ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Wednesday, April 28, 2010

ವಿರಾಟಪರ್ವ: ೦೭. ಏಳನೆಯ ಸಂಧಿ

ಸೂ: ಕದನ ಚೌಪಟ ಮಲ್ಲ ಪರಬಲ
ಮದನ ಮದಹರ ರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ ೧

ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ೨

ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ
ಇದು ಸಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ ೩

ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹ ರವವಿದೆ
ತುರಗ ದಳ್ಳುರಿ ಸಾರುತಿದೆ ಸಂ
ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ ೪

ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸಾಮಿಯ
ನಿಳಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ ೫

ನರನು ನರನೆಂದೆನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ ೬

ಹೊಕ್ಕು ತಾ ಬಳಲಿಸಿದೊಡೆ ಹಿಂ
ದಿಕ್ಕಿ ಕೊಂಬವರಾರು ಹಗೆವನ
ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ ೭

ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕೆಲಬರಿ
ಗನಿಮಿಪರಿಗಳವಲ್ಲ ಬಲ್ಲೈ ಪಾರ್ಥನಧಟುಗಳ ೮

ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ ೯

ಬಾಗಿಸಿದ ಬಿಲ್ಲಿನಲಿ ರಾಯರ
ಮೂಗ ಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ ೧೦

ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ
ಮರುಳು ಹಾರುವ ಗದ್ಯಪದ್ಯದ
ಸರಸ ವಿದ್ಯಗಳಲ್ಲದೀ ಸಂ
ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ ೧೧

ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸೆಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯವ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ ೧೨

ಇಂದು ಪಿತೃದಿನವಿಂದು ಸಂಕ್ರಮ
ಣಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು
ಬಂದು ನಾನಾ ಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ ೧೩

ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ
ಬಿಲ್ಲ ವಿದ್ಯಾ ವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ ೧೪

ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗೆಗಳಲುಗಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ
ಕೀಳು ಜಾತಿಗೆ ತಕ್ಕ ನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ ೧೫

ನಗುವೆ ವಿಪ್ರರನಾವ ರಾಯರ
ಮಗನು ಹೇಳಾ ದಾನ ಧರ್ಮಾ
ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ
ಜಗವ ರಕ್ಷಿಸಲಾವು ಕೊಂಬೆವು
ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ
ದಿಗಳು ಕೊಡುವರು ತತ್ಪ್ರತಿಗಹ ಯೋಗ್ಯವಲ್ಲೆಂದ ೧೬

ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬವನೊ ಕೊಡುವವನೊ
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನವ ಭವವ ನೆನೆಯೆಂದ ೧೭

ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ೧೮

ತೆಗೆದು ತಾಳಿಗೆ ಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತನ್ನೋ
ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ ೧೯

ಆಳು ಮತ್ಸರದಧಿಕ ರೋಷದ
ಮೇಲುನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗೆದನುಚಿತೋಕ್ತಿಯಲಿ ಸಂತೈಸಿ
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ ೨೦

ಬಂದು ಭೀಷ್ಮಂಗೆರಗಿ ಕೈಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ
ಸಂದುದಿಲ್ಲಜ್ಞಾತವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ ೨೧

ಮಗನೆ ಕೇಳಿರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ ೨೨

ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ೨೩

ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವಡೆ
ಬೇಕು ಬೇಡೆಂಬುವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ ೨೪

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನ ಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆನಗಿಲ್ಲ ವೈರವ
ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ ೨೫

ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಿಭುಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ ೨೬

ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ
ವೀರ ಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ ೨೭

ಇತ್ತಲಖಿಲ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ ೨೮

ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ
ಅರಿದು ಕೊಂಬೆನು ಕೊಳ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗುವೇಗವ ನೋಡು ನೀನೆಂದ ೨೯

ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ
ಜನಪ ಬಿಡು ಬಿಡು ತುರುಗಳನು ಫಲು
ಗುಣ ಕಣಾ ಬಂದವನು ಕುರುಕುಲ
ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ ೩೦

ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು
ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ ೩೧

ನಗುತ ಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ ೩೨

ಬಿರಿದವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಡ ಗರ್ಜನೆಗೆ
ಶಿರವೊಡೆದು ಸಿಡಿಯಿತು ಕಿರೀಟಿಯ
ಪರಮ ಶಂಖಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ ೩೩

ಎಲೆಲೆ ನರನೋ ಸುಭಟ ಜೀವನ
ದಳವುಳಿಗನೋ ದಿಟ್ಟ ರಾಯರ
ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ
ಗೆಲುವರಾವೆಡೆ ಕರ್ಣ ಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ ೩೪

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊತ್ತ ಹಗೆವನ
ಸರಳಿಗಸುಗಳ ತೆರೆದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟದು ರಾಯರಿದಿರಿನಲಿ ೩೫

ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ ೩೬

ತುಡುಕಿ ಖಂಡವ ಕಚ್ಚಿ ಹಾರುವ
ಗಿಡಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳ ನಡೆ
ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ ೩೭

ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮ ಸೀಳಾಗಿ ಬಿದ್ದುವು ಗಜದ ಹೋಳುಗಳು
ಕೊರಳು ಹರಿದೊರೆವೆದ್ದ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರುಗ ರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು ೩೮

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಹಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ೩೯

ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ ೪೦

ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಗಣಕೆ ಛತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು ೪೧

ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು ೪೨

ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು ೪೩

ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರ ಸಂಧಾನವಾವ ವಿಹಾರವಾವ ಪರಿ
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಷ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ ೪೪

ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯ್ತು ಸುರ ಕಟಕ ೪೫

ಏರುವಡೆದರು ಕೆಲರು ಕೆಲರಸು
ಸೂರೆಯೋದದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ ೪೬

ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ ೪೭

ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು ೪೮

ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳು ಸಂಗರ ವಿಜಯಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ ೪೯

ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ ೫೦

ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದದು ಹಿಂಡು ಹಿಂಡಿನಲಿ ೫೧

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ
ಅರಸು ಮೋಹರ ಮುರಿದು ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ ೫೨

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

No comments: