ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Thursday, May 6, 2010

ಗದಾಪರ್ವ: ೦೨ ಎರಡನೆಯ ಸಂಧಿ

ಸೂ. ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ
ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ ೧

ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದು ಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ ೨

ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ ೩

ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ ೪

ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರುಳೆಂದು ಸಾತ್ಯಕಿ ಸುರಿದನಂಬುಗಳ ೫

ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬

ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ ೭

ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ ೮

ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲ ಶರರಚನೆ
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು ೯

ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ ೧೦

ಮಸಗಿದುದು ಪರಿವಾರ ಕೌರವ
ವಸುಮತೀಶ್ವರನರಕೆಯಲಿ ದಳ
ಪಸಿರಿತು ಬಿಡದರಸಿ ಕಂಡರು ಕಳನ ಮೂಲೆಯಲಿ
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ ೧೧

ಅದೆ ಸುಯೋಧನನೊದ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡುಮುರಿಯಾಯ್ತು ಸಿಲುಕಿತು ಮೌನ ಮೋನದಲಿ ೧೨

ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದ ವಾಘೆಯಲಿ ಕೈ
ಬಿಗಿದುದುದಂಕಣೆದೊಡಕಿನಲಿ ಮರನಾದವಂಘ್ರಿಗಳು
ಬಗೆಯ ಮಡಿ ಮಸಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು ೧೩

ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ ೧೪

ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ ೧೫

ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ ೧೬

ಮುತ್ತಿದವು ರಥವೇಳುನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ ೧೮

ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ ೧೯

ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು (ಪಾ: ಗಜವಿಪ್ಪತು) ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ ೨೦

ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧

ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರುವನಿನ್ನಾಹವ ವಿಲಂಬವ ಮಾಡಬೇಡೆಂದ ೨೨

ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ ೨೩

ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ ೨೪

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ ೨೫

ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ ೨೬

ವ್ಯರ್ಥವಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ ೨೭

ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ ೨೮

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರುಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ ೨೯

ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜು
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ ೩೦

ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ೩೧

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ ೩೨

ಹರಿಬದಲಿ ಹೊಕ್ಕೆರಡು ಸಾವಿರ
ತುರುಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ ೩೩

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ ೩೪

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ದೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ ೩೫

ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ೩೬

ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರವಾಯ್ತು ಗಡ ಫಡ ನೂಕು ನೂಕೆನುತ
ಆಲಿ ಕಿಡಿಯೆಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ ೩೭

ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ ೩೮

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ ೩೯

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು ೪೦

ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪತಿ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ ೪೧

(ಸಂಗ್ರಹ: ಸಂತೋಷ್ ಮತ್ತು ರಶ್ಮಿ)

ಕರ್ಣಪರ್ವ: ೦೨ ಎರಡನೆಯ ಸಂಧಿ

ಸೂ : ಭೀಮ ವಿಕ್ರಮಕುರುಬಲದೊಳು
ದ್ಧಾಮ ಕರ್ಣಾಹವದೊಳಗ್ಗದ
ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ

ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ ೧

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ ೨

ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ ೩

ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ ೪

ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದು ಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮಗುರುವನು
ಕೊಂದ ಗೆಲುವಿನಲುಬ್ಬ ಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು ೫

ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರೆಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ ೬

ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು ೭

ಸೂತಸುತ ದಳಪತಿಯೆ ಫಡ ಮು
ಯ್ಯಾಂತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್ ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು ೮

ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕು ಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ ೯

ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ ೧೦

ತರಿಸಿ ಲೋಹದ ಜತ್ತರಟ್ಟವ
ಹರಹಿದರು ಸೂಲಿಗೆಯ ಬಂಡಿಯ
ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ
ತುರಗ ರಥ ಬಿಲ್ಲಾಳನೊತ್ತಾ
ಗಿರಿಸಿ ಲಗ್ಗೆಯ ಲಹರಿಯಲಿ ಮೋ
ಹರಿಸಿದರು ಪಾಂಚಾಲ ಕೈಕೆಯರವರ ಥಟ್ಟಿನಲಿ ೧೧

ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿ ನೃಪಾಲನಾನೆಗಳು ೧೨

ರಾಯದಳ ಕಳವಳಿಸೆ ಗಜಘಟೆ
ಘಾಯಘಾಯಕೆ ನೆಲನ ಕೊಂಡವು
ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು
ನಾಯಕರ ಕಡೆನುಡಿವ ಬೈಗುಳ
ಬಾಯ ಬೊಬ್ಬೆಯ ಕೈಯ ಹೊಯ್ಗುಳ
ದಾಯಿಗರಲೇ ಎನುತ ಮೂದಲಿಸಿದನು ತಮ್ಮೊಳಗೆ ೧೩

ಕೆದರಿತರನೆಲೆ ರಾಯ ಥಟ್ಟನು
ಕೆದರಿಸಿದವಾನೆಗಳು ಹಗೆಗಳ
ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ
ತುದಿವೆರೆಳ ತುಟಿಯುಬ್ಬರಕೆ ಗಜ
ಬೆದರೆ ಗಜರೋಹಕರ ಗರ್ಜಿಸಿ
ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ ೧೪

ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದುವೈಸಾವಿರ ಮಹಾರಥರು ೧೫

ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲು ನಾರಾಚ ಸೋನೆಯಲಿ
ಅಂಘವಣೆಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ ೧೬

ಮೇಲುವಾಯ್ದಾ ರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ ೧೭

ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ (ಪಾ: ಭ್ಯುದಯವಿದಲೆ) ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲೆವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ೧೮

ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣೆಗಳ
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ ೧೯

ಸರಳ ಮಳೆಯಲಿ ನನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ ೨೦

ಕುಣಿದು ಪುಟನೆಗೆದರಿ ಗಜನ ಹೊ
ಯ್ದಣೆದು ಹಿಂಗದ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ೨೧

(ಸಂಗ್ರಹ : ಸುಬ್ರಹ್ಮಣ್ಯ)