ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, February 21, 2010

ವಿರಾಟಪರ್ವ: ೦೪. ನಾಲ್ಕನೆಯ ಸಂಧಿ

ಸೂ: ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ ೧

ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು ೨

ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ ೩

ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ ೪

ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೇ
ಮೇಲಣವರಿಗೆ ಮರ್ತ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ ೫

ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ ೬

ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ ೭

ಪರಿಮಳವ ಕದ್ದೋಡವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ೮

ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬುವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ ೯

ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯನುಯೆಂದ ೧೦

ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು ೧೧

ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ೧೨

ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ
ಎಲ್ಲಿ ನೆಲೆಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ ೧೩

ಅತ್ತ ಹಿಮಗಿರಿ ಮೇಲೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯ ದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ ೧೪

ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ೧೫

ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ರ್ವ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ ೧೬

ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳಬಂದುದೈ ನೀ ಸಮಯದೊಳು ಕರೆಸಿ
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ ೧೭

ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ ೧೮

ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ ೧೯

ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವೆಂದನಾ ಕರ್ಣ ೨೦

ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು ೨೧

ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ ೨೨

ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು ೨೩

ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ಕಟಕಾಳಿ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿ ಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ ೨೪

ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವೊಂಟರೊಗ್ಗಿನಲಿ ೨೫

ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ ೨೬

ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರನ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ ೨೭

ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ ೨೮

ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದುವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ ೨೯

ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ ೩೦

ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ ೩೧

ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ ೩೨

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ ೩೩

ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ ೩೪

ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ದಾಳಿಯಿಟ್ಟನು ತೆಂಕ ದೆಸೆಗಾಗಿ ೩೫

ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ ೩೬

ಆಳು ಸುತ್ತಲು ಕಟ್ಟಿ ತುರುಗಳ
ಕೋಳ ಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು ೩೭

ಮಿಸುಪ ಕಂಬಳಿ ಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ ೩೮

ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡೆಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶುಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ ೩೯

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ ೪೦

ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಲಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ ೪೧

ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು ೪೨

ಅವಧಿ ತೀರಲಿ ಮೇಣು ಮಾಣಲಿ
ಎನಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು ೪೩

ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತ ಕೋಮಲಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ ೪೪

ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ ೪೫

ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದದು ಪರಬಲವ ೪೬

ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕದು ಕೂಡೆ ಕುರುಸೇನೆ ೪೭

ಕುದುರೆ ಹೊಕ್ಕವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ ೪೮

ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ ೪೯

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು ೫೦

ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತುರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ ೫೧

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ ೫೨

ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು ೫೩

ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು ೫೪

ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು ೫೫

ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು ೫೬

ಉಗ್ರ ಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ
ವಿಗ್ರಹವ ಜಯಿಸೆನಲು ಕುರುಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ ೫೭

ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ ೫೮

ವಲಲ ಮೆಚ್ಚಿದೆನೈ ಮಹಾ ದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡು ನಂದನರು ೫೯

ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು ೬೦

ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ೬೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

ದ್ರೋಣಪರ್ವ: ೦೨. ಎರಡನೆಯ ಸಂಧಿ

ಸೂ: ಉಭಯ ಕಟಕಾಚಾರ್ಯ ಪಾಂಡವ
ವಿಭುವ ಹಿಡಿತಹೆನೆಂದು ಕೌರವ
ಸಭೆಗೆ ಭಾಷೆಯ ಕೊಟ್ಟು ಸಮರಕೆ ದ್ರೋಣನನುವಾದ

ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಂಗಳಿಗಿರುಳು ಕೌರವನಿತ್ತನೋಲಗವ
ಹೇಳು ಕರ್ಣ ದ್ರೋಣ ರಿಪು ಭೂ
ಪಾಲಕನನರೆಯಟ್ಟಿದನು ಗಡ
ಕಾಳೆಗದ ಹದನೇನೆನುತ ಕುರುರಾಯ ಬೆಸಗೊಂಡ ೧

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ ೨

ಅಳವಿಗೊಟ್ಟನು ನೃಪತಿ ಗುರು ಕೈ
ಚಳಕದಲಿ ತೆಗೆದೆಸುತ ನಡೆದಿ
ಟ್ಟಳಿಸಿ ಹಿಡಿಹಿಂಗೊಳಗುಮಾಡಿ ವಿಘಾತಿಯಲಿ ತಡೆಯೆ
ಎಲೆಲೆ ದೊರೆ ಸಿಕ್ಕಿದನು ಸಿಕ್ಕಿದ
ನಳಿದುದೋ ದ್ರೌಪದಿಯ ಸಿರಿಯೆಂ
ಬುಲುಹ ಕೇಳುತ ಪಾರ್ಥ ಬಂದನು ಬಿಟ್ಟ ಸೂಠಿಯಲಿ ೩

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ ೪

ಕೇಳು ಸೇನಾನಾಥ ಕುರುಪತಿ
ಕೇಳು ಕೇಳೈ ಕರ್ಣ ಸುಭಟರು
ಕೇಳಿರೈ ದೇಶಾಧಿನಾಥರು ವೀರ ಪರಿವಾರ
ನಾಳೆ ಮೊದಲಾಗರ್ಜುನನ ನಾವ್
ಕಾಳೆಗಕೆ ಬರಲೀಯೆವೆಮ್ಮಯ
ಕಾಳೆಗದಲೇ ಸವೆಯಬೇಹುದು ಪಾರ್ಥನಂಬುಗಳು ೫

ಹಿಂದೆ ಹಿಡಿ ನೀ ಮೇಣು ಬಿಡು ಯಮ
ನಂದನನನೊಲಿದಂತೆ ಮಾಡಿ
ಲ್ಲಿಂದ ಮೇಲರ್ಜುನನ ಭಯ ನಿಮಗಿಲ್ಲ ನಂಬುವುದು
ಎಂದು ಶಪಥವ ತಮ್ಮಿನಿಬರೈ
ತಂದು ವಿಪ್ರರ ಕರೆಸಿ ವೈದಿಕ
ದಿಂದ ರಚಿಸಿದರಗ್ನಿಯನು ಮಾಡಿದರು ಭಾಷೆಗಳ ೬

ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರುವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಂದು ಸಾರಿದರು ೭

ನುಡಿದ ನುಡಿಗೇಡುಗನ ವಿಪ್ರರ
ಮಡುಹಿದಾತನನಮಳ ಗುರುವಿನ
ಮಡದಿಯರಿಗಳುಪಿದನ ಸಾಕಿದ ಪತಿಗೆ ತಪ್ಪಿದನ
ಹಿಡಿದ ಶರಣಾಗತರ ಕಾಯದೆ
ಬಿಡುವವನ ನಾಸ್ತಿಕನ ವಿಪ್ರರ
ಜಡಿದು ನುಡಿದನ ಗತಿಗಳಾಗಲಿ ರಣದೊಳೋಡಿದರೆ ೮

ಎಂದು ಸಮಸಪ್ತಕರು ತಮ್ಮೊಳ
ಗಂದು ಶಪಥವ ಮಾಡಿ ವಿಪ್ರರ
ಮಂದಿಗಿತ್ತರು ಗೋ ಹಿರಣ್ಯ ಸಮಸ್ತ ವಸ್ತುಗಳ
ಇಂದು ರವಿ ಜಲ ವಹ್ನಿಯನಿಲ ಪು
ರಂದರಾದಿ ಸುರೌಘ ಸಾಕ್ಷಿಗ
ಳೆಂದು ಸೂಳೈಸಿದರು ಭುಜವನು ಸಿಡಿಲು ತನಿಹೆದರೆ ೯

ಇವರ ಮೊದಲಿಗ ಸತ್ಯರಥನಿಂ
ತಿವನ ಬಳಿ ರಥ ಹತ್ತು ಸಾವಿರ
ವಿವನೊಡನೆ ಸೇರುವೆಯ ರಥ ಮೂವತ್ತು ಸಾವಿರದ
ಭುವನವೀರ ಸುಶರ್ಮ ಮಾಳವ
ಯವನರತಿರಥ ಹತ್ತು ಸಾವಿರ
ಬವರಕಿಂತೈವತ್ತು ಸಾವಿರ ರಥಗಳೊಗ್ಗಾಯ್ತು ೧೦

ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ ೧೧

ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹವದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ ೧೨

ಸಸಿ ವರುಣ ದಿಗುವಧುವನಾಲಿಂ
ಗಿಸಲು ಕುಮುದಿನಿ ಖತಿಯ ಹಿಡಿದಳು
ಮಸುಳಿದವು ತಾರೆಗಳು ರಜನೀನಾರಿ ಹಿಂಗಿದಳು
ಒಸೆದು ಕಮಲಿನಿ ನಗಲು ಮಿಗೆ ಹುರು
ಡಿಸುತ ಪೂರ್ವದಿಶಾನಿತಂಬಿನಿ
ನಿಶಿತ ಕೋಪದ ಕಿಡಿಯನುಗುಳಿದಳೆನಲು ರವಿ ಮೆರೆದ ೧೩

ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘಮ್ಮಿಡೆ ದೆಸೆದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ ೧೪

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ ೧೫

ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ ೧೬

ನಡೆಯಿ ನೀವಾಹವಕೆ ಮೆಚ್ಚಿಸಿ
ಕೊಡುವೆನೀ ಬಹೆನೆಂದು ಮುರಹರ
ನೊಡನೆ ಮುದದಲಿ ರಥಕೆ ಬಂದನು ಬಿಲ್ಲನೊದರಿಸುತ
ನುಡಿದನಂತಕಸೂನು ಕಳಶಜ
ಹಿಡಿಯಲೆಂದೇರಿಸಿದ ನುಡಿ ತ
ನ್ನೊಡನೆ ನಿಂದಾವವನು ಕಾದುವ ಪಾರ್ಥ ಹೇಳೆಂದ ೧೭

ಕರಸಿದರೆ ಕಾಳೆಗದೊಳೆನಗೆಡೆ
ಮುರಿಯಬಾರದು ನಿಮ್ಮ ಕಾಹಿಂ
ಗಿರಲಿ ನೀಲನು ಸತ್ಯಜಿತು ಕೌಶಲ ಶತಾನೀಕ
ವರ ಘಟೋತ್ಕಚ ದ್ರುಪದ ಕೈಕೆಯ
ರಿರಲಿ ಪವನಜ ನಕುಲ ಸಹದೇವ
ವರಿಗೆ ದ್ರೋಣನ ಬವರವಾಗಲಿ ಎಂದನಾ ಪಾರ್ಥ ೧೮

ಎಂದು ಸಮಸಪ್ತಕರ ಮೋಹರ
ಕಂದು ತಿರುಗಿದ ಪಾರ್ಥನಿತ್ತಲು
ಸಂದಣಿಸಿತರಿ ರಾಯದಳ ಜಲರಾಸಿ ಜರಿವಂತೆ
ಮುಂದೆ ತವಕಿಗ ಭಟರ ತೆರಳಿಕೆ
ಯಿಂದ ಮೊರೆವ ಗಭೀರ ಬೇರಿಯ
ಮಂದರದ ಮುರಿಗಡಲ ಗಜರಿನೊಲೊದರಿತರಿಸೇನೆ ೧೯

ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ ೨೦

ಗರುಡನಾಕಾರದಲಿ ಬಲವನು
ಸರಿಸ ಮಿಗೆ ಮೋಹಿದನು ವಿಹಗನ
ಶಿರಕೆ ಕೃಪ ಕುರುರಾಯ ದುಶ್ಯಾಸನನ ನಿಲಿಸಿದನು
ಕರೆದು ಭೂರಿಶ್ರವನ ಮಾದ್ರೇ
ಶ್ವರನ ಭಗದತ್ತನ ಸುಬಾಹುವ
ನಿರಿಸಿದನು ಬಲದೆರಕೆಯೊಳಗಕ್ಷೋಹಿಣೀ ಬಲವ ೨೧

ವಿಂದ್ಯನಶ್ವತ್ಥಾಮ ಕರ್ಣನ
ನಂದನರು ಕಾಂಭೋಜ ಕೌಶಲ
ಸಿಂಧು ನೃಪರಕ್ಷೋಹಿಣಿಯ ತಂದೆಡದ ಪಕ್ಕದಲಿ
ನಿಂದುದಲ (ಪಾ: ನಿಂದುದಲಾ) ಮೋಹರದ ಜೋಕೆಯ
ಹಿಂದೆ ಲಕ್ಷ ಕಳಿಂಗ ಘಟೆಗಳು
ಸಂದಣಿಸಿದವು ದ್ರೋಣ ನಿಂದನು ಬಲದ ಕಾಹಿನಲಿ ೨೨

ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದೊರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ ೨೩

ಕರಸಿ ಧೃಷ್ಟದ್ಯುಮ್ನ ನಿಜ ಮೋ
ಹರವ ರಚಿಸಿದನರ್ಧ ಚಂದ್ರೋ
ತ್ಕರ ವಿಳಾಸದೊಳಳ್ಳಿರಿವ ನಿಸ್ಸಾಳ ಕೋಟಿಗಳ
ಧುರಕೆ ನಿಗುರುವ ಭಟರ ತೂಳುವ
ಕರಿಘಟೆಯ ಕೆಲಬಲಕೆ ಸೂಸುವ
ತುರುಗ ರಾಜಿಯ ತೇರ ಗಮನದ ಗಜರು ಘಾಡಿಸಿತು ೨೪

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿ ಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ ೨೫

ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ ೨೬

ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾವ್ತರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ ೨೭

ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತನವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ ೨೮

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ ೨೯

ಬಿಲ್ಲನೊದರಿಸಿ ಕೆಲಬಲದ ಭಟ
ರೆಲ್ಲರಿಗೆ ಕೈವೀಸಿ ಚೌಪಟ
ಮಲ್ಲ ನುಡಿದನು ತನ್ನ ಸಾರಥಿಗಿತ್ತು ವೀಳೆಯವ
ಖುಲ್ಲ ರಿಪುಗಳ ಬಿಸುಟು ಹೊದರಿನ
ಹೊಳ್ಳುಗರನೊಡೆಹಾಯ್ಸಿ ಧರ್ಮಜ
ನೆಲ್ಲಿ ಮೋಹರದೆಗೆವನತ್ತಲೆ ರಥವ ಹರಿಸೆಂದ ೩೦

ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವೃಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮೆಳೆಯ ಹೊಕ್ಕಂತೆ ೩೧

ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈ ತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು ೩೨

ಫಡ ಫಡಾನಿರುತಿರಲು ರಾಯನ
ಹಿಡಿದವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ
ಬಿಡು ರಥವನಾ ದ್ರೋಣನಿದಿರಲಿ
ತಡೆಯೆನುತ ಸಾರಥಿಗೆ ಸೂಚಿಸಿ
ತುಡುಕಿದನು ಬಲುಬಿಲ್ಲ ದೃಷ್ಟದ್ಯುಮ್ನನಿದಿರಾದ ೩೩

ಬಲ್ಲೆನೀತನ ಬಲುಹ ಸಾಕೀ
ಯೊಳ್ಳೆಗನನೆಡಕಿಕ್ಕಿ ಹಾಯಿಸು
ಕಲ್ಲೆಯಲಿ ಮುರಿನೂಕು ನಡೆ ಭೂಪತಿಯ ಸಮ್ಮುಖಕೆ
ನಿಲ್ಲದೊಡ್ಡೈಸೆನುತ ಸಾಹಸ
ಮಲ್ಲ ಸಾರಥಿಗರುಹೆ ಬಲವ
ಲ್ಲಲ್ಲಿ ಭಯಗೊಳೆ ದ್ರೋಣ ಹೊಕ್ಕನು ರಾಯಮೋಹರವ ೩೪

ಶಿವಶಿವಾ ಸಿಕ್ಕಿದನು ಸಿಕ್ಕಿದ
ನವನಿಪತಿಯೆನಲೌಂಕಿದರು ಗಜ
ನಿವಹವಗಿದಬ್ಬರಿಸೆ ಮುಕ್ಕುರುಕಿದವು ಕುದುರೆಗಳು
ತವಕದಲಿ ಬದ್ದರದ ಬಂಡಿಗ
ಳವುಚಿದವು ತಲೆವರಿಗೆಗಳಲಾ
ಹವವ ಹೊಕ್ಕುದು ಪಾಯದಳವಾಚಾರ್ಯನಿದಿರಿನಲಿ ೩೫

ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯವಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ ೩೬

ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿದ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯ ಸಾಗರವ ೩೭

ಬಲವ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಆಳಿದರರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ ೩೮

ಫಡ ಫಡುರವಣೆ ಬೇಡ ತೆಗೆ ಬಾ
ಯ್ಬಡಿಕತನವಿದು ಗುರುವರಂಗವೆ
ಕಡುಹ ನಾಲಗೆಯರುಹಲೇತಕೆ ಕೈಯ ಧನುವಿರಲು
ಒಡನೆ ತಾನಿರುತಿರಲು ರಾಯನ
ಹಿಡಿವ ಭಟನೇ ನೀನೆನುತ ಬಿಲು
ದುಡುಕಿ ಮುಂದೆ ಶಿಖಂಡಿ ದ್ರೋಣನ ರಥಕೆ ಮಾರಾಂತ ೩೯

ಅಕಟ ಸಿಂಹಕೆ ಮಲೆತುದೋ ಜಂ
ಬುಕನು ನೋಡೈ ಸೂತ ಭೀಷ್ಮನ
ಶಕುತಿಗಂದಿದಿರಾದ ಮದದಲಿ ಮುಂದುಗಾಣನಿವ
ಚಕಿತ ಚಾಪ ಶಿಖಂಡಿ ನಿಲು ಸಾ
ಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆನುತ ಕಣೆಗೆದರಿದನು ದ್ರೋಣ ೪೦

ಗುರುವಿನಂಬಿನ ಬಂಬಲನು ಕ
ತ್ತರಿಸಿ ಕೈದೋರಿದನು ದಿಗುತಟ
ಬಿರಿಯೆ ದಿಙ್ಮಯವಾದವಂಬುಗಳೇನನುಸುರುವೆನು
ಅರಿ ಶಿಖಂಡಿಯ ಕೈಚಳಕ ಕಾ
ಹುರವಲೇ ಲೇಸಾಯ್ತು ಬಿಲ್ಲಿನ
ಭರವಸಿಕೆಯಹುದೆನುತ ಕೈಕೊಂಡೆಚ್ಚನಾ ದ್ರೋಣ ೪೧

ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ ೪೨

ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲ್ಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರ (ನು?) ಶತಾನೀಕಾದಿ ನಾಯಕರು ೪೩

ಬರಿಯ ಕಾರ್ಪಣ್ಯದಲಿ ಮೇಘದ
ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆಲೆ ಕುಂತೀ ಕುಮಾರಕನೆ
ಇರಿದು ಮೆರೆವುದು ಮಹಿಮೆಯನು ಕೈ
ಮರೆಯದಿರು ಮೈಮಾರಿಗಳ ಮು
ಕ್ಕುರಿಕಿದಿವದಿರ ತಿದ್ದಿ ಬಹೆನಿದೆಯೆನುತ ತೆಗೆದೆಚ್ಚ ೪೪

ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತ ಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳೆಂದ ೪೫

ಕೋಲಿಗೊಬ್ಬರ ಕೆಡಹಿದನು ಪಾಂ
ಚಾಲ ಬಲದಲಿ ಸತ್ಯಜಿತುವನು
ಮೇಲಣಾಹವದೊಳು ಶತಾನೀಕ ಕ್ಷಿತೀಶ್ವರನ
ಸೀಳಿದನು ಮಿಡುಕುವ ಮಹಾರಥ
ರೇಳು ನೂರನು ತುರಗ ಗಜ ಕಾ
ಲಾಳನಳಿದುದನಾವನೆಣಿಸುವನಹಿತ ಸೇನೆಯಲಿ ೪೬

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಂತಿಯ ಜಠರವಲ್ಪವಲೆ
ನಿನ್ನುನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ ೪೭

ರಾಯನಾಪತ್ತಿಂದ ಮುನ್ನವೆ
ಸಾಯಬೇಹುದು ತನಗೆನುತಲಡ
ಹಾಯಿದನು ಕಲಿ ಮತ್ಸ್ಯನೃಪ ನಿಜಬಂಧುಗಳ ಸಹಿತ
ನೋಯಬೇಹುದು ಮುನ್ನ ತಾವೆನು
ತಾಯತಿಕೆಯಲಿ ಪಂಚ ಕೈಕೆಯ
ರಾಯುಧದ ಬೆಳಗಳ್ಳಿರಿಯ ನೂಕಿದರು ತೇರುಗಳ ೪೮

ತಲೆಗೆ ಕೊಂಡೆವು ಹಣವನಿನ್ನಿದ
ನುಳುಹಿಕೊಂಡಿರಲಾಗದೆಂದಿ
ಟ್ಟಳಿಸಿ ಹೊಕ್ಕುದು ಯವನ ಸಂವೀರರು ಸುಷೇಣಕರು
ಅಳವಿಗಳುಕುವುದಾಳುತನದ
ಗ್ಗಳಿಕೆಯೇ ಸುಡಲೆನುತ ಮನ ಮುಂ
ಕೊಳಿಸಿ ಕುಂತೀಭೋಜ ಹೊಕ್ಕನು ಸಕಲದಳ ಸಹಿತ ೪೯

ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ ೫೦

ತೊಲಗು ವಿಪ್ರಾಧಮ ಸುಯೋಧನ
ಬಲದೊಳಗೆ ಬಹು ಭಾಷೆತನದಲಿ
ಗಳಹಿ ಬಂದರೆ ಹಿಡಿಯ ಬಲ್ಲೈ ಧರ್ಮನಂದನನ
ಗಳದ ಸತ್ವವನರಿಯದದ್ರಿಗೆ
ತಲೆಯನೊಡ್ಡುವರೇ ವೃಥಾ ಕಳ
ಕಳಿಸಿ ನುಡಿವರೆ ಮಾನ್ಯರೆನುತಿದಿರಾದನಾ ದ್ರುಪದ ೫೧

ದಿಟ್ಟನಹೆಯೋ ದ್ರುಪದ ಹಾ ಜಗ
ಜಟ್ಟಿಗಳಿಗುಪಹಾಸ್ಯವೇ ಗರಿ
ಗಟ್ಟಿದಿರಿ ನೀವ್ ಹಿಡಿಯಲೀವಿರೆ ಧರ್ಮನಂದನನ
ತೊಟ್ಟ ಜೋಹಕೆ ತಕ್ಕ ನುಡಿಗಳ
ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ ಎನುತ ಕರೆದನು ಸರಳ ಸರಿವಳೆಯ ೫೨

ದರ್ಪದಾಭರಣಕ್ಕೆ ಸೂಸಿದ
ವೊಪ್ಪಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿ ಕದಂಬವನೀತನಂಬುಗಳು ೫೩

ಮರುಳೆ ಮಂಜಿನ ಮಳೆಗೆ ಕುಲಗಿರಿ
ಕರಗುವುದೆ ನೀನೆಚ್ಚ ಶರ ಪಂ
ಜರಕೆ ಸಿಲುಕುವ ವೀರರೇ ಪಾಂಡವ ಮಹಾರಥರು
ಕೊರಳ ರಕ್ಷಿಸಿಕೊಳ್ಳೆನುತ ಚ
ಪ್ಪರಿಸಿ ದ್ರುಪದ ವಿರಾಟರೆಚ್ಚರು
ಸರಳ ರಶ್ಮಿಯ ಮಾಲೆ ಮುಕ್ಕುರುಕಿದವು ದಿಗುತಟವ ೫೪

ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ದಾರೆಗಳ ಕಿಡಿ
ಹೊರಳಿಗಳ ಹೊಗರಂಬು ಹೊಕ್ಕವು ಪಾಂಡು ಸೈನ್ಯದಲಿ ೫೫

ನರರ ಕಡಿಯಾನೆಗಳ ಕಡಿಯಲಿ
ಬೆರಸಿದವು ತೇಜಿಗಳ ಕರುಳಲಿ
ಕರಿ ಘಟೆಯ ಕರುಳುಗಳು ತೊಡಕಿದವುಡಿದ ತೇರುಗಳು
ಜರಿದ ಜೋಡಿನೊಳೊಂದಿದವು ಕ
ತ್ತರಿಸಿದಾಯುಧ ಕಡಿದ ಸಿಂಧದ
ಹೊರಳಿಯಲಿ ಹೋಳಿದವು ನಿಮಿಷಕೆ ಪಾಂಡು ಸೇನೆಯಲಿ ೫೬

ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ ೫೭

ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೈಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು ೫೮

ಘಾಯವಡೆದನು ದ್ರುಪದ ಮತ್ಸ್ಯನ
ಬಾಯೊಳೊಕ್ಕುದು ರಕುತ ಕೈಕೆಯ
ರಾಯುಧಂಗಳನೊಪ್ಪಿಸಿದರಿಳಿದೋಡಿದರು ರಥವ
ಸಾಯಲಾದನು ಧೃಷ್ಟಕೇತು ವಿ
ಡಾಯಿಗೆಟ್ಟನು ಭೋಜನಿತ್ತಲು
ರಾಯನಲ್ಲಿಗೆ ರಥವ ದುವ್ವಾಳಿಸಿದನಾ ದ್ರೋಣ ೫೯

ತೀರಿತಿನ್ನೇನರಿ ನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿನಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥ ಕುಮಾರರನುವಾಯ್ತು ೬೦

ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘು ಭುಜಬಲ ಭಾನು ನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ ೬೧

ಗೆಲುವು ನಮಗೆಲ್ಲಿಯದು ಧರ್ಮಜ
ಸಿಲುಕುವುದು ತಾನಿಲ್ಲ ಕೃಷ್ಣನ
ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು
ನೆಲನ ತಿಣ್ಣವ ತಿದ್ದಲೋಸುಗ
ಸುಳಿದನರಿಯಾ ಕೃಷ್ಣನೀತನ
ಬಲದವರಿಗೆಂತಹುದು ಬಾಧೆಗಳೆಂದನಾ ಕರ್ಣ ೬೨

ಗಿರಿಯ ಕೊರಳಿಗೆ ವಜ್ರಮಣಿಯಾ
ಭರಣವೇ ದಳ್ಳುರಿಯ ಜೋಡುಗ
ಳರಗಿನೋಲೆಯಕಾರರಿಗೆ ಸುಯಿಧಾನವೇ ನೃಪತಿ
ವರ ತಿಮಿರ ರಾಜಂಗೆ ಮಂಗಳ
ಕರವೆ ಆ ರವಿ ಕೃಷ್ಣ ಭಕ್ತರ
ಪರಿಭವವು ಜೀವರಿಗೆ ಪಥ್ಯವೆ ಎಂದನಾ ಕರ್ಣ ೬೩

ಇರಲಿ ಮೇಣ್ ದೂರದಲಿ ಹತ್ತಿರೆ
ಯಿರಲಿ ತನ್ನವರೆಂದರತ್ತಲೆ
ಹರಹಿಕೊಂಬನು ಕೃಷ್ಣನದು ತನಗೇರಿಸಿದ ಬಿರುದು
ಹರಿ ಸಮೀಪದೊಳಿಲ್ಲ ದ್ರೋಣಂ
ಗರಸ ಸಿಲುಕಿದನೆಂದು ಬಗೆದೈ
ಮರುಳೆ ಮುರವೈರಿಯ ಕಟಾಕ್ಷದ ಕಾಹು ಘನವೆಂದ ೬೪

ಆ ಹದನದಂತಿರಲಿ ನಮ್ಮೀ
ಯಾಹವಕೆ ಕಲಿ ಭೀಮ ಸಾತ್ಯಕಿ
ರೂಹುದೋರಿದರದೆ ಘಟೋತ್ಕಚ ಪಾರ್ಥಸುತರೊಡನೆ
ಸಾಹಸಿಕರೊಗ್ಗಾಯ್ತು ದ್ರೋಣಂ
ಗೀ ಹದನು ಭಾರಾಂಕವೀಗಳೆ
ಬೇಹ ಸುಭಟರ ಕಳುಹು ಕಾಳೆಗಕೆಂದನಾ ಕರ್ಣ ೬೫

ಎನಲು ನೂಕಿದನರಸ ದುಶ್ಯಾ
ಸನ ಜಯದ್ರಥನಿನತನುಜ ಗುರು
ತನುಜ ಕೃಪ ಮಾದ್ರೇಶ ಭಗದತ್ತಾದಿಗಳು ಸಹಿತ
ತನತನಗೆ ನಾಯಕರು ದ್ರೋಣನ
ಮೊನೆಯ ಬಲಿದರು ಹಿಡಿ ಯುಧಿಷ್ಠಿರ
ಜನಪತಿಯನೆನುತುರುಬಿದರು ತುರುಬಿದರು ಪರಬಲವ ೬೬

ಫಡಫಡಾರೋ ಧರ್ಮಪುತ್ರನ
ಹಿಡಿವವರು ಬಾಯ್ಬಡಿಕರೈ ಕಾ
ಳ್ಗೆಡೆದಡೇನಹುದೆನುತ ಹೊಕ್ಕನು ಭೀಮನುರವಣಿಸಿ
ಕಡಲ ಕಡುಹಿನ ಬಹಳ ಲಹರಿಯ
ನೊಡೆಮುರಿವ ಮಂದರದವೋಲವ
ಗಡಿಸಿ ಹೊಕ್ಕನು ಗದೆಯ ಘಾಡದ ಹೊದರ ಹೊಯ್ಲಿನಲಿ ೬೭

ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡೆಜೋಡು ಬಲು ಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬಿದುದು ನಿಬ್ಬರವಾಗಿ ಬಹುವಿದ ವಾದ್ಯ ನಿರ್ಘೋಷ ೬೮

ತೆತ್ತಿಗರ ಬರಹೇಳು ಭೀಮಂ
ಗೆತ್ತಣದು ಜಯವೆನುತ ಸುಭಟರು
ಮುತ್ತಿಕೊಂಡರು ಮುಸುಕಿದರು ಮೆತ್ತಿದರು ಸರಳುಗಳ
ಕತ್ತಲೆಯ ಹೇರಾಸಿ ಸೂರ್ಯನ
ನೊತ್ತಿ ತಹ ದಿನವಾಯ್ತಲಾ ಎನು
ತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ ೬೯

ಒಂದು ಕಡೆಯಲಿ ಭೀಮ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಶರ
ವೊಂದು ಕಡೆಯಲಿ ಪಾರ್ಥನಂದನ ಭೀಮನಂದನರು
ಒಂದು ಕಡೆಯಲಿ ನಕುಲ ಪಾಂಡವ
ನಂದನರು ಮತ್ತೊಂದು ದೆಸೆಯಲಿ
ಮುಂದುವರಿದರು ಮುರಿದರರಿಗಳ ಹೊದರ ಹೊಸ ಮೆಳೆಯ ೭೦

ಥಟ್ಟು ನುಗ್ಗಾಯಿತು ವಿರೋಧಿಗ
ಳಿಟ್ಟಣಿಸುತಿದೆ ದ್ರೋಣನೊಬ್ಬನ
ಬಿಟ್ಟು ನೋಡುವುದುಚಿತವಲ್ಲೆನುತೆಡಬಲನ ನೋಡಿ
ಬಿಟ್ಟನಾಹವಕಹಿತಬಲ ಜಗ
ಜಟ್ಟಿ ಕೌರವ ನೃಪತಿ ರಥವನು
ಹೊಟ್ಟುಗರ ತೆಗೆ ಹೋಗ ಹೇಳೆಂದೆಚ್ಚನತಿರಥರ ೭೧

ಮಗನ ತೆಗೆಯೋ ಸಾತ್ಯಕಿಯ ಹೆರ
ತೆಗೆಯ ಹೇಳೋ ಬೇಡ ನಕುಲಾ
ದಿಗಳ ನೂಕಭಿಮನ್ಯುವನು ಹಿಮ್ಮೆಟ್ಟ ಹೇಳೆನುತ
ಮೊಗದ ಹೊಗರಿನ ಕೆಂಪನುಗುಳ್ವಾ
ಲಿಗಳ ದಂತದಲೌಕಿದಧರದ
ಬಿಗಿದ ಹುಬ್ಬಿನ ಭೀಮ ಹೊಕ್ಕನು ಗದೆಯ ತಿರುಗಿಸುತ ೭೨

ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ ೭೩

ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವದುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರುಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಶಾಸನಾದಿಗಳು ೭೪

ವರ ವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಯಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತ
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ ೭೫

ಎಚ್ಚ ಶರವನು ಗದೆಯಲಣೆದಿಡು
ಗಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚು ಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳೆಂದ ೭೬

ಸರಿದರೀ ನಾಲುವರು ರಾಯನ
ಮರಳಲೀಯದೆ ಮತ್ತೆ ಮಾರುತಿ
ಹರಸಿದನು ನಿಜರಥವನತಿರಥರೊಡ್ಡು ಲಟಕಟಿಸೆ
ದೊರೆಯ ತೆಗಯೋ ನೂಕು ನೂಕಲಿ
ಕರಿಘಟೆಯನೆನೆ ಮುಗಿಲ ಮೋಹರ
ಧರೆಗೆ ತಿರುಗಿದವೆನಲು ಜೋಡಿಸಿದರು ಗಜವ್ರಜವ ೭೭

ವಂಗನಂಬಟ್ಟನು ವರಾಳ ಕ
ಳಿಂಗ ಬರ್ಬರರಾನೆಗಳ ಥ
ಟ್ಟಿಂಗೆ ಕೈವೀಸಿದರು ಕೊಂಡರು ನಾಳಿವಿಲ್ಲುಗಳ
ವಂಗಡದಲೆಂಬತ್ತು ಸಾವಿರ
ತುಂಗ ಗಜಘಟೆ ಕವಿದವಿದಕಿ
ನ್ನಂಗವಿಸುವವರಾರೆನುತ ಗಜಬಜಿಸಿತರಿಸೇನೆ ೭೮

ಆಳ ಹೆದರಿಸಿ ನುಡಿವ ನಾಯ್ಗಳ
ಬೀಳ ಬಡಿ ಬಡಬಾಗ್ನಿ ನೊರಜಿನ
ದಾಳಿಗಳುಕುವುದುಂಟೆ ಫಡ ಫಡಯೆನುತ ಬೊಬ್ಬಿರಿದ
ಕಾಲ ದಂಡವ ತಿರುಹಿ ಭುವನದ
ಲೂಳಿಗವ ಮಾಡುವ ಕೃತಾಂತನ
ಹೋಲುವೆಯ ಹೊಸಬಿಗನು ಹೊಕ್ಕನು ಭೀಮನುರವಣಿಸಿ ೭೯

ಗದೆಯಲಪ್ಪಳಿಸಿದನು ಕೋದಂ
ಡದಲಿ ಕಾದಿದ ಮುದ್ಗರದಲೊರ
ಸಿದನು ಲೌಡಿಯಲರೆದನುರೆ ತರಿದನು ಕೃಪಾಣದಲಿ
ಒದೆದು ಕೆಲವನು ಮುಷ್ಟಿಯಲಿ ಮೋ
ದಿದನು ಕೆಲವನು ನಿಖಿಳ ಶಸ್ತ್ರಾ
ಸ್ತ್ರದಲಿ ಕಾದಿದನನಿಲಸುತನಿಭಬಲವ ಬರಿಕೈದು ೮೦

ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿ ಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ೮೧

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗ ಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ ೮೨

(ಸಂಗ್ರಹ: ಸತ್ಯ, ಶೈಲ, ಮೋಹನ ಮತ್ತು ಪ್ರಿಯ - ಹಾಸನ)