ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Thursday, May 13, 2010

ಕರ್ಣಪರ್ವ: ೦೪. ನಾಲ್ಕನೆಯ ಸಂಧಿ

ಸೂ: ರಾಯದಳ ಮಝ ಪೂತುರೆನೆ ರಿಪು
ರಾಯ ಸೇನೆಯ ಮುರಿದು ಪಾಂಡವ
ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ

ಫಡ ಫಡೆಲವೋ ಶಲ್ಯ ಮಕ್ಕಳ
ಬಡಿದು ಬೆರೆದೈ ಬಾಹುಬಲದಲಿ
ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ
ಘುಡುಘುಡಿಸಿ ರೋಮಾಂಚನದ ಹೊರ
ಗುಡಿಯ ಸೊಂಪಿನ ಮೈಯ್ಯ ಕಡುಗಲಿ
ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ೧

ಬಾಯಿ ಬಡಿಕರು ಯಾದವರು ಗರು
ವಾಯಿ ನಿನಗೆಲ್ಲಿಯದು ಸುಭಟರಿ
ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ
ಸಾಯಕವ ಹಿಡಿ ಸಾಕು ಸೋಲದ
ತಾಯಿಮನೆ ನಿನಗಿದಿರಲಿದೆ ನಿ
ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ೨

ಎಲವೋ ಮಾದ್ರಾಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ೩

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ೪

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ ೫

ತೆಗೆಸಿದನು ಸಾತ್ಯಕಿಯನೀತನ
ಬಿಗಿದನಂಬಿನಲವನ ಬಾಣಾ
ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ
ಜಗುಳಿದನು ಕಲಿ ನಕುಲ ರಥ ವಾ
ಜಿಗಳ ಜೋಡಣೆ ಬಿಚ್ಚಿ ರಕುತವ
ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ೬

ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೆ ನೀನೇನಹೆ ಮಹಾ ಸಂ
ಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ೭

ನೋವನೇ ನೊಣವೂರಿದರೆ ಸಹ
ದೇವನೆಲವೋ ನಿನ್ನ ಕೊಂದಡೆ
ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ
ತಾವಕನ ಸಾರಥಿಯ ರಥ ತುರ
ವಯಳಿಯನಾಯುಧವ ಖಂಡಿಸೆ
ಜೀವಗಳ್ಳರ ದೇವ ಪಸರಿಸಿದನು ಪಲಾಯನವ ೮

ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ೯

ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿದೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ೧೦

ಆರಿವರು ನಕುಳಾಂಕರೇ ಜ
ಜ್ಜಾರತನವೇ ನಮ್ಮೊಡನೆ ನೀ
ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ
ಭಾರಿಯಾಹವದೆಡೆಗೆ ನಿಮ್ಮನಿ
ದಾರು ಬಿಟ್ಟರುಪಾಯದಲಿ ನಿಮ
ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ೧೧

ತೊಲತೊಲಗು ತರುವಲಿಗೆ ರಣವಿದು
ಸುಲಭವೇ ಲೋಕೈಕವೀರರು
ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ
ಗೆಲುವ ನಂಬುಗೆ ನಿನ್ನ ತಂದುದು
ಕೊಲೆಗೆ ನೋಡಾದರೆಯೆನುತ ಕೈ
ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ೧೨

ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೋಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ೧೩

ಆಳು ನೀನಹುದೆಲವೊ ಕರ್ಣ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸು ಸೈರಿಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯನೆ ಕೊಳ್ಳೆನುತ ನಕುಲನನೆಚ್ಚನಾ ಕರ್ಣ ೧೪

ತಾಗಿದವು ನಾಲ್ಕಂಬು ದೇಹದ
ಬೇಗಡೆಯಲೆಂಟಂಬು ನುಸುಳಿದ
ವಾಗ ಹದಿನಾರಂಬು ಹರಿದವು ಮತ್ತೆ ಬಳಸಲಿಸಿ
ಸೂಗುರಿಸಿ ಝೊಮ್ಮಿನಲಿ ಮುಂದಕೆ
ಬಾಗಿ ಬಿದ್ದನು ಸಾರಥಿಯ ಕೈ
ಲಾಗಿನಲಿ ತಿರುಗಿದನು ನಕುಳನು ರಾಜ ಮೋಹರಕೆ ೧೫

ಹರಿಬದಾಹವವೆನಗೆ ತನಗೆಂ
ದುರವಣಿಸಿದರು ಚೇಕಿತಾನಕ
ದುರುಳ ಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಸೃಂಜಯರು
ಬರಲಿ ಬರಲೀ ಹೊಟ್ಟ ತೂರುವ
ಡರಸು ಮೋಹರವೇಕೆ ಸಾಕೆಂ
ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ೧೬

ದಳಪತಿಯ ಹಿಂದಿಕ್ಕಿ ಪಾಂಡವ
ಬಲ ಮಹಾರಥರುರವಣಿಸಿ ಮೂ
ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ
ಕೊಲೆಗೆ ಬೇಸರರಿವರು ಸಾವುದ
ಕಳುಕದವದಿರು ಹೇಳುವೆಡೆ ನಾ
ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ೧೭

ವಿರಥರಾದ ಶಿಖಂಡಿ ಮೊದಲಾ
ದರಿಭಟರು ಜಾರಿದರು ಸುಭಟರ
ನೊರಸಿ ಕೊಂದೇರಿದನು ಕೆದರಿದರವರು ರಿಪುಬಲವ
ದೊರೆಗೆ ಹತ್ತಿರೆಯಾಯ್ತು ಕಾಳೆಗ
ವರಿದೆನಲು ನಿಸ್ಸಾಳಕೋಟಿಯ
ಧರದುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ೧೮

ಭಟರ ತೆಗೆತೆಗೆ ಪಾರ್ಥನೋ ರಿಪು
ಕಟಕ ಭೈರವನೋ ವೃಥಾ ಸಂ
ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ
ಲಟಕಟಿಸಿ ಬಲವೊದರಲಪ್ರತಿ
ಭಟರು ಬಳಿಕನುವಾಯ್ತು ವಿಜಯೋ
ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ೧೯

ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚರರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚದಿರಿರಾಗಿ ೨೦

ಆರಿದಿಪ್ಪತೈದು ಸಾವಿರ
ತೇರು ಸರಿಸದಲೊಂದು ವಾಘೆಯ
ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ
ಸಾರಿಗೆಗೆ ಸಾರಿಗೆಗೆ ಬಾಣಾ
ಸಾರವಿಪ್ಪತೈದು ಸಾವಿರ
ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ೨೧

ಸುರಿದುದತಿವಳೆಯೆಂದು ಕುಲಗಿರಿ
ಕರಗುವುದೆ ಮೇಗರೆಯ ಶಿಲೆಯಿ
ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ
ಅರಿ ಮಹಾರಥರನಿಬರೈಸರ
ಸರಳು ಸಂಖ್ಯಾತೀತವದರೊಂ
ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳೆಂದ ೨೨

ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ೨೩

ಘಾಯವಡೆದರು ಘಾಸಿಯಾದರು
ಬಾಯಲೊಕ್ಕುದು ಕರುಳು ಮಕ್ಕಳು
ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ
ನಾಯಕರು ಹಲರುಳಿದುದಧಿಕರು
ಹಾಯಿದರು ಹೂಣಿಗರು ಹರಿಹಂ
ಚಾಯಿತಿಪ್ಪತೈದುಸಾವಿರ ವರ ಮಹಾರಥರು ೨೪

ಎಲೆಲೆ ಸಂಶಪ್ತಕರ ಭಾರಿಯ
ಬಲ ಮುರಿದು ಬರುತಿದೆ ವಿಘಾತಿಗೆ
ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ
ಜಲಧಿ ಬರುತುದು ರಾಜ್ಯಕಾರ್ಯಕೆ
ನಿಲುವಡಿದು ಹೊತ್ತೆನುತ ಮಂತ್ರಿಗ
ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ೨೫

ಕರವ ನೆಗಹಿದನಕಟ ಹೋಹೋ
ಬಿರುದರಂಜದಿರಂಜದಿರಿ ನಿ
ಮ್ಮರಿಭಟಗೆ ನಾಲ್ಕಿಲ್ಲ ಕೈಕಣ್ಣಿಲ್ಲ ನೊಸಲಿನಲಿ
ದೊರೆಯ ಕೈಯನು ಕಂಡ ಬಳಿಕೋ
ಸರಿಸಿರೈ ಪರಿವಾರ ದೂರದ
ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ೨೬

ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ರಾಯನಿದಿರಲಿ
ಹೇಡಿ ಕಲಿಯಹರೆಂಬರಿವದಿರು ಹೇವಮಾರಿಗಳೆ
ಜಾಡಿಸುವ ಝಲ್ಲರಿಯ ಮೋರೆಗೆ
ನೀಡಿ ಮರುಳುವ ಸೀಗುರಿಯ ದಳ
ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ೨೭

ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾವಹ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಪುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ೨೮

ಎರಡು ದಳ ಗಂಟಿಕ್ಕಿದುದು ನೆಲ
ಬಿರಿಯೆ ಬೆರಸಿತು ಹೊಯ್ದರುರುಳುವ
ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ
ಪರಿವಿಡಿಯದಂತಿರಲಿ ದೊರೆದೊರೆ
ಯುರವಣಿಸಿ ಹಳಚಿದರು ಪಾಂಡವ
ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ೨೯

ಅರಸರಿವರೇ ಶಿವಶಿವಾ ನಿ
ಷ್ಕರುಣರೈ ನೀವೆಮ್ಮವೊಲು ಮೊನೆ
ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ
ಒರಟರರ್ಜುನ ಭೀಮರತಿ ನಿ
ಷ್ಠುರರು ನಾವಡಿಮೇಲಹೆವು ನೀವ್
ಮರಳಿ ಬಿಜಯಂಗೈವುದೆಂದನು ಕೌರವರರಾಯ ೩೦

ಕೋಲ ಬಲುಹುಂಟಾಗೆ ನಾಲಗೆ
ಹೋಲ ನುಡಿಯದು ಹೊಲ್ಲದೇನಿದು
ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು
ಆಳುತನಕಾಭರಣವೇ ಮಾ
ತಾಳಿತನ ಕೈದೋರದಹಿತನ
ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ೩೧

ಖರೆಯರಲ್ಲಾ ನೀವು ಕೊಂತಿಯ
ವರ ಕುಮಾರರು ನಿಮ್ಮೊಡನೆ ಸಂ
ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು
ಸರಳು ಗಹನವ ಹೊದಿಸಿದವು ಹೂಂ
ಕರಿಸಿದವು ಹರೆಗಡಿದವರಿಮೋ
ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ೩೨

ಎಚ್ಚನೆಂಟಂಬಿನಲಿ ಕೌರವ
ನೆಚ್ಚ ಬಾಣವ ಕಡಿದು ನೂರರ
ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ
ಎಚ್ಚನರಸನನಾ ಶರವ ಕಡಿ
ದೆಚ್ಚನವನಿಪನುಭಯರಾಯರ
ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ೩೩

ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಆಮಿತ ರೋಷ ವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳೆಂದ ೩೪

ಗೆಲುವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ೩೫

ಸೆಳೆದು ಹಿರಿಯುಬ್ಬಣವನವನಿಪ
ಕೆಲಕೆ ಚಿಗಿದನು ಹಾ ಮಹಾದೇ
ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದೆನೆನುತ ಬಲ ಬೆದರೆ
ಬಿಲುದುಡುಕಿ ಕೃತವರ್ಮ ಕೃಪ ಸೌ
ಬಲ ಕೃಪಾನುಜ ಶಲ್ಯ ಗುರುಸುತ
ದಳಪತಿಗಳೇರಿದರು ರಾಯನ ಸುತ್ತುವಳಯದಲಿ ೨೬

ದೊರೆಗೆ ಬಿದ್ದುದು ಭಾರಿಯಾವಹ
ವರರೆ ಬರಹೇಳೆನುತ ಕವಿದುದು
ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು
ಬಿರುದ ಧೃಷ್ಟದ್ಯುಮ್ನ ಮಾದ್ರೇ
ಯರು ಶಿಖಂಡಿ ಯುಯುತ್ಸು ಸೃಂಜಯ
ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ೩೭

ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ೩೮

ರಾಯರಿಬ್ಬರ ಮನದ ತಿಮಿರದ
ತಾಯಿಮನೆಯೆಂಬವೊಲು ತಾ ಪೂ
ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ
ರಾಯ ಮೋಹರ ತೆಗೆದವೆರಡು ವಿ
ಡಾಯಿಯಲಿ ಬಹುವಿಧದ ವಾದ್ಯ ನ
ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ೩೯

(ಸಂಗ್ರಹ: ಸುಬ್ರಹ್ಮಣ್ಯ)