ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Wednesday, May 12, 2010

ಕರ್ಣಪರ್ವ: ೦೩. ಮೂರನೆಯ ಸಂಧಿ

ಸೂ : ರಣಭಯಂಕರನಹಿತ ಸುಭಟರ
ಹಣಿದವನು ಹೊಯ್ದಾಡಿ ಸಾತ್ಯಕಿ
ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ

ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ರೋಷ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ ೧

ಕಳೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಪದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ ೨

ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ ೩

ಅರರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರನೆಚ್ಚನು ಕೊಂದನೀಪರಿ ಹತ್ತು ಸಾವಿರವ ೪

ಬಿದ್ದವಗಣಿತ ತುರಗ ದಳ ಕೈ
ಮುದ್ದೆಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ ೫

ಥಟ್ಟು ಮುರಿದುದು ಕೊಂಡ ನೆಲವನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜಗ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ ೬

ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ ೭

ಕೆಣಕಿದರೆ ಭುಗಿಲೆಂದುದೀತನ
ರಣ ಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣೆದವೋ ನಿನ್ನಾಳು ಕುದುರೆಯನರಿಯೆ ನಾನೆಂದ ೮

ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸು ಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ ೯

ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ ೧೦

ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಯಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ ೧೧

ಪೂತು ಮಝ ದಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜ ಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು ೧೨

ಮುರಿದ ಬಲ ಗರಿಗಟ್ಟಿತೊಗ್ಗಿನ
ಲೊರಲಿದವು ನಿಸ್ಸಾಳ ಕಹಳೆಯ
ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ
ತುರುಗಿ ತೂಳುವ ಸಿಂಧ ಸೆಳೆ ಮಡ
ಲಿರಿವ ಝಲ್ಲರಿ ಪಲ್ಲವದ ನಿಡು
ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು ೧೩

ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ ೧೪

ಭಾರಿಯಾಹವವಾಯ್ತು ಖಿಳದಳ
ಭಾರ ಬಿದ್ದುದು ಸಾತ್ಯಕಿಯ ಸುರ
ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು
ಹೋರಿದರೆ ಹುರುಳಿಲ್ಲೆನುತ ಪರಿ
ವಾರವೊರಲಿತು ಪಾಂಡ್ಯ ಕೈಕೆಯ
ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ ೧೫

ಮುಂದೆ ಹರಿದರು ಪಾಂಡು ತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ ೧೬

ಹೆರತೆಗೆದು ಕೆಲಸಾರಿ ಮಕ್ಕಳು
ಮರಿಗಳಿಗೆ ರಣವೇಕೆ ಪಾಂಡವ
ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ
ಇರಿವ ಭಟನಹೆ ಯಾದವರ ಬಡ
ಕರುವೆ ಬಾ ಬಾ ಎಂದು ಚಿಟಿಕಿಸಿ
ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ ೧೭

ಸಾರು ನೀ ಸಾರೆಲವೊ ಭೀಮನ
ತೋರಗರುಳಿನ ದಂಡೆಯನು ಕೈ
ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ
ಆರಿದನು ಜಗ ನಡುಗಲಾ ಜಂ
ಭಾರಿ ಜವಗೆಡೆ ಬೊಬ್ಬಿರಿದನಾ
ಭಾರತದ ಭಾರಣೆಯಲೈದಿದನನಿಲ ನಂದನನ ೧೮

ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ ೧೯

ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ ೨೦

ಜಾಗು ಮಝರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಬಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ ೨೧

ಎಲೆಲೆ ಹಾರುವನೇಕೆ ಹರಿಮೇ
ಖಳೆಯ ಕೇಳಿಕೆಯೇಕೆ ಪಡಿಮ
ದ್ದಳೆಯಬಡಿಕರ ಬಿಂಕ ಮೇಳವವಿಲ್ಲಲಾ ನಿನಗೆ
ಹೊಲುಬುಗೆಡುವನೆ ಭೀಮನೀ ಸರ
ಳೊಳಗೆ ಹುಸಿಯೇಕೆನುತ ಬಾಣಾ
ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ ೨೨

ರಥದ ಮೇಲಂಬುಗಳು ರಿಪು ಸಾ
ರಥಿಯ ಮೈಯಲಿ ಘಾಯ ತುರಗ
ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ
ಶಿಥಿಲವಾದುವು ಗಾಲಿಗಳು ಬಳಿ
ರಥಿಕರೀತನ ಬಿಟ್ಟು ಹಾಯ್ದರು
ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ ೨೩

ನೊಗವನೀಡಾಡಿದನು ಕುದುರೆಗ
ಳೊಗಡಿಸಲು ರಕುತವನು ಸಾರಥಿ
ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ
ಒಗುವ ನೆತ್ತರ ಸುರಿವ ಬಾಣದ
ನುಗುತೆಗಂಡಿಯ ಮೆಯ್ಯ ಭೀಮನ
ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ ೨೪

ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ ೨೫

ನನೆದ ಜಾಜಿನ ಗಿರಿಯೊ ಭೀಮನ
ತನುವೊ ಖಂಡಿತ ರಕ್ತಚಂದನ
ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ
ಮನ ಹಣುಗಿ ತುಟಿಯೊಣಗಿ ನೋಟದ
ಮೊನೆ ಮುರಿದು ಝೋಂಪಿಸುತ ಮುಂದಣಿ
ಗೊನೆದು ಬಿದ್ದನು ಭೀಮ ಪಾಂಡವ ಸೇನೆ ಕಳವಳಿಸೆ ೨೬

ಅಹಹ ವೈರಿಗೆ ಧರೆಗೆ ಪಾಣಿ
ಗ್ರಹಣವಾಯಿತೆ ಪಾಂಡುಸುತರಿಗೆ
ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ
ಅಹಿತರಿಗೆ ಗೆಲುವಾಯ್ತು ನಮಗಿ
ಲ್ಲಿಹುದು ಮತವಲ್ಲೆನುತ ಸಾರಥಿ
ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ ೨೭

ತಂದೆಯಳಿದಾ ಹೊತ್ತು ಹಗೆಯನು
ಕೊಂದು ಸಾಯದೆ ದೇಹ ಮೋಹಕೆ
ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ
ಎಂದು ಸಾರಥಿ ಶೋಕಿಸುತ ಗುರು
ನಂದನನ ಕೊಂಡೊಯ್ದನಿತ್ತಲು
ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ ೨೮

ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕದು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕೆಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಸೃಂಜಯರು ೨೯

ಬಲಿದುದಾಹವ ಮತ್ತೆ ಚಾತು
ರ್ಬಲ ಛಡಾಳಿಸಿ ಕಾದುತಿರ್ದುದು
ಮುಳಿದು ಶಲ್ಯನ ಕೊಡೆ ಪಂಚದ್ರೌಪದೀಸುತರು
ಅಳವಿಗೊಟ್ಟಿರಿಯಕಟಕಟ ಮ
ಕ್ಕಳಿರ ನಿಮಗೇಕಿದು ಯುಧಿಷ್ಠಿರ
ಫಲುಗುಣರ ಬರಹೇಳಿರೆನುತೆಚ್ಚನು (ಪಾ: ಬರಹೇಳೆನುತಲೆಚ್ಚನು) ಮಹಾಸ್ತ್ರದಲಿ ೩೦

ಎಚ್ಚನಿವನಿವನೊಡನೆ ಬಾಣವ
ಕೊಚ್ಚಿದರು ಕೊಡಹಿದರು ಶರದಲಿ
ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ
ಬೆಚ್ಚಿದವು ರಥವಾಜಿ ಹತ್ತಿಗೆ
ಬಿಚ್ಚಿ ರಥ ನುಗ್ಗಾಯ್ತು ಶೌರ್ಯದ
ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು ೩೧

(ಸಂಗ್ರಹ : ಸುಬ್ರಹ್ಮಣ್ಯ)