ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Monday, February 1, 2010

ವಿರಾಟಪರ್ವ: ೦೩. ಮೂರನೆಯ ಸಂಧಿ

ಸೂ: ರಾಯ ಕುರುಬಲ ವಿಲಯ ಹರನಬು
ಜಾಯತಾಕ್ಷಿಯ ಸಲಹಿ ಕೀಚಕ
ರಾಯ ವಂಶಾರಣ್ಯವನು ಸವರಿದನು ಕಲಿಭೀಮ

ಬಯಸಿದಳು ಮೃತ್ಯುವನು ಕಡು ಪಾ
ಪಿಯ ಮನೋಧರ್ಮವನು ಜನಮೇ
ಜಯ ಮಹೀಪತಿ ಕೇಳು ಪಾಂಚಾಲಿಯನು ಕರೆಸಿದಳು
ನಯವಿಹೀನೆ ಸುದೇಷ್ಣೆ ಬಂದಾ
ಕೆಯನು ಬೆಸಸಿದಳೆಲೆಗೆ ಅನುಜಾ
ಲಯದಲುತ್ತಮ ಮಧುವ ನೀ ಝಡಿತೆಯಲಿ ತಹುದೆಂದು ೧

ಅಮ್ಮೆನಲ್ಲಿಗೆ ದೇವಿ ನಿಮ್ಮಯ
ತಮ್ಮ ದುರುಳನು ಲೇಸು ಹೊಲ್ಲೆಹ
ವೆಮ್ಮ ತಾಗುವದಾತನಳಿದರೆ ಬಳಿಕ ಹಳಿವೆಮಗೆ
ನಿಮ್ಮ ನಾವೋಲೈಸಿ ನಿಮಗೆ ವಿ
ಕರ್ಮವನು ಮಾಡುವದು ನಮಗದು
ಧರ್ಮವಲ್ಲುಳಿದವರ ಕಳುಹುವದೆಂದಳಿಂದುಮುಖಿ ೨

ಎನಗೆ ಭುಗಿಲೆಂದಳು ಸುಡೇತಕೆ
ಮನದ ಗರ್ವವ ನುಡಿವೆ ನಿನ್ನಿಂ
ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು
ಅನುಜನಾರೆಂದರಿಯೆ ಸಾಕಾ
ತನ ಸಮೀಪಕೆ ಹೋಗಿ ಬಾ ನಡೆ
ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ ೩

ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ನಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು
ಸೇವಿಸುವದೇ ಕಷ್ಟವೆಂಬುದು
ಕೋವಿದರ ಮತ ಶಿವ ಶಿವಾ ರಾ
ಜೀವಲೋಚನ ಕೃಷ್ಣ ಬಲ್ಲನೆನುತ್ತ ಗಮಿಸಿದಳು ೪

ಹರಿ ಹರಿ ಶ್ರೀಕಾಂತ ದಾನವ
ಹರ ಮುರಾರಿ ಮುಕುಂದ ಗತಿಶೂ
ನ್ಯರಿಗೆ ನೀನೇ ಗತಿಯೆಲೈ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ ೫

ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಿಗಿ
ದರೆಗಳಿಗೆ ನಿಂದಬುಜಮಿತ್ರನ ಭಜಿಸಿ ಕಂದೆರೆಯೆ
ಮುರಿವ ದೈತ್ಯನ ಕಾಹ ಕೊಟ್ಟನು
ತರಣಿ ತರುಣಿಗೆ ಮಂದ ಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ ೬

ಚಾರು ನೂಪುರ ಝಣಝಣದ ಝೇಂ
ಕಾರ ರವದುಬ್ಬಿನಲಿ ಭವನ ಮ
ಯೂರ ಕುಣಿದವು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಭಾರಣೆಗೆ ತುಂಬಿಯ
ಸಾರ ಕಟ್ಟಿತು ಬಂದಳಂಗನೆ ಕೀಚಕಾಲಯಕೆ ೭

ಮನುಮಥನ ಮದದಾನೆ ಕಂದ
ರ್ಪನ ಮಹಾಮಂತ್ರಾಧಿದೇವತೆ
ಜನವು ಮರುಳಹ ಮದ್ದು ಸಂಸೃತಿಸುಖದ ಸಾಕಾರೆ
ಮನಸಿಜನ ಮಸೆದಲಗು ಮುನಿ ಮೋ
ಹನತಿಲಕ ಲಾವಣ್ಯಸಾಗರ
ಜನಿತ ಲಕ್ಷ್ಮಿ ಲತಾಂಗಿ ಬಂದಳು ಕೀಚಕನ ಮನೆಗೆ ೮

ಕುಡಿತೆಗಂಗಳ ಚಪಲೆಯುಂಗುರ
ವಿಡಿಯ ನಡುವಿನ ನೀರೆ ಹಂಸೆಯ
ನಡೆಯ ಗಮನದ ಮೌಳಿಕಾತಿ ಪಯೋಜ ಪರಿಮಳದ
ಕಡುಚೆಲುವೆ ಬರಲವನ ತನು ನಡ
ನಡುಗಿ ನಿಂದುದದಾವ ಹೆಂಗಸು
ಪಡೆದಳೀ ಚೆಲುವಿಕೆಯನೆನುತೀಕ್ಷಿಸಿದನಂಗನೆಯ ೯

ಅರಿದು ನೆತ್ತರುಗಾಣದಲಗಿದು
ನೆರೆ ಬಿಗಿಯೆ ಮೈ ಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದೊಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳ ಕೊಯ್ಯದದಾವನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವ ಶಿವಾಯೆಂದ ೧೦

ಆವ ಜನ್ಮದ ಸುಕೃತ ಫಲ ನೆರೆ
ದೀ ವಧುವ ಸೇರಿದರೊ ಧನ್ಯರು
ತಾವಲಾ ಬಳಿಕೇನು ಪೂರ್ವದ ಸುಖದ ಸರ್ವಸ್ವ
ಭಾವಿಸಲು ಸುಕೃತಾವಳಿಗಳಿಂ
ದೀ ವನಿತೆಯಲ್ಲಿಂದ ಮೇಣಿ
ನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ ೧೧

ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ ೧೨

ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೆಡದಿರು
ರಾಯರಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡುಕಿದನು ಸತಿಯ ೧೩

ಕರವನೊಡೆಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ ೧೪

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು ೧೫

ಕರುಳ ತೆಗೆ ತಿನ್ನಡಗನೆನುತ
ಬ್ಬರಿಸಿ ಸೂರ್ಯನು ಕೊಟ್ಟ ದಾನವ
ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು
ದುರುಳನಡೆಗೆಡೆದೆದ್ದು ನಿಮಿಷದೊ
ಳೊರಲುತೋಡಿದನಾಲಯಕೆ ಬಳಿ
ಕರಸ ಮೊದಲಾಖಿಳಜನ ನಡುಗಿತ್ತು ಭಯ ಹೊಯ್ದು ೧೬

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿ ಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು ೧೭

ಶಿವ ಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ ೧೮

ಎಲವೊ ದೇಶಿಗ ಕಂಕ ಭಟ್ಟನೆ
ಹಲವು ಧರ್ಮವ ಬಲ್ಲೆ ಗಡ ನೃಪ
ತಿಲಕಗರುಹುವದೇನು ಸನ್ಯಾಸಿಗಳಿಗುಚಿತವಿದು
ತಿಳಿಯೆ ದೇಶಿಗರಿಂಗೆ ದೇಶಿಗ
ರೊಲವು ಸಮನಿಸಬೇಕು ಸಭೆಯಲಿ
ಬಲವಿಹೀನರಿಗಾಪ್ತರಿಲ್ಲಂದೆಬಲೆಯೊರಲಿದಳು ೧೯

ಧೈರ್ಯವನು ನೆರೆ ಬಲಿದು ಮೇಲಣ
ಕಾರ್ಯಭಾಗವನರಿದು ನೃಪಜನ
ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು
ಶೌರ್ಯಕವಸರವಲ್ಲ ನಮಗೀ
ಯಾರ್ಯನಾಜ್ಞೆಯೆನುತ್ತ ಬಳಿಕಾ
ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ ೨೦

ನೊಂದಳಕಟಾ ಸತಿಯೆನುತ ಮನ
ನೊಂದು ಸೈವೆರಗಾಗಿ ಖತಿಯಲಿ
ಕಂದಿ ನಸು ಮೈಬಾಗಿ ರೋಷದೊಳೌಡನೊಡೆಯವುಚಿ
ಮಂದಿಯರಿಯದವೊಲು ಕುಚೇಷ್ಟೆಯೊ
ಳೊಂದಿ ಮೆಲ್ಲನೆ ಬಾಗಿ ನೋಡಿದ
ನಂದು ರಾಜಾಲಯದ ಮುಂದಣ ಮರನನಾ ಭೀಮ ೨೧

ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದೀ
ಖಳನನಿವನೊಡಹುಟ್ಟಿದರನಿವನಖಿಳ ಬಾಂಧವರ
ಬಳಿಕ ವಿಗಡ ವಿರಾಟ ರಾಯನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯೋದನಾ ಭೀಮ ೨೨

ಆತನಿಂಗಿತದನುವನರಿತು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯವೂರ ಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ ೨೩

ಧರ್ಮಮಯ ತರುವಿದನು ಮುರಿಯದಿ
ರೆಮ್ಮ ಮಾತನು ಕೇಳೆನಲು ಮಿಗೆ
ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ
ಕರ್ಮಫಲವಿದು ನಿನಗೆ ಮಾನಿನಿ
ನಿಮ್ಮ ಭವನಕೆ ಹೋಗು ಶಿಕ್ಷಿಸ
ಲಮ್ಮದೀ ಸಭೆ ಬಗೆಯನಾತನು ಮತ್ಸ್ಯಭೂಪತಿಯ ೨೪

ಕೋಪಕವಸರವಲ್ಲ ಪತಿಗಳು
ಕಾಪುರುಷರೇ ನಿನ್ನವರು ಪರಿ
ತಾಪವನು ಬೀಳ್ಕೊಡು ಪತಿವ್ರತೆ ಪುಣ್ಯವಧು ನೀನು
ದೀಪವಲ್ಲಾ ಕ್ಷಮೆಯಖಿಳ ದೋ
ಷಾಪಹಾರವು ಶೌರ್ಯ ಧರ್ಮದ
ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದುಳಿಂದುಮುಖಿ ೨೫

ನೀರು ಹೊರಗಿಕ್ಕುವದು ಮೂರೇ
ಬಾರಿ ಬಳಿಕದು ಪಾಪಿ ಜಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷವು ಕಡು ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ ೨೬

ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲಿದಾವಂತರವು ರಾಯನ
ಹೊರೆಯಲೀ ಬಾಯ್ಬಡಿಕತನ ಗರುವಾಯಿಯೇನೆನಲು
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು ೨೭

ಆ ಸುದೇಷ್ಣೆಯ ಮನೆಗೆ ಬರಲವ
ಳೀ ಸತಿಯ ನುಡಿಸಿದಳು ತಂಗಿ ವಿ
ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು
ಈಸು ಮರವೆಯಿದರಸುತನದ ಮ
ಹಾ ಸಗಾಢಿಕೆಯೆಮ್ಮ ನೀವಪ
ಹಾಸ ಮಾಡುವಿರೆನುತ ದುರುಪದಿ ನುಡಿದಳೊಡತಿಯನು ೨೮

ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲು ಬಾರದು ನೃಪತಿ ತಪ್ಪಿದೊಡಾರು ಕಾವವರು
ಕರೆಸಿ ಬುದ್ಧಿಯ ಹೇಳಿ ಎನ್ನನು
ಹೊರೆಯಲಾಪರೆ ಹೊರೆಯಿರಲ್ಲದ
ಡರಸಿ ಕಳಹುವದೆನ್ನನೆನಲಿಂತೆಂದಳಾ ರಾಣಿ ೨೯

ಲಲನೆ ಕೇಳನ್ಯಾಯದವರನು
ಕೊಲಿಸುವೆನು ಭಯ ಬೇಡ ಪರ ಸತಿ
ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು
ಕೊಲಿಸುವಡೆ ನೀವೇಕೆ ತಪ್ಪಿನ
ಬಳಿಯಲೆನ್ನಾತಗಳು ಕೀಚಕ
ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು ೩೦

ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದುಕೊಂಬೆನೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು ೩೧

ಆರಿಗುಸುರುವೆನಾರ ಸಾರುವೆ
ನಾರಿಗೊರಲುವೆನಾರಿಗರುಹುವೆ
ನಾರ ಬೇಡುವೆನಕಟ ಹೆಂಗಸು ಜನ್ಮವನು ಸುಡಲಿ
ಘೋರ ಪಾತಕಿಯೆನ್ನವೊಲು ಮು
ನ್ನಾರು ನವೆದವರುಂಟು ಮರಣವು
ಬಾರದೆಂದೊರಲಿದಳು ಬಸುರನು ಹೊಯ್ದು ಶಶಿವದನೆ ೩೨

ಯಮಸುತಂಗರಹುವೆನೆ ಧರ್ಮ
ಕ್ಷಮೆಯ ಗರ ಹೊಡೆದಿಹುದು ಪಾರ್ಥನು
ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ
ಭ್ರಮಿತನಾಗಿಹನುಳಿದರಿಬ್ಬರು
ರಮಣರಿವರೀ ನಾಯ ಕೊಲಲ
ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ ೩೩

ಎಲ್ಲರೊಳು ಕಲಿಭೀಮನೇ ಮಿಡು
ಕುಳ್ಳ ಗಂಡನು ಹಾನಿ ಹರಿಬಕೆ
ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು
ಖುಲ್ಲನಿವನುಪಟಳವನಾತಂ
ಗೆಲ್ಲವನು ಹೇಳುವೆನು ಬಳಿಕವ
ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ ೩೪

ನಿಳಯವನು ಹೊರವಂಟು ಕಂಗಳ
ಬೆಳಗು ತಿಮಿರವ ಕೆಡಿಸೆ ಕಂಕಣ
ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ
ಒಲಿದು ಮೇಲುದು ನೂಕಿ ನಡುಗುವ
ಮೊಲೆಯ ಭರದಲಿಯಡಿಯಿಡುತ ಕಳ
ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ ೩೫

ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ
ಕೆಲಬಲದ ಸಂಭಾರ ಚೂರ್ಣದ
ಲಲಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ ೩೬

ತರಿದ ಕುರಿಗಳ ಹಂದಿಯಡಗಿನ
ಜುರಿತ ರಕುತದ ಮೊಲನ ಖಂಡದ
ತಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಸಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ ೩೭

ಆರಲರಿದನೊ ಭೀಮನೀ ಸೂ
ವಾರ ವಿದ್ಯೆಯ ಭಾಪು ವಿಧಿ ಮುನಿ
ದಾರನಾವಂಗದಲಿ ಬರಿಸದು ಶಿವಶಿವಾಯೆನುತ
ನಾರಿ ನಸುನಗುತೊಳಗೆ ಹೊಕ್ಕು ಬ
ಕಾರಿ ಮಂಚದೊಳಿರಲು ನಿದ್ರಾ
ಭಾರ ವಿಹ್ವಲಕರಣನನು ಹೊದ್ದಿದಳು ಲಲಿತಾಂಗಿ ೩೮

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇಕೆಂದೆನ್ನ ಸಂತೈಸುವನೊ ಸಾಮದಲಿ
ತುಬ್ಬುವದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ ೩೯

ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ
ಗಲ್ಲವನು ಹಿಡಿದಲುಗಲಪ್ರತಿ
ಮಲ್ಲನೆದ್ದನು ನೋಡಿದನು ಪಾಂಚಾಲನಂದನೆಯ
ವಲ್ಲಭೆಯೆ ಬರವೇನು ಮುಖದಲಿ
ತಲ್ಲಣವೆ ತಲೆದೋರುತಿದೆ ತಳು
ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ ೪೦

ಸೈರಿಸರು ಬಾಣಸದ ಭವನದ
ನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ ೪೧

ನಿನ್ನೆ ಹಗಲರೆಯಟ್ಟಿ ಕೀಚಕ
ಕುನ್ನಿಯೊದೆದನು ರಾಜಸಭೆಯಲಿ
ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ
ಎನ್ನನವ ಬೆಂಬಳಿಯ ಬಿಡ ನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ ೪೨

ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ ಹೆಂಡಿರ
ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು
ಶಶಿವದನೆ ಸುಡು ಕಷ್ಟವೀಯಪ
ದೆಸೆಯವರು ನಾವಲ್ಲ ನಿನ್ನವ
ರಸಮ ಸಾಹಸರುಳಿದ ನಾಲ್ವರಿಗರಹು ಹೋಗೆಂದ ೪೩

ರಮಣ ಕೇಳುಳಿದವರು ತನ್ನನು
ರಮಿಸುವರು ಮಾನಾರ್ಥವೆನೆ ನಿ
ರ್ಗಮಿಸುವರು ನೀನಲ್ಲದುಳಿದವರುಚಿತಬಾಹಿರರು
ಮಮತೆಯಲಿ ನೀ ನೋಡು ಚಿತ್ತದ
ಸಮತೆಯನು ಬೀಳ್ಕೊಡು ಕುಠಾರನ
ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು ೪೪

ಕಲಹಕಾದೊಡೆ ನಾವು ರಮಿಸುವ
ರುಳಿದವರು ಬಳಿಕೇನು ಗಾದೆಯ
ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು
ಅಳುಕಿ ನಡೆವವರಲ್ಲ ನಿನ್ನಯ
ಹಳಿವು ಹರಿಬವ ಹೇಳಿ ಚಿತ್ತವ
ತಿಳುಹಿಕೊಂಬದು ನಾವು ಭೀತರು ಧರ್ಮಜನ ಹೊರೆಗೆ ೪೫

ಹೆಂಡತಿಯ ಹರಿಬದಲಿಯೊಬ್ಬನೆ
ಗಂಡುಗೂಸೆ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ ೪೬

ಅಂದು ಕೌರವ ನಾಯಿ ಸಭೆಯಲಿ
ತಂದು ತೋರಿದನುನ್ನತಿಯ ಬಳಿ
ಕಿಂದು ಕೀಚಕ ಕುನ್ನಿಯೊದೆದನು ರಾಜಸಭೆಯೊಳಗೆ
ಅಂದು ಮೇಣಿಂದಾದ ಭಂಗಕೆ
ಕುಂದದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳಿಂದುಮುಖಿ ೪೭

ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದೊಡೆ ಖಾತಿಯಿಲ್ಲೆಮಗೆ
ಈ ನಪುಂಸಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ ೪೮

ಅಂದು ದುಶ್ಶಾಸನನ ಕರುಳನು
ತಿಂದಡಲ್ಲದೆ ತಣಿವು ದೊರಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದನಾ ವ್ಯಥೆಯ
ಇಂದು ಕೀಚಕ ನಾಯನೆರಗುವೆ
ನೆಂದು ಮರನನು ನೋಡಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ ೪೯

ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯಿವು ರಾಯನಾಜ್ಞೆಯ
ಕಣ್ಣಿನಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ ೫೦

ಹೊದ್ದುವುದು ಫಲುಗುಣನ ಪಾದಕೆ
ಬಿದ್ದು ಯಮನಂದನನ ಮನವನು
ತಿದ್ದುವದು ಸಹದೇವ ನಕುಲರ ಕೈಯಲೆನಿಸುವದು
ಗೆದ್ದು ಕೊಡುವರು ನಿನ್ನ ಪಾಲಿಸ
ದಿದ್ದರಾದೊಡೆ ದೋಷವವರನು
ಹೊದ್ದುವುದು ನೀನೆನ್ನ ಬರಿದೇ ಕಾಡಬೇಡೆಂದ ೫೧

ಗಂಡ ಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ಮೇಣರ್ಜುನಗೆ ಹೇಳೆಂದ ೫೨

ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀ ನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ
ಅರಸನನು ಪ್ರಾರ್ಥಿಸುವುದರ್ಜುನ
ವರ ನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳ್ವುದು ನಮ್ಮೊಡನೆ ಫಲಸಿದ್ಧಿಯಿಲ್ಲೆಂದ ೫೩

ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಲೋಲಲೋಚನೆಯಕಟ ನೆನೆದಳು ಬಾಷ್ಪವಾರಿಯಲಿ
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳ ತಾಗಿದವೊಲುದರ
ಜ್ವಾಲೆ ನೆತ್ತಿಗೆ ನಿಲುಕೆ ಹಲುಬಿದಳಬಲೆ ಬಿಸುಸುಯ್ದು ೫೪

ಕೆಂದಳದ ಸೆಕೆಯಲಿ ಕಪೋಲವು
ಕಂದಿ ಕಸರಿಕೆಯಾಯ್ತು ನಿಡುಸುಯಿ
ಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು
ಸಂದಣಿಸಿದೆವೆಗಳಲಿ ಬಾಷ್ಪದ
ಬಿಂದು ತಳಿತುದು ನಟ್ಟ ದೃಷ್ಟಿಯೊ
ಳಿಂದುಮುಖಿ ಸೈಗರೆದು ತೂಗಿದಳಡಿಗಡಿಗೆ ಶಿರವ ೫೫

ಆವ ಹೆಂಗುಸನಳಲಿಸಿದೆನಿ
ನ್ನಾವ ಧರ್ಮವನಳಿದೆನೊ ತಾ
ನಾವ ಪಾಪದ ಫಲಕೆ ಪಿಡಿದೆನೊ ಸಂಚಕಾರವನು
ಆವ ಹೆಂಗಸು ನವೆದಳೆನ್ನವೊ
ಲಾವಳಳಲಿದು ಮರುಗಿದಳು ಮ
ತ್ತಾವಳೆನ್ನಂದದಲಿ ಪಡೆದವಳುಂಟೆ ಲೋಕದಲಿ ೫೬

ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲು ಬೇಡ ಗಂಡರು ಭೀಮಸನ್ನಿಭರು
ಎನ್ನವೊಲು ಪಾಂಡವರವೊಲು ಸಂ
ಪನ್ನ ದುಃಖಿಗಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು ೫೭

ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಯಾವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಹೊಗುವೆನೊ
ಸಾವು ಸಮನಿಸದೆನಗೆನುತ ಮರುಗಿದಳು ನಳಿನಾಕ್ಷಿ ೫೮

ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದು ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ
ಇಂದು ಕೀಚಕ ನಾಯ ಕಾಲಲಿ
ನೊಂದೆ ನಾನೀ ಮೂರು ಬಾರಿಯೆ
ಬಂದ ಭಂಗವೆ ಸಾಕೆನುತ ಬಸವಳಿದಳಿಂದುಮುಖಿ ೫೯

ಜನನವೇ ಪಾಂಚಾಲರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ ೬೦

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲ ಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂಗು
ರ್ಚಿಗಳದಿನ್ನಾರುಂಟೆನುತ ಮರುಗಿದಳು ನಳಿನಾಕ್ಷಿ ೬೧

ಕಾಲನನು ಕೆರಳಿದೊಡೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲ ವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ ೬೨

ಧರೆಯ ಭಂಡಾರವನು ಪುರವನು
ಕರಿತುರಗ ರಥ ಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು ೬೩

ಭಾವ ಭಾಗ್ಯಾಧಿಕನು ಕೌರವ
ದೇವನರಸುಗಳೊಡೆಯತನವನು
ನೀವು ಕೃಷ್ಣನ ಕೂರ್ಮೆ ಧರ್ಮದಿ ಪಾಲಿಸಿದಿರೀಗ
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರುವಿರಿ
ಸಾವವಳು ನಿಮಗಂಜಲೇಕೆಂದಬಲೆಯೊರಲಿದಳು ೬೪

ಭೀಮ ಕೊಟ್ಟೈ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕಿ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವದೆಂದೆರಗಿದಳು ಚರಣದಲಿ ೬೫

ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ
ತನುಪುಳಕವುಬ್ಬರಿಸಿ ಮೆಲ್ಲನೆ
ವನಿತೆಯನು ತೆಗೆದಪ್ಪಿದನು ಕಂ
ಬನಿಯದೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ ೬೬

ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ
ಅರಸಿ ಬಿಡು ಬಿಡು ಖಾತಿಯನು ವಿ
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ ೬೭

ಬಸುರ ಬಗಿವೆನು ಕೀಚಕನ ನಸು
ಮಿಸುಕಿದೊಡೆ ವೈರಾಟ ವಂಶದ
ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ
ಕುಸುರಿದರಿವೆನು ಭೀಮ ಕಷ್ಟವ
ನೆಸಗಿದನು ಹಾಯೆಂದರಾದೊಡೆ
ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ ೬೮

ಮುನಿದನಾದೊಡೆಯಣ್ಣ ತನವಿಂ
ದಿನಲಿ ಹರಿಯಲಿ ಪಾರ್ಥ ನಕುಲರು
ಕನಲಿದೊಡೆ ಕೈದೋರುವೆನು ಸಹದೇವನಿವರುಗಳ
ಅನುಜನೆಂಬೆನೆ ಕೃಷ್ಣ ಹಾಯ್ದೆರೆ
ಘನಮುರಾರಿಯ ಮೀರುವೆನು ಬಳಿ
ಕೆನಗೆ ಸಮಬಲರಾರು ತರಿವೆನು ಕೀಚಕಾನ್ವಯವ ೬೯

ಈಸು ದಿನವೆಮ್ಮಣ್ಣನಾಜ್ಞೆಯ
ಪಾಶದಲಿ ಸಿಕ್ಕಿರ್ದೆ ಸಿಂಹದ
ಕೂಸ ನರಿ ಕೆಣುಕುವವೊಲೀ ಕುರು ಕೀಚಕಾದಿಗಳು
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳೆಂದ ೭೦

ತರುಣಿ ಕೀಚಕ ಕೌರವೇಂದ್ರರ
ಹರಣಕಿದ ಕೋ ಸಂಚಕಾರವ
ಕೆರಳಿದೊಡೆಯೀ ಭೀಮ ಬಗೆವನೆ ನೀತಿಗೀತಿಗಳ
ಕೆರಳಿಚಿದೆಯಿನ್ನೇನು ನಿನ್ನಯ
ಹರಿಬವೆನ್ನದು ನಾಯಿ ಜಾರನ
ಕರೆದು ಸಂಕೇತದಲಿ ಸೂಚಿಸು ನಾಟ್ಯಮಂದಿರವ ೭೧

ಅಲ್ಲಿಗಿರುಳೈತಂದು ಮರೆಯಲಿ
ಖುಲ್ಲನುದರವ ಬಗಿದು ರಕುತವ
ಚೆಲ್ಲುವೆನು ಶಾಕಿನಿಯರಿಗೆ ಸಂದೇಹ ಬೇಡಿದಕೆ
ಅಲ್ಲಿ ಕೆಲಬಲನರಿದುದಾದೊಡೆ
ಬಲ್ಲೆನದಕೌಷಧಿಯ ಕರೆ ಮರೆ
ಯಿಲ್ಲ ಮಾನಿನಿ ಹೋಗೆನುತ ಬೀಳ್ಕೊಟ್ಟನಂಗನೆಯ ೭೨

ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ಅರಸಿ ಕಾಂತನ ಬೀಳುಕೊಂಡಳು
ತಿರುಗಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ ೭೩

ಆ ದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡುಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳು ಯುಗವಾಗಿ ಸವೆದುದು
ನೀ ದಯಾಂಬುಧಿ ಕುಸುಮಶರ ಯಮ
ನಾದನದ ನೀ ಬಲ್ಲೆಯೆಂದನು ಕೀಚಕನು ನಗುತ ೭೪

ಕುಸುಮಶರ ಯಮನಹನು ಅಮೃತವು
ವಿಷವಹುದು ಬಳಿಕಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ
ಒಸೆದರೊಲ್ಲದರಹರು ಲೋಗರ
ಶಶಿವದನೆಗಳುಪಿದ ದುರಾತ್ಮನ
ವಸುಧೆ ಹೊರದೆಲೆ ಪಾಪಿ ಕೀಚಕಯೆಂದಳಿಂದುಮುಖಿ ೭೫

ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಚವ ತೊಡಿಸಿ ತನ್ನೊಡಲ
ಅಳುಕದೆಸುವ ಮನೋಜನಂಬಿನ
ಹುಳುಕ ಮುರಿ ಡಿಂಗರಿಗನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ ೭೬

ಅರಿದರಾದೊಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು
ನೆರೆದುದಾಯುಷ ನಿನಗೆ ಕತ್ತಲೆ
ಮನೆಯೊಳಾನೈತಹೆನುಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ ೭೭

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜ ಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ ೭೮

ಭೀಮ ನಿಂದಿರು ನಾಟ್ಯನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸವ ಮಾಡದಿರು ಹೂಡದಿರಲ್ಪಬುದ್ಧಿಗಳ
ಕಾಮುಕನನಡೆಗೆಡಹಿ ನಿಜ ಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಘಳಿಯನುಟ್ಟನು ಮಲ್ಲಗಂಟಿನಲಿ ೭೯

ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ ೮೦

ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಹಿತಿರುಳೊಬ್ಬನೆ ನಿಜಾಲಯದಿಂದ ಹೊರವಂಟ ೮೧

ಕಾಲಪಾಶದಲೆಳಸಿಕೊಂಬ ಕ
ರಾಳಮತಿ ಸುಡುಗಾಡಲೈತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ
ಮೇಲೆ ಮೇಲವಶಕುನ ಶತಕವ
ನಾಲಿಸದೆ ಸುಮ್ಮಾನದಲಿ ಕೇ
ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ ೮೨

ವನಜಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿದೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳರಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ ೮೩

ಎನ್ನವೋಲ್ ಪುರುಷರಲಿ ಚೆಲುವರ
ಮುನ್ನ ನೀ ಕಂಡರಿದೆಯಾದೊಡೆ
ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು
ಮುನ್ನ ನಿನ್ನಂತಪ್ಪ ಸತಿಯರು
ಎನ್ನನೇ ಬಯಸುವರು ನಾರಿಯ
ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ ೮೪

ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ ೮೫

ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ ೮೬

ಎಲೆಗೆ ಕಲುಮೈಯಾದೆ ಕಡುಗೋ
ಮಲತೆಯೆತ್ತಲು ಕರ್ಕಶಾಂಗದ
ಬಲುಹಿದೆತ್ತಲು ಮಾಯ ವೇಷವ ಧರಿಸಿದೆಯೊ ಮೇಣು
ತಿಳುಹೆನಲು ಕೇಳೆಲವೊ ಪರ ಸತಿ
ಗಳುಪಿದಾತಂಗಮೃತ ವಿಷ ಕೋ
ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ ೮೭

ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರ ಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು ೮೮

ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯ್ದೊಡೆ
ಬವರಿಯಲಿ ಟೊಣದೌಕಿದೊಡೆ ಮಡ ಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ ೮೯

ಎರಗಿದೊಡೆ ಕೀಚಕನ ಗಾಯಕೆ
ತರವರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದಲೌಡನೊಡೆಯಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ ೯೦

ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲ ಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದುರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳುರಾಯ ಹಲು ಮೊರೆದ ೯೧

ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬಿರಿದವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ ೯೨

ತಲೆಯನೆದೆಯೊಳಗಿಕ್ಕಿ ಕೈ ಕಾ
ಲ್ಗಳನು ಬಸುರೊಳು ಸಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕೀಚಕನ ಹದನ
ಖಳನ ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ ೯೩

ತರುಣಿ ಬಿಡು ಸಾರೆನುತ ಪವನಜ
ಸರಿದನತ್ತಲು ದ್ರುಪದನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದರವಳೊಡನೆ ೯೪

ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ವಿಡುತ ೯೫

ಆರು ಗತಿಯೆಮಗಕಟ ಕೀಚಕ
ವೀರ ದೇಶಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರಕರ್ಮರು ನಿನ್ನ ಕೊಂದವ
ರಾರು ಹಾ ಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ ೯೬

ಇವಳಿಗೋಸುಗವಳಿದನೇ ಸಹ
ಭವನು ತಪ್ಪೇನೆನುತ ನಡುವಿರು
ಳವದಿರೈತಂದರುಹಿದರು ವೈರಾಟ ರಾಯಂಗೆ
ಅವಳನಾತನ ಕೂಡೆ ಕಳಹುವೊ
ಡೆವಗೆ ನೇಮವೆಯೆಂದು ಬೀಳ್ಕೊಂ
ಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ ೯೭

ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲ ದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು ೯೮

ಕೇಳಕಟ ಜಯನೇ ಜಯಂತನೆ
ಕೇಳು ವಿಜಯ ಜಯೋದ್ಭವನೆ ನೀ
ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು
ಬೀಳಿಸುವರಗ್ನಿಯಲಿ ನೀವಕ
ಟೇಳಿ ತಡವೇಕೆನುತ ಮೊರೆಯಿಡೆ
ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ ೯೯

ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲುಬೇಕಲಾ ಕುನ್ನಿಗಳನೀ ಕ್ಷಣಕೆ
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯ್ದಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ ೧೦೦

ಎಲೆಲೆ ಗಂಧರ್ವಕನ ಹೆಂಗುಸ
ಕಳಚಿ ಬಿಡಿರೊ ಪಾಪಿ ಹೋಗಲಿ
ಕೊಲೆಗಡಿಗನಿವನೆನುತ ಹೆಣನನು ಬಿಸುಟು ದೆಸೆದೆಸೆಗೆ
ತಲೆಗೆದರಿ ತೆಗೆದೋಡೆ ನಕ್ಕನು
ಕಳಕಳಸಿ ಕಲಿಭೀಮನೆಲೆ ನಾ
ಯ್ಗಳಿರ ಹೋದೊಡೆ ಬಿಡುವೆನೇ ಹಾಯೆನುತ ಕೈಕೊಂಡ ೧೦೧

ತಿರುಹಿದನು ಹೆಮ್ಮರನನವದಿರ
ನರೆದು ನಿಟ್ಟೊರೆಸಿದನು ದೆಸೆ ದೆಸೆ
ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು
ಕುರಿದರಿದು ಮಾಡಿದನು ನೂರೈ
ವರನು ಕೊಂದನು ಮರನ ಹಾಯಿಕಿ
ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ ೧೦೨

ಸುಳಿಯಲಮ್ಮದು ಪೌರಜನವಿವ
ರಳಿವ ವಚನಿಸಲಮ್ಮದೀಕೆಯ
ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ
ನಳಿನಮುಖಿ ನಸುನಗುತ ತಿಳಿಗೊಳ
ದೊಳಗೆ ಹೊಕ್ಕಳು ಮಿಂದು ಬೀದಿಗ
ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳ ಜನ ೧೦೩

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ ೧೦೪

ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋ ನಮೋಯೆನುತ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಳಯಕೆ
ಮುಗುದೆ ಬಂದಳು ಸೂರ್ಯನಡರಿದನುದಯ ಪರ್ವತವ ೧೦೫

ಊರೊಳಗೆ ಗುಜುಗುಜಿಸಿ ವಾರ್ತಾ
ಭಾರ ಮಸಗಿತು ನೆರೆದ ನೆರವಿಯೊ
ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ
ಭೂರಿ ಚಿಂತಾತುರ ವಿರಾಟನು
ಮಾರಿಯೋ ಸೈರಂಧ್ರಿಯೋ ಈ
ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ ೧೦೬

ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ತಮ್ಮನೆನಲಿಂತೆಂದಳಿಂದುಮುಖಿ ೧೦೭

ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿ ನಡೆದೊಡೆ
ಯೆಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ಧೂರ್ತರು
ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು ೧೦೮

ತಾವು ತಮ್ಮಿಂದಳಿದರದು ಸಾ
ಕಾವು ನಿಮಗಂಜುವೆವು ನಿಮ್ಮಲಿ
ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು
ನಾವು ಮುನ್ನಿಹರಲ್ಲ ನಿಮ್ಮಯ
ಸೇವೆಯಲಿ ಹದಿಮೂರು ದಿವಸವು
ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು ೧೦೯

ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯ ಬೇಡ
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದುರುಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು ೧೧೦

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

No comments: