ನಮಗಿ
ನ್ನಿವನ ತೊಡಕೇ ಬೇಡ ಕದನದೊ
ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ ೪೯

ಕಾಯ್ದುಕೊಳ್ಳೈ ಕೌರಾವಾನುಜ
ಹೊಯ್ದು ಹೋಗಲು ಬಹುದೆ ಹರನಡ
ಹಾಯ್ದೆಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು
ಬಾಯ್ದೆಗೆದು ಕೇಸುರಿಯ ಕಾರುತ
ಕೈದುವೆದೆಯಲಿ ಕೊಂಡು ಬೆನ್ನಲಿ
ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ ೫೦

ಅಹಹ ಕೈತಪ್ಪಾಯ್ತು ರಾಯನ
ಸಹಭವನು ನೊಂದನು ಶಿವಾ ಎನು
ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ
ಬಹಳ ಬಲ ನುಗ್ಗಾಯ್ತು ಶಿಶುವಿನ
ಸಹಸ ಕುಂದದೆನುತ್ತ ಖತಿಯಲಿ
ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ ೫೧

ಸಾರು ಸಾರಭಿಮನ್ಯು ಫಡ ಇ
ನ್ನಾರ ಬಸುರನು ಹೊಗುವೆ ನಿನ್ನವ
ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ
ಭೂರಿ ಬಲವನು ಸದೆವ ಗರ್ವವಿ
ದಾರ ಕೂಡೆ ಧನುರ್ಧರಾಗ್ರಣಿ
ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ ೫೨

ಬಲ್ಲೆನುಂಟುಂಟಖಿಳ ವೀರರೊ
ಳಿಲ್ಲ ಸರಿದೊರೆ ನಿನಗೆ ಬಾಯಲಿ
ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ
ಒಳ್ಳೆ ಗಡ ಪಾವುಡವ ವಾಸುಗಿ
ಯಲ್ಲಿಗಟ್ಟಿತು ಗಡ ಮಹಾಹವ
ಮಲ್ಲ ಮಡ ಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು ೫೩

ಇರುಳುರಾಯನ ಮನೆಗೆ ಕಪ್ಪವ
ತೆರುವುದೋ ಹಗಲೆಲವೊ ಕೆಲಬರ
ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ
ಕಿರುಮೊನೆಯ ಮುಗುಳಂಬುಗಳ ಸೈ
ಗರೆದನಭಿಮನ್ಯುವಿನ ಮೆಯ್ಯಲಿ
ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ ೫೪

ಸುರಪನಂಕುಶವೌಕಿದರೆ ಮೆ
ಯ್ಯರಿಯದೈರಾವತಕೆ ಕಬ್ಬಿನ
ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ
ತರಳುವನೆ ಅಭಿಮನ್ಯುವೆನುತ
ಬ್ಬರಿಸಿ ಕರ್ಣನ ಕಾಯವನು ಹುಗಿ
ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ ೫೫

ಮಳೆಗೆ ಮೊಗದಿರುಹುವುದೆ ಬಡಬಾ
ನಳನೆಲವೊ ನಿನ್ನಂಬು ತಾಕಿದ
ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ
ಹಿಳುಕು ಕವಿದವು ಭಟನ ಕೈ ಮೈ
ಗಳಲಿ ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ ೫೬

ಹೂಣಿಗರು ಕೆಲರಿವರು ಇವದಿರ
ಗೋಣನರಿವರೆ ಇವರ ಜೀವದ
ಕೇಣಿಕಾರರು ಖಾತಿಗೊಂಬರು ಭೀಮ ಫಲಗುಣರು
ಮಾಣದಿವದಿರು ಮತ್ತೆ ರಣದಲಿ
ಕಾಣೆನಿದಕಿನ್ನನುವನೆನುತ
ಕ್ಷೀಣಭುಜಬಲನೆಚ್ಚು ಕಡಿದನು ಸೂತಜನ ಧನುವ ೫೭

ಕೈದು ಮುರಿಯಲು ಮುಂದೆ ನೂಕದೆ
ಹಾಯ್ದನಾ ರವಿಸೂನು ಬಳಿಕಡ
ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ
ಐದು ಬಾಣದಲವನ ಕೊರಳನು
ಕೊಯ್ದನರ್ಜುನ ಸೂನುವಾತನ
ನೊಯ್ದರಂತಕದೂತರದ್ಬುತವಾಯ್ತು ಸಂಗ್ರಾಮ ೫೮

ಘಾಯವಡೆದನು ಶಲ್ಯ ರವಿಸುತ
ನಾಯುಧವ ಬಿಟ್ಟೋಡಿದನು ಕುರು
ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು
ಸಾಯದುಳಿದವರಿಲ್ಲ ಮಿಕ್ಕಿನ
ನಾಯಕರೊಳಕಟೆನಲು ಕುರುಬಲ
ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ ೫೯

ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥಿನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ ೬೦

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹ ನಾದದಲಿ
ನಿಟಿಲ ನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದತಿ ಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ ೬೧

ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ ೬೨

ಗದೆಯ ತಿರುಹುತ ಸಿಂಹನಾದದ
ಲೊದರಿ ಮಗನಾವಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ
ಅದಟನೈತರೆ ಹೋಗಲೀಯದೆ
ಮೊದಲ ಬಾಗಿಲ ಕಟ್ಟಿಕೊಂಡ
ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ ೬೩

ತೆರಹುಗೊಡು ಫಡ ಫಡ ಜಯದ್ರಥ
ಹೆರತೆಗೆದು ಸಾರೆನುತ ಹೂಣಿಗ
ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು
ಮರೆದು ಕಳೆಯಭಿಮನ್ಯುವನು ಮೈ
ಮರೆಯದೆನ್ನಲಿ ಕಾದು ಮಾತಿನ
ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು ೬೪

ಬವರದಲಿ ಕಲಿಪಾರ್ಥನಲ್ಲದೆ
ಪವನತನಯಾದಿಗಳ ಗೆಲುವರೆ
ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು
ಕವಲುಗೋಲಲಿ ಭೀಮನನು ಪರಿ
ಭವಿಸಿದನು ಸಹದೇವನಕುಳರ
ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ ೬೫

ಪಡಿಬಲವ ಬರಲೀಯದನಿಲಜ
ನೊಡನೆ ಸೈಂಧವ ಕಾದುತಿರಲಿ
ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ
ಕಡುಗಿ ನೂಕುವ ಕದನ ರಾಗಿಗ
ಳೊಡನೆ ಕಾದುವ ಪಾರ್ಥತನಯನ
ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ ೬೬

ತರಿದನಾನೆಯ ಥಟ್ಟುಗಳ ಮು
ಕ್ಕುರಿಕಿದನು ಕಾಂಭೋಜ ತೇಜಿಯ
ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ
ಮುರಿದನೊಗ್ಗಿನ ಪಾಯ್ದಳವನ
ಳ್ಳಿರಿವ ಹೆಣ ಕುಣಿದಾಡೆ ಭಟ ಬೇ
ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ ೬೭

ಒರಸಿದನು ಹದಿನೆಂಟು ಸಾವಿರ
ಕರಿ ಘಟೆಯನೈವತ್ತು ಸಾವಿರ
ತುರುಗವನು ಮೂವತ್ತು ಸಾವಿರ ವರ ಮಹಾರಥರ
ಧುರದಿ ಲಕ್ಷ ಪದಾತಿಯನು ಸಂ
ಹರಿಸಿ ಶಲ್ಯ ಕುಮಾರಕನ ಕ
ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರಧಾರೆಯಲಿ ೬೮

ಮಡಿದನಕಟಾ ತಮ್ಮ ಸಖನೆಂ
ದಡಸಿದಳಲಿನೊಳೆದ್ದು ಕೋಪದ
ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ
ಸಿಡಿದ ಮೀಸೆಯ ಬಿಗಿದ ಹುಬ್ಬಿನ
ಜಡಿವ ರೋಮಾಂಚನದ ಖಾತಿಯ
ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು ೬೯

ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ ೭೦

ತಳಿತ ಸತ್ತಿಗೆಗಳ ವಿಡಾಯಿಯ
ಲೊಲೆವ ಚಮರಿಯ ವಜ್ರ ಮಕುಟದ
ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ
ಕೆಲಬಲದ ವೇಲಾಯತರ ವೆ
ಗ್ಗಳದ ರಾವ್ತರ ಗಡಣ ನಾಲಗೆ
ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು ೭೧

ಭಾಪುರೇ ಕೌರವನ ಸುತರಾ
ಟೋಪವೊಳ್ಳಿತು ಬಂದ ಬರವಿನ
ಚಾಪಲದಲೊದಗಿದರೆ ಲೇಸಲ್ಲಿದರ ಫಲವೇನು
ಕಾಪುರುಷರೇ ಕಾಣಬಹುದೆಂ
ದಾ ಪುರಂದರ ಸುತನ ಸುತ ನಿಜ
ಚಾಪವನು ನೇವರಿಸುತ್ತಿದ್ದನು ಬಗೆಯದರಿಬಲವ ೭೨

ಮುಗುಳದಿರು ಶಲ್ಯಾತ್ಮಕನನುಗು
ಳುಗುಳು ನಿನ್ನಯ ಬಸಿರ ಸೀಳಿಯೆ
ತೆಗೆವೆವೆಮ್ಮಯ ಸಖನನೆನುತಾ (ಪಾ: ಸಖನೆನುತಾ) ಲಕ್ಷಣಾದಿಗಳು
ತೆಗೆದೆಸುತ ಮೇಲಿಕ್ಕಿದರು ತಾ
ರೆಗಳು ನೆಣಗೊಬ್ಬಿನಲಿ ರಾಹುವ
ತೆಗೆದು ಬದುಕುಲು ಬಲ್ಲವೇ ಧೃತರಾಷ್ಟ್ರ ಕೇಳೆಂಡ ೭೩

ದಿಟ್ಟರೋ ಲಕ್ಷಣನವರು ಜಗ
ಜಟ್ಟಿಗಳಲಾ ರಾಜಕುಲದಲಿ
ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ
ಕಟ್ಟಿದನು ಕಣೆಗಳಲಿ ಸುತ್ತಲು
ತಟ್ಟಿವಲೆಗಳ ಸೋಹಿನಲಿ ಬೆ
ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ ೭೪

ಆ ಸುಯೋಧನ ಸುತರ ಸರಳ ವಿ
ಳಾಸವನು ಖಂಡಿಸಿದನವದಿರ
ಬೀಸರಕೆ ಬಂದಡ್ಡ ಬೀಳುವ ಭಟರ ಕೆಡೆಯೆಚ್ಚ
ರೋಷವಹ್ನಿಯ ಕೆದರೆ ಕವಿವ ಮ
ಹೀಶರನು ಮಾಣಿಸಿದನವನೀ
ವಾಸವನು ವಾಸವನ ಮೊಮ್ಮನುದಾರ ಸಮರದಲಿ ೭೫

ಫಡ ಕುಮಾರಕ ದೊದ್ದೆಗರ ಸದೆ
ಬಡಿದ ಗರ್ವಿತತನವಕಟ ನ
ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ
ಒಡನೊಡನೆ ನಾರಾಚ ನಿಚಯವ
ಗಡಣಿಸಿದರೇನೆಂಬೆನವರು
ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ ೭೬

ಸರಳ ಮೊನೆಯಲಿ ವೈರಿ ಸುಭಟರ
ಕರುಳ ತೆಗೆದನು ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ
ತರಳನರೆಯಟ್ಟಿದನು ಧುರದಲಿ
ದುರುಳ ದುರಿಯೋಧನನ ಮಕ್ಕಳ
ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು ೭೭

ಉರುಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ ೭೮

ತಳಿತ ಚೂತದ ಸಸಿಗಳವನಿಗೆ
ಮಲಗುವಂತಿರೆ ರಾಜಪುತ್ರರು
ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ
ಬಳಿರಕುತದಲಿ ನನೆದ ಸೀರೆಯ
ತಳಿತ ಖಂಡದ ಬಿಗಿದ ಹುಬ್ಬಿನ
ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ ೭೯

ಇಕ್ಕಿದಿರಲಾ ರಾಜಪುತ್ರರ
ನಕ್ಕಟಕಟಾ ಸ್ವಾಮಿದ್ರೋಹರು
ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು
ಹಕ್ಕಲಾದುದು ನಮ್ಮ ಬಲ ಶಿಶು
ಸಿಕ್ಕನಿನ್ನೂ ಪಾಂಡವರ ಪು
ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ ೮೦

ಕುಲವ ನೋಡಿದಡಿಲ್ಲ ತನ್ನಯ
ಬಲಹು ನೋಡಿದಡಿಲ್ಲ ಕದನದೊ
ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ
ಇಳೆಯೊಳೋಲೆಯಕಾರರೆಂಬರ
ತಲೆಗೆ ತಂದನು ತೃಣವನೆಂದ
ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ ೮೧

ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಆಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದು ಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ ೮೨

(ಸಂಗ್ರಹ: ಸತ್ಯ,ಶೈಲ,ಮೋಹನ ಮತ್ತು ಪ್ರಿಯ - ಹಾಸನ)

Wednesday, May 19, 2010

ವಿರಾಟಪರ್ವ: ೦೯. ಒಂಬತ್ತನೆಯ ಸಂಧಿ

ಸೂ.ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿಜಪರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ೦೧

ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨

ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ೦೩

ಎನಲು ನೀನೇ ಬಲ್ಲ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ ೦೪

ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫

ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ೦೬

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭

ರಾಯ ಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ೦೮

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ ೦೯

ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦

ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨

ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ೧೩

ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ೧೪

ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ ೧೫

ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನವರೆ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬

ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ೧೭

ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ೧೮

ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯

ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ೨೦

ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ೨೧

ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨

ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩

ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ೨೪

ಎಂದಿನವನುತ್ತರನು ಗಂಗಾ
ನಂದನನನೀ (ಪಾ: ನಂದನನೀ) ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ೨೫

ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ೨೬

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ೨೭

ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ೨೮

ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ ೨೯

ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ೩೦

ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ೩೧

ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ೩೨

ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ೩೩

ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ೩೪

ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ೩೫

ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ೩೬

ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ೩೭

ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ೩೮

ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ೩೯

ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ೪೦

ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ೪೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)

Tuesday, May 18, 2010

ವಿರಾಟಪರ್ವ: ೦೮. ಎಂಟನೆಯ ಸಂಧಿ

ಸೂ: ರಾಯ ರಿಪುಬಲಜಲಧಿ ವಡಬನ
ಜೇಯನರ್ಜುನನಖಿಳ ಕೌರವ
ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ

ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯ ದನಿದೋರಿದವು ಹುಲುಮೃಗವೇನನುಸುರುವೆನು
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಶಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ ೧

ಹತ್ತುಸಾವಿರ ರಥ ಸಹಿತ ಭಟ
ರೊತ್ತಿ ಕವಿದರು ಲಗ್ಗೆವರೆಯಲಿ
ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ
ಸತ್ತಿಗೆಯ ಸಾಲುಗಳೊಳಂಬರ
ಕೆತ್ತುದೆನೆ ಕುಲಶೈಲ ನಿಚಯದ
ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ೨

ಚಂಬಕನ ಹರೆ ಡಕ್ಕೆ ಡಮರುಗ
ಬೊಂಬುಳಿಯ ಗೋಮುಖದ ಡೌಡೆಯ
ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ
ತಂಬಟದ ನಿಸ್ಸಾಳವಂಬರ
ತುಂಬಿದುದು ನೆಲ ಕುಸಿಯೆ ಬಲವಾ
ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ೩

ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ
ಅರಸನಲುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ೪

ಮೊಗಕೆ ಹರಿಗೆಯನೊಡ್ಡಿ ಕಾಲಾ
ಳಗಿದು ಕವಿದುದು ಸರಳ ಪರಿಯಲಿ
ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು
ಉಗಿದಡಾಯುಧದಲಿರಿದರು ಭಾ
ಷೆಗಳ ರಾವ್ತರು ಕೆಂಗರಿಯ ಕೋ
ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ ೫

ಅರರೆ ರಾವುತು ರಾವುತೆಂಬ
ಬ್ಬರಣೆ ಮಸಗಿದುದೊಂದು ದೆಸೆಯಲಿ
ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ
ಧಿರುರೆ ಸಾರಥಿ ಹಳು ಹಳೆಂಬ
ಬ್ಬರಣೆ ಮಸಗಿದುದೊಂದು ಕಡೆಯಲಿ
ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ೬

ಸುರಪನಡವಿಯ ಚುಚ್ಚಿದೊಡೆ ಸುರ
ರರಮನೆಯ ಗಾಯಕರ ಗೆಲಿದೊಡೆ
ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ
ಗೊರವನೊಳು ಕಾದಿದೊಡೆ ಹೆಂಗುಸ
ನಿರುಳು ಕದ್ದೋಡಿದೊಡೆ ದಿಟ
ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ೭

ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ
ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿರಥರ ೮

ಗುರುಸುತನ ಬಳಿ ರಥವನೈಸಾ
ವಿರವ ಕೊಂದನು ಕರ್ಣನೊಡೆನೆಯ
ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ
ಗುರು ನದೀಜರ ಬಳಿ ರಥವ ಸಾ
ವಿರವ ಕೃಪ ಸೈಂಧವ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ೯

ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರರಥವ ಹುಡಿ ಮಾಡಿದನು ಹನ್ನೆರಡು ಸಾವಿರವ
ಧುರಕೆ ವೆಗ್ಗಳವಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ ೧೦

ಸವಗ ಸೀಳಿತು ಕೃಪನ ಭೀಷ್ಮನ
ಕವಚ ಹರಿದುದು ದ್ರೋಣ ನೊಂದನು
ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ
ಅವನಿಪತಿಗೇರಾಯ್ತು ಸಲೆ ಸೈಂ
ಧವ ಶಕುನಿ ದುಶ್ಶಾಸನಾದಿಗ
ಳವಯವದಲಂಬುಗಳನಾಯ್ದರು ತೋದ ರಕುತದಲಿ ೧೧

ಕದಿವಡೆದುದಾ ಚೂಣಿಬಲ ಬೆಂ
ಗೊಡದ ನಾಯಕರಾಂತು ತಮಗಿ
ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ
ಸೆಡೆದು ಸೊಪ್ಪಾದಖಿಳ ಸುಭಟರ
ಗಡಣವನು ಮೇಳೈಸಿ ಮಗುಳವ
ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ೧೨


ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ
ಅತಿಬಲನು ನೀನಹಿತ ಬಲ ವನ
ಹುತವಹನು ನೀನಿರಲು ಕುರು ಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ೧೩

ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯ ಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ೧೪

ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ ೧೫

ಎಲವೊ ಗರುಡಿಯ ಕಟ್ಟಿ ಸಾಮವ
ಕಲಿಸಿ ಬಳಿಕಾ ಕೋಲ ಮಕ್ಕಳ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ
ಕಲಹವೇತಕೆ ಕಾಣ ಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ ೧೬

ಇತ್ತಲಿತ್ತಲು ಪಾರ್ಥ ನಿಲು ನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ೧೭

ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ ೧೮

ಚಕಿತಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣಮುಖರು ರೋಷ
ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ
ವಿಕಟ ಶೌರ್ಯೋತ್ಕಟ ಮಹಾ ನಾ
ಯಕರು ನಿಷ್ಠುರ ಸಿಂಹ ಗರ್ಜನೆ
ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು ೧೯

ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣ ರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ ೨೦

ಮೇಲುಗೈಯಹೆ ಬಿರುದರೊಳು ಬಿ
ಲ್ಲಾಳು ನೀನಹೆ ಚಾಪವಿದ್ಯಾ
ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಕೋಲು ನಮ್ಮವು ಕೆಲವು ಸಮಗೈ
ಯಾಳೆ ನಿಮಗಾವೆನುತ ನೋಟಕ
ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ೨೧

ಅಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ ೨೨

ವೀರನಲ್ಲಾ ಬನದ ರಾಜ ಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ ೨೩

ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ ೨೪

ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ ೨೫

ಇಡಿದ ಮೋಡದ ಮುತ್ತಿಗೆಯ ಮೇ
ಲೊಡೆದು ಮೂಡುವ ರವಿಯವೋಲ್ ನೆರೆ
ಕಡಿದು ಶರಪಂಜರವ ಮುಸುಕಿದನರ್ಜುನನ ರಥವ
ನಡುಗಿದನು ವೈರಾಟ ಹಯವಡಿ
ಗಡಿಗೆ ನೊಂದವು ಹನುಮನಂಬರ
ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ೨೬

ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಬಿಡು ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ
ಭಾಳದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ ೨೭

ಅರಿಭಟನ ಶಿರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ೨೮

ಓಟವೇ ಅಪಜಯದ ಬೊಡ್ಡಿಯ
ಬೇಟವೇ ಬೆಸಗೊಳ್ಳಿರೈ ಒಳ
ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು
ಆಟವಿಕ ಭೂಪತಿಯ ಕೀರ್ತಿಯ
ಕೂಟಣಿಗರೊಗ್ಗಾಯ್ತು ತೆಗೆ ಮರು
ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ೨೯

ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀ ನೋಡು ಕೈ ಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ೩೦

ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ೩೧

ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರಿವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ೩೨

ಭಾವಿಸಲು ಪ್ರತಿಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯನು ಕಲಿಸಿದಿರಿ ನಿಮಗೊಪ್ಪಿಸುವೆನದನು
ನೀವು ನೋಡುವದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ ೩೩

ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ೩೪

ಎನುತ ಸುರಿದನು ಸರಳ ಸಾರವ
ನನಲ ಗರ್ಭದ ಬಾಯ ಧಾರೆಗ
ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ
ಮೊನೆಯ ಬಂಬಲುಗಿಡಿಯ ಹೊರಗಿನ
ತನಿಹೊಗೆಯ ಹೊದರುಗಳ ಪುಂಖ
ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು ೩೫

ದೇವ ಭಾರದ್ವಾಜ ಬಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನು ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ ೩೬

ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು
ಇಳೆಯ ಮರ್ತ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ ೩೭

ಬಳಿಕ ಪಾರ್ಥನ ಬಾಣದಲಿ ಬಸ
ವಳಿಯೆ ಸಾರಥಿ ಮೆಲ್ಲ ಮೆಲ್ಲನೆ
ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ
ಎಲೆಲೆ ಕಟಕಾಚಾರ್ಯ ಗೆಲಿದನು
ಫಲುಗುಣನನಿನ್ನೇನು ಕೌರವ
ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ೩೮

ಫಡ ಫಡೆಲವೊ ಕರ್ಣ ಸಾರಥಿ
ಮಡಿದರೇನದು ಸೋಲವೇ ಕಾ
ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ
ನುಡಿಗೆ ತೆರನಾಯ್ತೆಂಬ ಖುಲ್ಲರ
ಬೆಡಗ ನೋಡೆನುತುಗ್ರ ಚಾಪವ
ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ೩೯

ಆವುದೈ ನೀನರಿದ ಬಿಲು ವಿ
ದ್ಯಾ ವಿಷಯ ಘನ ಚಾಪ ವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು
ಕೋವಿದರ ಭೂಸುರರ ಯುಕ್ತಿಯ
ನೀವು ಕೊಂಡಿರೆ ಶಸ್ತ್ರವಿದ್ಯಾ
ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ ೪೦

ಅಕ್ರಮವ ತಿರಿಭುವನ ವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟದು
ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ ೪೧

ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದಲಿ
ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ
ನಿರ್ಜರರು ಮಝ ಭಾಪುರೆನಲಾ
ವರ್ಜಿಸಿದ ತಿರುವಿನಲಿ ಸಂಗರ
ನಿರ್ಜಿತೇಂದ್ರಿಯನೆಸಲು ಕಣೆಗಳು ಕವಿದವಂಬರಕೆ ೪೨

ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮರ್ತ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ೪೩

ಗುರುಸುತನ ಶರಜಾಲವನು ಸಂ
ಹರಿಸಿ ಮಗುಳಸ್ತ್ರೌಘವನು ವಿ
ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ
ತರಣಿ ಬಿಂಬವ ನಭವ ಹೂಳ್ದುದು
ಗುರುಸುತನ ಸಾಮರ್ಥ್ಯವಿಂತಿ
ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ೪೪

ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈಗುಂದಿ ನಿಂದನು ದ್ರೋಣನಂದನನು
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ೪೫

ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲು ನಿ
ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿ ಲೇಸೆನುತ ಫಲುಗುಣ
ನೊಂದು ಕನಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೬

ತರಹರಿಸಿ ಶರವೈದರಲಿ ಸಂ
ಹರಿಸಿ ಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧ ಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ೪೭

ಎಲೆಲೆ ಕರ್ಣ ದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ೪೮

ಬಾಯ ಬಿಟ್ಟುದು ಸಕಲ ಕೌರವ
ರಾಯದಳ ವಡಮುಖದಲದಟರು
ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ಮಿಡಿದು ಬೆರಳಲಿ
ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ ೪೯

ಓಡಿದವರಲ್ಲಲ್ಲಿ ಧೈರ್ಯವ
ಮಾಡಿತಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ ೫೦

ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೧

ಪೂತುರೇ ಕಲಿ ಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ ೫೨

ನಿಮ್ಮ ಕಾರುಣ್ಯಾವಲೋಕನ
ವೆಮ್ಮ ಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ೫೩

ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ
ನಿಶಿತ ಶರವೆಂಟರಲಿ ಕವಚವ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ೫೪

ಅರಿಯ ಶರಹತಿಗುತ್ತರನ ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ
ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ೫೫

ಕವಳವಿದ ಕೋ ಬಾಣ ಶಸ್ತ್ರಾ
ನಿವಹ ಧಾರಾಸ್ತಂಭವಿನ್ನಾ
ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋಯೆವ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ ೫೬

ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದು ಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ೫೭

ಎಂದು ಮೂರಂಬಿನಲಿ ಗಂಗಾ
ನಂದನನ ಮುಸುಕಿದನು ಸಾರಥಿ
ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು
ಮುಂದುಗೆಟ್ಟನು ಭೀಷ್ಮನಹುದೋ
ತಂದೆಯೆನುತಾರಂಬಿನಲಿ ಖತಿ
ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ೫೮

ಒರತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ೫೯

ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ೬೦

ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ
ಕಲಿ ಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗ ಸುರ ನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ೬೧

ಪೂತು ಪಾಯಕು ಪಾರ್ಥ ಬಿಲು ವಿ
ದ್ಯಾತಿಶಯದಲಿ ಭೀಷ್ಮನೀ ಪುರು
ಹೂತನಮರಾರಿಗಳ ಮಿಕ್ಕರಲಾ ಮಹಾದೇವ
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಕದ್ದೊಯ್ವನೇ ಖಳ
ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ ೬೨

ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ
ಇಂದು ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ೬೩

ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನಾತನ ತೋರ ತೋಳಿನ
ಬನವ ಕಡಿದನು ವೀರಭಾರ್ಗವ ರಾಮನತಿ ಬಲನು
ಮುನಿದು ಮಲೆತೊಡೆ ಭೀಷ್ಮನಾತನ
ಮನಕೆ ಭೀತಿಯನಿತ್ತನೀತನೊ
ಳೆನಗೆ ಸರಿನೂಕುವದೆ ಕಾಳಗವೆಂದನಾ ಪಾರ್ಥ ೬೪

ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ
ಹುತ್ತಕುರಗನು ಬಗಿದು ಹೊಗುವವೊ
ಲುತ್ತರಿಸಿದವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ೬೫

ನರನ ಶರದಲಿ ಭೀಷ್ಮನೆದೆ ತನು
ಬಿರಿಯೆ ಮೈ ಝೋಂಪಿಸಿತು ಸಲೆ ತರ
ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ
ಅರರೆ ಸೋತನು ಭೀಷ್ಮನಿನ್ನೇ
ನುರಿದುದೋ ಕುರುಸೇನೆ ಯಾವೆಡೆ
ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ ೬೬

ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುರತಿರಥರು ೬೭

ಕಲಕಿ ಕೆದರಿದ ಬಲಜಲಧಿಯೊ
ಬ್ಬುಳಿಗೆ ಬಂದುದು ತಳಿತ ಸತ್ತಿಗೆ
ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ
ಉಲಿವ ಕಹಳೆಯ ಬೈಗುಳೆಡಗೈ
ತಳದ ಬಾಯ್ಬಲಗೈಯನೊಲವುತ
ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ೬೮

ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ
ಹುಗ್ಗಿಗರ ಬಲುಹುರಿಯ ನಿಗುಚುವೆ
ನಿಗ್ಗುವೆನು ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ ೬೯

ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಹದರಿನೊಳವಗಡಿಸಿ ಹೊಂ
ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ ೭೦

ಬಾಲ ವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ೭೧

ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ
ಜಾರಿ ಹೋಯಿತ್ತವಧಿಯಿನ್ನೀ
ಮೀರಿ ಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನ್ನುತ್ತ ನರನೆಚ್ಚ ೭೨

ಅರಿಯೆ ನೀನೆಲೆ ಮರುಳೆ ಗರುಡನ
ತರವಳಿಕೆಯಲಿ ಹಾವು ಕನ್ನವ
ಕೊರೆದು ಬದುಕುವದೇ ವೃಥಾ ಕಕ್ಕುಲಿತೆ ನಿನಗೇಕೆ
ತರಿದು ತಿರಿಕಲ್ಲಾಡುವೆನು ನಿ
ಮ್ಮುರುವರೈವರ ಶಿರವನರ್ಜುನ
ಬರಿದೆ ಗಳಹುದಿರೆನುತ ಕೌರವರಾಯ ತೆಗೆದೆಚ್ಚ ೭೩

ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನೆಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯೆ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ೭೪

ನವ ನಿಕಾರಿಯ ವಲ್ಲಿ ಸೀರೆಗ
ಳವಯವದ ರಕುತದಲಿ ತೋದವು
ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ
ಕವಿದನರ್ಜುನನೋಡದಿರು ಕೌ
ರವ ಪಲಾಯನವಕಟಕಟ ಪಾ
ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವದಿಲ್ಲೆಂದ ೭೫

ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ೭೬

ಹುರುಳುಗೆಟ್ಟುದು ಗರುವತನವೆಂ
ದರಸ ನಾಚಿದನಧಿಕ ಶೌರ್ಯೋ
ತ್ಕರುಷೆಯಲಿ (ಪಾ: ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮ ತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ ೭೭

ನೊಂದನವನಿಪ ನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು
ಒಂದು ಕಡೆಯಲಿ ಮಸಗಿದರು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು ೭೮

ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು
ನರನ ಮುತ್ತಿದರೊಂದು ಕಡೆಯಲಿ
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ೭೯

ಅಂಗವಿಸಿತರಿ ಸೇನೆ ಲೋಕವ
ನುಂಗಿ ಕುಣಿಯಲು ಬಗೆವ ಭರ್ಗನ
ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ
ಭಂಗಿತರ ಮರುವಲಗೆಯಲಿ ಸ
ರ್ವಾಂಗಬಲ ಜೋಡಿಸಿತು ನಮ್ಮುಳಿ
ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ ೮೦

ನೆರೆದ ತಿಮಿರದ ಥಟ್ಟು ಸೂರ್ಯನ
ತೆರಳಿಚುವವೊಲ್ ಮೇಘ ಘಟೆಗಳು
ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ
ತೆರಳೊದತ್ತಂಬರಿಸಿ ಕುರುಬಲ
ವೊರಲಿ ಹೆಣನನು ತುಳಿದು ಮೇಲ
ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ೮೧

ಎಸಲು ಸನ್ಮೋಹನದ ಶರ ಪಸ
ರಿಸಿತು ಬಲದಲಿ ಬಹಳ ನಿದ್ರಾ
ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು
ಉಸುರ ಸಂಚದ ನಾಡಿಯವಗಾ
ಹಿಸಲು ಕೊರೆದರು ಗುರುಕಿಡುತ ತಲೆ
ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ೮೨

ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು
ತೊನೆದು ಕೆಡೆದವು ಜೋಧರಾಗಳು
ಕನಲಿ ಕೆಡೆದರು ಗುರು ನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ೮೩

ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು
ಬಿಗುವು ಸಹಿತವೆ ಹೊನ್ನ ಮರಗೋ
ಡುಗಳ ಮೇಲಡಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ ೮೪

ಬಿಲು ಸೆಳೆಯೆ ಕೈದುಗಳು ಕೈಯಿಂ
ಚಲಿಸಲೊಬ್ಬರನೊಬ್ಬರತ್ತಲು
ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ
ತಲೆಯೊಳಾನಿಸಿ ಗುರುಗುರಿಸಿ ರಥ
ದೊಳಗೆ ಸಾರಥಿವೆರಸಿ ನಿದ್ರಾ
ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು ೮೫

ಸರಳ ಸೊಕ್ಕವಗಡಿಸಿ ಸಲೆ ಮೈ
ಮರೆದನಿತ್ತಲು ದ್ರೋಣ ರಥದಲಿ
ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ
ಕರದ ಬಿಲು ಶರ ಸರಿಯೆ ಕಂಗಳು
ಮುರಿಯೆ ಕರ್ಣನು ಕೆನ್ನೆಗೆದೆಯೊಳು
ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ ೮೬

ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು ೮೭

ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾ ತ್ರಿತಯದಲಿ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ಶರಕೆ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ ೮೮

ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಗೆಡಹಿದನು ಮೋಹನ ಮಂತ್ರ ಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ೮೯

ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲ ಚಾಚಿದ
ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ
ಸುಲಿದು ಕರ್ಣನ ಮುಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ೯೦

ಧರಣಿಪಾಲರ ಮುಕುಟವನು ಕ
ತ್ತರಿಸಿ ದುಶ್ಶಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ೯೧

ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ ೯೨

ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲು ರಥದಿ ನಿಜನಗರಿಗೈತಂದ ೯೩

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)

Thursday, May 13, 2010

ಕರ್ಣಪರ್ವ: ೦೪. ನಾಲ್ಕನೆಯ ಸಂಧಿ

ಸೂ: ರಾಯದಳ ಮಝ ಪೂತುರೆನೆ ರಿಪು
ರಾಯ ಸೇನೆಯ ಮುರಿದು ಪಾಂಡವ
ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ

ಫಡ ಫಡೆಲವೋ ಶಲ್ಯ ಮಕ್ಕಳ
ಬಡಿದು ಬೆರೆದೈ ಬಾಹುಬಲದಲಿ
ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ
ಘುಡುಘುಡಿಸಿ ರೋಮಾಂಚನದ ಹೊರ
ಗುಡಿಯ ಸೊಂಪಿನ ಮೈಯ್ಯ ಕಡುಗಲಿ
ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ೧

ಬಾಯಿ ಬಡಿಕರು ಯಾದವರು ಗರು
ವಾಯಿ ನಿನಗೆಲ್ಲಿಯದು ಸುಭಟರಿ
ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ
ಸಾಯಕವ ಹಿಡಿ ಸಾಕು ಸೋಲದ
ತಾಯಿಮನೆ ನಿನಗಿದಿರಲಿದೆ ನಿ
ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ೨

ಎಲವೋ ಮಾದ್ರಾಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ೩

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ೪

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ ೫

ತೆಗೆಸಿದನು ಸಾತ್ಯಕಿಯನೀತನ
ಬಿಗಿದನಂಬಿನಲವನ ಬಾಣಾ
ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ
ಜಗುಳಿದನು ಕಲಿ ನಕುಲ ರಥ ವಾ
ಜಿಗಳ ಜೋಡಣೆ ಬಿಚ್ಚಿ ರಕುತವ
ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ೬

ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೆ ನೀನೇನಹೆ ಮಹಾ ಸಂ
ಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ೭

ನೋವನೇ ನೊಣವೂರಿದರೆ ಸಹ
ದೇವನೆಲವೋ ನಿನ್ನ ಕೊಂದಡೆ
ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ
ತಾವಕನ ಸಾರಥಿಯ ರಥ ತುರ
ವಯಳಿಯನಾಯುಧವ ಖಂಡಿಸೆ
ಜೀವಗಳ್ಳರ ದೇವ ಪಸರಿಸಿದನು ಪಲಾಯನವ ೮

ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ೯

ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿದೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ೧೦

ಆರಿವರು ನಕುಳಾಂಕರೇ ಜ
ಜ್ಜಾರತನವೇ ನಮ್ಮೊಡನೆ ನೀ
ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ
ಭಾರಿಯಾಹವದೆಡೆಗೆ ನಿಮ್ಮನಿ
ದಾರು ಬಿಟ್ಟರುಪಾಯದಲಿ ನಿಮ
ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ೧೧

ತೊಲತೊಲಗು ತರುವಲಿಗೆ ರಣವಿದು
ಸುಲಭವೇ ಲೋಕೈಕವೀರರು
ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ
ಗೆಲುವ ನಂಬುಗೆ ನಿನ್ನ ತಂದುದು
ಕೊಲೆಗೆ ನೋಡಾದರೆಯೆನುತ ಕೈ
ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ೧೨

ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೋಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ೧೩

ಆಳು ನೀನಹುದೆಲವೊ ಕರ್ಣ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸು ಸೈರಿಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯನೆ ಕೊಳ್ಳೆನುತ ನಕುಲನನೆಚ್ಚನಾ ಕರ್ಣ ೧೪

ತಾಗಿದವು ನಾಲ್ಕಂಬು ದೇಹದ
ಬೇಗಡೆಯಲೆಂಟಂಬು ನುಸುಳಿದ
ವಾಗ ಹದಿನಾರಂಬು ಹರಿದವು ಮತ್ತೆ ಬಳಸಲಿಸಿ
ಸೂಗುರಿಸಿ ಝೊಮ್ಮಿನಲಿ ಮುಂದಕೆ
ಬಾಗಿ ಬಿದ್ದನು ಸಾರಥಿಯ ಕೈ
ಲಾಗಿನಲಿ ತಿರುಗಿದನು ನಕುಳನು ರಾಜ ಮೋಹರಕೆ ೧೫

ಹರಿಬದಾಹವವೆನಗೆ ತನಗೆಂ
ದುರವಣಿಸಿದರು ಚೇಕಿತಾನಕ
ದುರುಳ ಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಸೃಂಜಯರು
ಬರಲಿ ಬರಲೀ ಹೊಟ್ಟ ತೂರುವ
ಡರಸು ಮೋಹರವೇಕೆ ಸಾಕೆಂ
ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ೧೬

ದಳಪತಿಯ ಹಿಂದಿಕ್ಕಿ ಪಾಂಡವ
ಬಲ ಮಹಾರಥರುರವಣಿಸಿ ಮೂ
ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ
ಕೊಲೆಗೆ ಬೇಸರರಿವರು ಸಾವುದ
ಕಳುಕದವದಿರು ಹೇಳುವೆಡೆ ನಾ
ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ೧೭

ವಿರಥರಾದ ಶಿಖಂಡಿ ಮೊದಲಾ
ದರಿಭಟರು ಜಾರಿದರು ಸುಭಟರ
ನೊರಸಿ ಕೊಂದೇರಿದನು ಕೆದರಿದರವರು ರಿಪುಬಲವ
ದೊರೆಗೆ ಹತ್ತಿರೆಯಾಯ್ತು ಕಾಳೆಗ
ವರಿದೆನಲು ನಿಸ್ಸಾಳಕೋಟಿಯ
ಧರದುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ೧೮

ಭಟರ ತೆಗೆತೆಗೆ ಪಾರ್ಥನೋ ರಿಪು
ಕಟಕ ಭೈರವನೋ ವೃಥಾ ಸಂ
ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ
ಲಟಕಟಿಸಿ ಬಲವೊದರಲಪ್ರತಿ
ಭಟರು ಬಳಿಕನುವಾಯ್ತು ವಿಜಯೋ
ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ೧೯

ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚರರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚದಿರಿರಾಗಿ ೨೦

ಆರಿದಿಪ್ಪತೈದು ಸಾವಿರ
ತೇರು ಸರಿಸದಲೊಂದು ವಾಘೆಯ
ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ
ಸಾರಿಗೆಗೆ ಸಾರಿಗೆಗೆ ಬಾಣಾ
ಸಾರವಿಪ್ಪತೈದು ಸಾವಿರ
ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ೨೧

ಸುರಿದುದತಿವಳೆಯೆಂದು ಕುಲಗಿರಿ
ಕರಗುವುದೆ ಮೇಗರೆಯ ಶಿಲೆಯಿ
ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ
ಅರಿ ಮಹಾರಥರನಿಬರೈಸರ
ಸರಳು ಸಂಖ್ಯಾತೀತವದರೊಂ
ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳೆಂದ ೨೨

ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ೨೩

ಘಾಯವಡೆದರು ಘಾಸಿಯಾದರು
ಬಾಯಲೊಕ್ಕುದು ಕರುಳು ಮಕ್ಕಳು
ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ
ನಾಯಕರು ಹಲರುಳಿದುದಧಿಕರು
ಹಾಯಿದರು ಹೂಣಿಗರು ಹರಿಹಂ
ಚಾಯಿತಿಪ್ಪತೈದುಸಾವಿರ ವರ ಮಹಾರಥರು ೨೪

ಎಲೆಲೆ ಸಂಶಪ್ತಕರ ಭಾರಿಯ
ಬಲ ಮುರಿದು ಬರುತಿದೆ ವಿಘಾತಿಗೆ
ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ
ಜಲಧಿ ಬರುತುದು ರಾಜ್ಯಕಾರ್ಯಕೆ
ನಿಲುವಡಿದು ಹೊತ್ತೆನುತ ಮಂತ್ರಿಗ
ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ೨೫

ಕರವ ನೆಗಹಿದನಕಟ ಹೋಹೋ
ಬಿರುದರಂಜದಿರಂಜದಿರಿ ನಿ
ಮ್ಮರಿಭಟಗೆ ನಾಲ್ಕಿಲ್ಲ ಕೈಕಣ್ಣಿಲ್ಲ ನೊಸಲಿನಲಿ
ದೊರೆಯ ಕೈಯನು ಕಂಡ ಬಳಿಕೋ
ಸರಿಸಿರೈ ಪರಿವಾರ ದೂರದ
ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ೨೬

ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ರಾಯನಿದಿರಲಿ
ಹೇಡಿ ಕಲಿಯಹರೆಂಬರಿವದಿರು ಹೇವಮಾರಿಗಳೆ
ಜಾಡಿಸುವ ಝಲ್ಲರಿಯ ಮೋರೆಗೆ
ನೀಡಿ ಮರುಳುವ ಸೀಗುರಿಯ ದಳ
ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ೨೭

ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾವಹ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಪುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ೨೮

ಎರಡು ದಳ ಗಂಟಿಕ್ಕಿದುದು ನೆಲ
ಬಿರಿಯೆ ಬೆರಸಿತು ಹೊಯ್ದರುರುಳುವ
ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ
ಪರಿವಿಡಿಯದಂತಿರಲಿ ದೊರೆದೊರೆ
ಯುರವಣಿಸಿ ಹಳಚಿದರು ಪಾಂಡವ
ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ೨೯

ಅರಸರಿವರೇ ಶಿವಶಿವಾ ನಿ
ಷ್ಕರುಣರೈ ನೀವೆಮ್ಮವೊಲು ಮೊನೆ
ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ
ಒರಟರರ್ಜುನ ಭೀಮರತಿ ನಿ
ಷ್ಠುರರು ನಾವಡಿಮೇಲಹೆವು ನೀವ್
ಮರಳಿ ಬಿಜಯಂಗೈವುದೆಂದನು ಕೌರವರರಾಯ ೩೦

ಕೋಲ ಬಲುಹುಂಟಾಗೆ ನಾಲಗೆ
ಹೋಲ ನುಡಿಯದು ಹೊಲ್ಲದೇನಿದು
ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು
ಆಳುತನಕಾಭರಣವೇ ಮಾ
ತಾಳಿತನ ಕೈದೋರದಹಿತನ
ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ೩೧

ಖರೆಯರಲ್ಲಾ ನೀವು ಕೊಂತಿಯ
ವರ ಕುಮಾರರು ನಿಮ್ಮೊಡನೆ ಸಂ
ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು
ಸರಳು ಗಹನವ ಹೊದಿಸಿದವು ಹೂಂ
ಕರಿಸಿದವು ಹರೆಗಡಿದವರಿಮೋ
ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ೩೨

ಎಚ್ಚನೆಂಟಂಬಿನಲಿ ಕೌರವ
ನೆಚ್ಚ ಬಾಣವ ಕಡಿದು ನೂರರ
ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ
ಎಚ್ಚನರಸನನಾ ಶರವ ಕಡಿ
ದೆಚ್ಚನವನಿಪನುಭಯರಾಯರ
ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ೩೩

ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಆಮಿತ ರೋಷ ವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳೆಂದ ೩೪

ಗೆಲುವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ೩೫

ಸೆಳೆದು ಹಿರಿಯುಬ್ಬಣವನವನಿಪ
ಕೆಲಕೆ ಚಿಗಿದನು ಹಾ ಮಹಾದೇ
ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದೆನೆನುತ ಬಲ ಬೆದರೆ
ಬಿಲುದುಡುಕಿ ಕೃತವರ್ಮ ಕೃಪ ಸೌ
ಬಲ ಕೃಪಾನುಜ ಶಲ್ಯ ಗುರುಸುತ
ದಳಪತಿಗಳೇರಿದರು ರಾಯನ ಸುತ್ತುವಳಯದಲಿ ೨೬

ದೊರೆಗೆ ಬಿದ್ದುದು ಭಾರಿಯಾವಹ
ವರರೆ ಬರಹೇಳೆನುತ ಕವಿದುದು
ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು
ಬಿರುದ ಧೃಷ್ಟದ್ಯುಮ್ನ ಮಾದ್ರೇ
ಯರು ಶಿಖಂಡಿ ಯುಯುತ್ಸು ಸೃಂಜಯ
ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ೩೭

ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ೩೮

ರಾಯರಿಬ್ಬರ ಮನದ ತಿಮಿರದ
ತಾಯಿಮನೆಯೆಂಬವೊಲು ತಾ ಪೂ
ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ
ರಾಯ ಮೋಹರ ತೆಗೆದವೆರಡು ವಿ
ಡಾಯಿಯಲಿ ಬಹುವಿಧದ ವಾದ್ಯ ನ
ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ೩೯

(ಸಂಗ್ರಹ: ಸುಬ್ರಹ್ಮಣ್ಯ)

Wednesday, May 12, 2010

ಕರ್ಣಪರ್ವ: ೦೩. ಮೂರನೆಯ ಸಂಧಿ

ಸೂ : ರಣಭಯಂಕರನಹಿತ ಸುಭಟರ
ಹಣಿದವನು ಹೊಯ್ದಾಡಿ ಸಾತ್ಯಕಿ
ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ

ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ರೋಷ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ ೧

ಕಳೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಪದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ ೨

ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ ೩

ಅರರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರನೆಚ್ಚನು ಕೊಂದನೀಪರಿ ಹತ್ತು ಸಾವಿರವ ೪

ಬಿದ್ದವಗಣಿತ ತುರಗ ದಳ ಕೈ
ಮುದ್ದೆಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ ೫

ಥಟ್ಟು ಮುರಿದುದು ಕೊಂಡ ನೆಲವನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜಗ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ ೬

ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ ೭

ಕೆಣಕಿದರೆ ಭುಗಿಲೆಂದುದೀತನ
ರಣ ಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣೆದವೋ ನಿನ್ನಾಳು ಕುದುರೆಯನರಿಯೆ ನಾನೆಂದ ೮

ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸು ಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ ೯

ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ ೧೦

ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಯಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ ೧೧

ಪೂತು ಮಝ ದಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜ ಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು ೧೨

ಮುರಿದ ಬಲ ಗರಿಗಟ್ಟಿತೊಗ್ಗಿನ
ಲೊರಲಿದವು ನಿಸ್ಸಾಳ ಕಹಳೆಯ
ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ
ತುರುಗಿ ತೂಳುವ ಸಿಂಧ ಸೆಳೆ ಮಡ
ಲಿರಿವ ಝಲ್ಲರಿ ಪಲ್ಲವದ ನಿಡು
ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು ೧೩

ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ ೧೪

ಭಾರಿಯಾಹವವಾಯ್ತು ಖಿಳದಳ
ಭಾರ ಬಿದ್ದುದು ಸಾತ್ಯಕಿಯ ಸುರ
ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು
ಹೋರಿದರೆ ಹುರುಳಿಲ್ಲೆನುತ ಪರಿ
ವಾರವೊರಲಿತು ಪಾಂಡ್ಯ ಕೈಕೆಯ
ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ ೧೫

ಮುಂದೆ ಹರಿದರು ಪಾಂಡು ತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ ೧೬

ಹೆರತೆಗೆದು ಕೆಲಸಾರಿ ಮಕ್ಕಳು
ಮರಿಗಳಿಗೆ ರಣವೇಕೆ ಪಾಂಡವ
ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ
ಇರಿವ ಭಟನಹೆ ಯಾದವರ ಬಡ
ಕರುವೆ ಬಾ ಬಾ ಎಂದು ಚಿಟಿಕಿಸಿ
ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ ೧೭

ಸಾರು ನೀ ಸಾರೆಲವೊ ಭೀಮನ
ತೋರಗರುಳಿನ ದಂಡೆಯನು ಕೈ
ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ
ಆರಿದನು ಜಗ ನಡುಗಲಾ ಜಂ
ಭಾರಿ ಜವಗೆಡೆ ಬೊಬ್ಬಿರಿದನಾ
ಭಾರತದ ಭಾರಣೆಯಲೈದಿದನನಿಲ ನಂದನನ ೧೮

ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ ೧೯

ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ ೨೦

ಜಾಗು ಮಝರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಬಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ ೨೧

ಎಲೆಲೆ ಹಾರುವನೇಕೆ ಹರಿಮೇ
ಖಳೆಯ ಕೇಳಿಕೆಯೇಕೆ ಪಡಿಮ
ದ್ದಳೆಯಬಡಿಕರ ಬಿಂಕ ಮೇಳವವಿಲ್ಲಲಾ ನಿನಗೆ
ಹೊಲುಬುಗೆಡುವನೆ ಭೀಮನೀ ಸರ
ಳೊಳಗೆ ಹುಸಿಯೇಕೆನುತ ಬಾಣಾ
ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ ೨೨

ರಥದ ಮೇಲಂಬುಗಳು ರಿಪು ಸಾ
ರಥಿಯ ಮೈಯಲಿ ಘಾಯ ತುರಗ
ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ
ಶಿಥಿಲವಾದುವು ಗಾಲಿಗಳು ಬಳಿ
ರಥಿಕರೀತನ ಬಿಟ್ಟು ಹಾಯ್ದರು
ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ ೨೩

ನೊಗವನೀಡಾಡಿದನು ಕುದುರೆಗ
ಳೊಗಡಿಸಲು ರಕುತವನು ಸಾರಥಿ
ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ
ಒಗುವ ನೆತ್ತರ ಸುರಿವ ಬಾಣದ
ನುಗುತೆಗಂಡಿಯ ಮೆಯ್ಯ ಭೀಮನ
ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ ೨೪

ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ ೨೫

ನನೆದ ಜಾಜಿನ ಗಿರಿಯೊ ಭೀಮನ
ತನುವೊ ಖಂಡಿತ ರಕ್ತಚಂದನ
ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ
ಮನ ಹಣುಗಿ ತುಟಿಯೊಣಗಿ ನೋಟದ
ಮೊನೆ ಮುರಿದು ಝೋಂಪಿಸುತ ಮುಂದಣಿ
ಗೊನೆದು ಬಿದ್ದನು ಭೀಮ ಪಾಂಡವ ಸೇನೆ ಕಳವಳಿಸೆ ೨೬

ಅಹಹ ವೈರಿಗೆ ಧರೆಗೆ ಪಾಣಿ
ಗ್ರಹಣವಾಯಿತೆ ಪಾಂಡುಸುತರಿಗೆ
ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ
ಅಹಿತರಿಗೆ ಗೆಲುವಾಯ್ತು ನಮಗಿ
ಲ್ಲಿಹುದು ಮತವಲ್ಲೆನುತ ಸಾರಥಿ
ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ ೨೭

ತಂದೆಯಳಿದಾ ಹೊತ್ತು ಹಗೆಯನು
ಕೊಂದು ಸಾಯದೆ ದೇಹ ಮೋಹಕೆ
ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ
ಎಂದು ಸಾರಥಿ ಶೋಕಿಸುತ ಗುರು
ನಂದನನ ಕೊಂಡೊಯ್ದನಿತ್ತಲು
ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ ೨೮

ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕದು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕೆಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಸೃಂಜಯರು ೨೯

ಬಲಿದುದಾಹವ ಮತ್ತೆ ಚಾತು
ರ್ಬಲ ಛಡಾಳಿಸಿ ಕಾದುತಿರ್ದುದು
ಮುಳಿದು ಶಲ್ಯನ ಕೊಡೆ ಪಂಚದ್ರೌಪದೀಸುತರು
ಅಳವಿಗೊಟ್ಟಿರಿಯಕಟಕಟ ಮ
ಕ್ಕಳಿರ ನಿಮಗೇಕಿದು ಯುಧಿಷ್ಠಿರ
ಫಲುಗುಣರ ಬರಹೇಳಿರೆನುತೆಚ್ಚನು (ಪಾ: ಬರಹೇಳೆನುತಲೆಚ್ಚನು) ಮಹಾಸ್ತ್ರದಲಿ ೩೦

ಎಚ್ಚನಿವನಿವನೊಡನೆ ಬಾಣವ
ಕೊಚ್ಚಿದರು ಕೊಡಹಿದರು ಶರದಲಿ
ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ
ಬೆಚ್ಚಿದವು ರಥವಾಜಿ ಹತ್ತಿಗೆ
ಬಿಚ್ಚಿ ರಥ ನುಗ್ಗಾಯ್ತು ಶೌರ್ಯದ
ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು ೩೧

(ಸಂಗ್ರಹ : ಸುಬ್ರಹ್ಮಣ್ಯ)

Tuesday, May 11, 2010

ಗದಾಪರ್ವ: ೦೩. ಮೂರನೆಯ ಸಂಧಿ

ಸೂ. ರಾಯದಳ ಸಲೆ ಸವೆಯೆ ಸಮರದ
ನಾಯಕರು ನೆರೆ ಮುರಿಯಲಾ ದ್ವೈ
ಪಾಯನ ಸರೋವರವ ಹೊಕ್ಕನು ಕೌರವರ ರಾಯ

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರ ದಿಶಾಭಿಮುಖವಾಗಿ ೧

ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸೆಗೊಂಡ ೨

ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೂರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು ೩

ಆ ಸುಯೋಧನ ಸೇನೆಯಲಿ ಧರ
ಣೀಶ ಕೃಪ ಕೃತವರ್ಮ ಗುರುಸುತ
ರೈಸುಬಲದಲಿ ನಾಲ್ವರುಳಿದರು ಹೇಳಲೇನದನು
ಏಸು ಬಲವೆನಿತೈಶ್ವರಿಯವಿ
ದ್ದೇಸು ಭಟರಿನಿತಗ್ಗಳೆಯರಿ
ದ್ದೇಸರಲಿ ಫಲವೇನು ದೈವವಿಹೀನರಿವರೆಂದ ೪

ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು ೫

ಸೆಳೆದಡಾಯ್ದವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ ೬

ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳೀಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ ೭

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಜೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ ೮

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ ೯

ಓಡದಿಹ ನರಿ ಹದ್ದು ಕಾಗೆಗೆ
ಕೂಡ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತ ಪಾನದ ಶಾಕಿನೀಜನವ ೧೦

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ ೧೧

ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಗೆ ಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ ೧೨

ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸೆರ ಬಳಿಬಳಿದು
ಗಡಣ ಹೆಣದರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ ೧೩

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹೆಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದುಬಯ್ದಡಿಗಡಿಗೆ ಸುಯ್ವವನ ೧೪

ಭೂತರವ ಭೇತಾಳ ಕಲಹ ವಿ
ಭೂತ ಜಂಬುಕ ಘೂಕ ಕಾಕ
ರ್ವಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಅತು ಮರಳಿದು ಹಿಂದು ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ ೧೫

ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ ೧೬

ಬಂದು ಕಂಡನು ರಾಜವನ ಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿವ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ ೧೭

ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ ೧೮

ರಣಮುಖದೊಳೇಕಾದಶಾಕ್ಷೋ
ಹಿಣಿಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಬಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ ೧೯

ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾಹುದೆ ಸುಗೀತದ
ರಸದ ಮಧುವಿಂಗಾಂತ (ಪಾ: ಮಧುವಿಗಾಂತ) ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ ೨೦

ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ
ಸುಳಿಯೆ ಕೈಗೊಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ ೨೧

ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯೆ ಘಟನೆ ನೃಪಾಲ ನಿನಗೆಂದ ೨೨

ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದರು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕೆಡೆಯಲೊಬ್ಬನೆ ಕೆಟ್ಟೆ ನೀನೆಂದ ೨೩

ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ ೨೪

ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸು ಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ ೨೫

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕೊಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ ೨೬

ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ ೨೭

ಕೇಳು ಸಂಜಯ ಪೂರ್ವ ಸುಕೃತದ
ಶಾಳಿವನವೊಣಗಿದೊಡೆ ಭಾರಿಯ
ತೋಳಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ ೨೮

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥತೆ
ಒದರಿದಡೆ ಫಲವೇನು ಸಂಜಯ ಹಿಂದನೆಣಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ ೨೯

ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯವನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣ ಶಕ್ತಿಗೆ ಭಂಗಬಾರದು ನೋಡು ನೀನೆಂದ ೩೦

ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವ ತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಹೀನನೈ ನೀನಕಟ ಸಂಜಯ ಎಂದನಾ ಭೂಪ ೩೧

ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲೆಂದ ೩೨

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನೊಲ್ಲೆ ನಾನೆಂದ ೩೩

ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ದಿಗಲಿಸೆಂದ ೩೪

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ ೩೫

ತೆಗೆಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ ೩೬

ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ ೩೭

ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ ೩೮

ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕವಿದುರರಿಗರುಹು ನೀನೆಂದ ೩೯

ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ ೪೦

ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗೆಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ ೪೧

ಚರಣವದನಕ್ಷಾಲನಾಂತಃ
ಕರಣಶುದ್ದಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಪುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ ೪೨

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ ೪೩

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುವ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ ೪೪

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ ೪೫

(ಸಂಗ್ರಹ: ಸಂತೋಷ್ ಮತ್ತು ರಶ್ಮಿ)