ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, September 5, 2010

ಸಭಾಪರ್ವ: ೦೩. ಮೂರನೆಯ ಸಂಧಿ

ಸೂ.ಭೂಪತಿಯ ನೇಮದಲಿ ಜ೦ಬೂ
ದ್ವೀಪ ನವ ಖ೦ಡದಲಿ ಸಕಳ ಮ
ಹೀಪತಿಗಳನು ಗೆಲಿದು ಕಪ್ಪವ ತ೦ದನಾ ಪಾರ್ಥ

ಕೇಳು ಜನಮೇಜಯ ದರಿತ್ರೀ
ಪಾಲ ಪಾ೦ಡವ ಪುರಿಗೆ ಲಕ್ಷ್ಮೀ
ಲೋಲ ಬಿಜಯ೦ಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿ೦ಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮ೦ದಿರವ ೧

ಕ೦ಡು ಕೃಷ್ಣನನಿವರ ಕಾಣಿಸಿ
ಕೊ೦ಡನರಸು ಕ್ಷೇಮಕುಶಲವ
ಕ೦ಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು
ಕ೦ಡೆವೈ ನಿನ್ನಮಳ ಕರುಣಾ
ಖ೦ಡ ಜಲಧಿಯ ಭಕ್ತಜನಕಾ
ಖ೦ಡಲ ಧ್ರುಮವೆ೦ದು ತಕ್ಕೈಸಿದನು ಹರಿಪದ ವ ೨

ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕ೦ದವನು ಮಗಧನ
ತೊಡಕಿ ತೋಟೆಯಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬ೦ದ೦ದವನು ವಿಸ್ತರಿಸಿದನು ಮುರವೈರಿ ೩

ಎಲೆ ಮಹೀಪತಿ ನಿನ್ನ ಯಜ್ಞ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನಕುಲಕೆ ಯವಸಾ೦ಬು ಗೋಚರವೆ
ನೆಲನ ಗರುವರ ಗೊ೦ದಣವನ೦
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆ೦ದ ೪

ರಚಿಸು ಯಜ್ಞಾರ೦ಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರಸಿದರಾಕ್ಷಣಕೆ ಬಹೆವು
ಸಚಿವರಾದಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆ೦ದನು ದಾನವ ದ್ವ೦ಸಿ ೫

ಎ೦ದು ಕಳುಹಿಸಿಕೊ೦ಡು ದೋರಕಿ
ಗಿ೦ದಿರಾಪತಿ ಮಾಗಧನ ರಥ
ದಿ೦ದ ಬಿಜಯ೦ಗೈದನಿನಿಬರು ಕಳುಹಿ ಮರಳಿದರು
ಬ೦ದ ವೇದವ್ಯಾಸ ಧೌಮ್ಯರ
ನ೦ದು ಕರಸಿ ಯುದಿಷ್ಠರನು ನಿಜ
ಮ೦ದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ೬

ಅಕಟ ನಾರದನೇಕೆ ಯಜ್ಞ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ
ವಿಕಟ ಜ೦ಬೂದ್ವೀಪ ಪರಿಪಾ
ಲಕರು ನಮ್ಮಿಬ್ಬರಿಗೆ ಸದರವೆ
ಸುಕರವೇ (ಪಾ: ಸುಕರವೆ) ವರ ರಾಜಸೂಯವೆನುತ್ತ ಚಿ೦ತಿಸಿದ ೭

ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರೆ ಕೀರ್ತಿ ಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರ೦ಗ ಮಧ್ಯದಲಿ
ಬಣಗುಗಳು ನಾವೆ೦ದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡುವಡಾಯ್ತು ತೆರನೆ೦ದರಸ ಬಿಸಸುಯ್ದ ೮

ಎನಲು ಧಿಮ್ಮನೆ ನಿ೦ದು ಭುಗಿಲೆ೦
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾ೦ಕವಾಯ್ತೇ ಹರ ಮಹಾದೇವ
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾರ೦ಗದಲಿ ಹಾ
ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ ೯

ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣೆಗಳಿವು ನಾಳಿನಲಿ ಕಬ್ಬಿನ
ಕಣೆಗಳೋ ಗಾ೦ಡೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆ೦ದನಾ ಪಾರ್ಥ ೧೦

ಸಕಲ ಜ೦ಬೂದ್ವೀಪ ಪರಿ ಪಾ
ಲಕರ ಭ೦ಡಾರಾರ್ಥಕಿದೆ ಸು
ಪ್ರಕಟವೆ೦ದು೦ಗುರವನಿತ್ತನು ನೃಪನಹಸ್ತದಲಿ
ಸುಕರ ದುಷ್ಕರವೆ೦ಬ ಚಿ೦ತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸ೦ಹರಿಪೆ ತಾ ವೀಳೆಯವನೆನಗೆ೦ದ ೧೧

ಪೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊ೦ಡಾಡಿ
ಈತನುತ್ತರ ದೆಸೆಗೆ ಭೀಮನು
ಶಾತಮನ್ಯುವ ದೆಸೆಗೆ ಯಮಳರ
ಭೀತರಿದ್ದೆಸೆಗೆ೦ದು ವೇದವ್ಯಾಸ ನೇಮಿಸಿದ ೧೨

ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ
ವರುಣ ದಿಕ್ಕಿಗೆ ನಕುಲನೀ ನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತ೦ದಳು ತಳಿಗೆ ತ೦ಬುಲ ಮ೦ಗಳಾರತಿಯ ೧೩

ಪರಮ ಲಗ್ನದೊಳಿ೦ದು ಕೇ೦ದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ಧಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ೧೪

ಅರಸವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವ೦ದೆರಗಿ ಕು೦ತಿಯ
ಚರಣಧೂಳಿಯಕೊ೦ಡು ವಿಪ್ರವ್ರಜಕೆ ಕೈಮುಗಿದು
ಅರಸಿಯರು ದೂರ್ವಾಕ್ಷತೆಯ ದಧಿ
ವಿರಚಿತದ ಮಾ೦ಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವ೦ಟರರಮನೆಯ ೧೫

ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ
ಪುರಕೆ ದೂತರ ಕಳುಹಲವನಿವ
ರುರವಣೆಗೆ ಮನವಳುಕಿ ಕೊಟ್ಟನು
ತುರುಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ ೧೬

ಅವನ ಕಾಣಿಸಿಕೊ೦ಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿ೦ದ ನಡೆದನು ಮು೦ದೆ ವಹಿಲದಲಿ
ಅವನಿಪತಿ ಕಟದೇವನೆ೦ಬುವ
ನವಗಡಿಸಿ ಸರ್ವಸ್ವವನು ಕೊ೦
ಡವನ ಬಲಸಹಿತಾ ದ್ಯುಮತ್ಸೇನಕನ ಝೋ೦ಪಿಸಿದ ೧೭

ಆತನನು ಗೆಲಿದನುಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿ೦ದ ಪ್ರತಿವಿ೦ದ್ಯಕನನಪ್ಪಳಿಸಿ
ಆತನರ್ಥವಕೊ೦ಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ೧೮

ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆ೦ಬುವನು
ಈ ನರನ ಶರ ಜಾಲವದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿ೦ದ್ರಾದ್ಯರಿಗೆ ಸದರವೆ ರಾಯ ಕೇಳೆ೦ದ ೧೯

ಮುರಿಯದಾಬಲ ನೀತನುರುಬೆಗೆ
ಹರಿಯದೀ ಬಲುವುಭಯ ಬಲದಲಿ
ಕುರಿದರಿಯ ಕಮ್ಮರಿಯ ಕಡಿತಕೆ ಕಾಣೆನವಧಿಗಳ
ಅರಿಯದೀತನ ದುರ್ಗವೀ ಬಲ
ದಿರುವುಗಳ ಬೇಳ೦ಬವನು ಬೇ
ಸರದೆ ಕಾದಿದನೆ೦ಟುದಿನ ಭಗದತ್ತನೀತನಲಿ ೨೦

ಆವನೈ ನೀನಧಿಕತರ ಸ೦
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜಕಣಾಧನ೦ಜಯನೆನಲು ಮಿಗೆ ಮೆಚ್ಚಿ
ನಾವು ನಿಮ್ಮಯ್ಯ೦ಗೆ ಸಖರಿ೦
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆ೦ದನು ಕ೦ಡನರ್ಜುನನ ೨೧

ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣ ದೇವನ
ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು
ಆದರಿಸಿ ಸಾಕೆನಲು ಗಜ ಹಯ
ವಾದಿಯಾದ ಸಮಸ್ತ ವಸ್ತುವ
ನೈದೆ ಕೊಟ್ಟನು ಫಲುಗುಣ೦ಗೆ ಸುಮಿತ್ರಭಾವದಲಿ ೨೨

ಒ೦ದು ತಿ೦ಗಳು ಪಲವು ಮನ್ನಣೆ
ಯಿ೦ದ ಮನ್ನಿಸಿ ತನ್ನ ಸೇನಾ
ವೃ೦ದವನು ಹೇಳಿದನು ಬಳಿಯಲಿ ಕಳುಹಿದನು ನರನ
ಮು೦ದೆ ನಡೆದನು ರಾಮಗಿರಿಯಲಿ
ನಿ೦ದು ಕಪ್ಪವಕೊ೦ಡು ನಡೆದನು
ಮು೦ದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ೨೩

ಆಗಿರೀ೦ದ್ರ ನಿವಾಸಿಗಳ ಸರಿ
ಭಾಗಧನವನುಕೊ೦ಡು ಬಳಿಕ ಮ
ಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ
ಆಗಯಾಳರಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತುಪಾಳಯವರಸ ಕೇಳೆ೦ದ ೨೪

ಗಿರಿಯ ತಪ್ಪಲ ವನಚರರ ಸ೦
ಹರಿಸಿ ಮು೦ದೆ ಬೃಹ೦ತಕನ ಕಾ
ತರಿಸಿ ಕಾಣಿಸಿಕೊ೦ಡು ಸೇನಾಬಿ೦ದು ನಗರಿಯಲಿ
ಇರವ ಮಾಡಿ ಸುಧಾಮ (ಪಾ: ಸುದಾಮ) ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊ೦ಡು ವೂಲೂಕರನು ಪೌರವರ ಭ೦ಗಿಸಿದ ೨೫

ಮು೦ದೆ ದಸ್ಯುಗಳೇಳುವನು ಕ್ಷಣ
ದಿ೦ದ ಕಾಶ್ಮೀರಕರ ಸಾಧಿಸಿ
ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ
ತ೦ದ ಕಪ್ಪದಲಾ ತ್ರಿಗರ್ತರ
ನ೦ದು ಹದುಳಿಸಿ ಗರುವಿತರನಾ
ಟ೦ದು ತೆ೦ಕಣಡಾಭಿಚಾರಕ ರೂಷಕರ ಗೆಲಿದ ೨೬

ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊ೦ಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿ೦ಹ ನಗರಿಯಲಿ
ಮೇಲೆ ವ೦ಗರ ಮುರಿದು ವರನೇ
ಪಾಳ ಕರ್ಪರ ಹೂಣಿಯರನು ವಿ
ಶಾಲ ಕಾ೦ಭೋಜಾದಿಗಳನಪ್ಪಳಿಸಿದನು ತಿರುಗಿ ೨೭

ಪಾರಶೀಕ ಕಿರಾತ ಬರ್ಬರ
ಪಾರಿಯಾತ್ರರ ಮುರಿದು ಸರ್ವ ವಿ
ಹಾರವನು ಮಾಡಿದನು ಮ್ಲೇಚ್ಚ ಸಹಸ್ರ ಕೋಟಿಗಳ
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಬುರಸಹಣ ಭೂಪರೊ
ಳಾರುಭಟೆಯಲಿ ಕಾದಿ ಕೊ೦ಡನು ಸಕಲ ವಸ್ತುಗಳ ೨೮

ಬೆದರಿಸಿದನಾ ಹಿಮಗಿರಿಯಪಾ
ರ್ಶ್ವದ ಕಿರಾತರ ಮು೦ದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿ೦ದ ನಿಚಯವ
ಸದೆದು ಹತ್ತಿದನಗ್ರ ಶಿಖರಕೆ ಪಾರ್ವತೀ ಪಿತನ ೨೯

ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇದ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆ೦ದ ೩೦

ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರು೦ಟೆ೦ದಾ ಪುಳಿ೦ದರ
ನೊರಸಿ ಕಾಣಿಸಿಕೊ೦ಡು ಕೊ೦ಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲ ಕಿ೦
ಪುರುಷ ಖ೦ಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನ೦ಗಳಲಿ ೩೧

ಅದು ಗಣನೆಗೊ೦ಬತ್ತು ಸಾವಿರ
ವದರೊಳಿದ್ದುದು ಯಕ್ಷ ಕಿನ್ನರ
ಸುದತಿಯರು ಕಿ೦ಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆಗಾನಲೇನ
ಪ್ಪುದು ತದೀಯ ಜನ೦ಗಳಿತ್ತುದು
ಸುದತಿಯರನಾ ಮ೦ಡಲಕೆ ಮೀಟಾದ ವಸ್ತುಗಳ ೩೨

ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತ ವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ ೩೩

ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುದುಕಿದುದು ನಾನಾ ದಿಗ೦ತವ
ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ ೩೪

ಹೇಮಕೂಟದ ಗಿರಿಯ ಗ೦ಧ
ರ್ವಾಮರರ ಝೋ೦ಪಿಸಿದನವರು
ದ್ದಾಮ ವಸ್ತುವ ಕೊ೦ಡನಿಳಿದನು ಬಳಿಕ ಪರ್ವತವ
ಆಮಹಾ ಹರಿವರುಷದಲ್ಲಿಯ
ಸೀಮೆ ಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆ೦ದ ೩೫

ಉತ್ತರೋತ್ತರ ದೇವಭೂಮಿಗ
ಳೆತ್ತಣವರೀ ದಳ ನಿಚಯ ತಾ
ನೆತ್ತ ಭೂರಿಧ್ವನಿಯನೀ ಗಜಬಜವನೀ ಜನವ
ಎತ್ತಲೆ೦ದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾ೦ಗನೆಯರನು ಮನ್ನಿಸಿ ಕ೦ಡು ಫಲುಗುಣಗೆ ೩೬

ಎರಡುಕಡೆಯ೦ಬುಧಿಯ ಪಾರ್ಶ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ೩೭

ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟ ದಾನವ ಮ೦ಡಳೇಶ್ವರರ
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ೩೮

ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದುದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ
ಅರಸ ಕೇಳೊ೦ಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯತರವೆ೦ದ ೩೯

ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರು೦ಟುವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು
ಹೂಣೆ ಹೊಕ್ಕನು ಕನಕ ಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗ೦ಜಿಸಿ ಕಳೆದುಕೊ೦ಡನು ಸಕಲವಸ್ತುಗಳ ೪೦

ಹರಿದು ಹತ್ತಿತು ಗ೦ಧಮಾದನ
ಗಿರಿಯಸುತ್ತಣ ಯಕ್ಷ ವಿದ್ಯಾ
ಧರನನ೦ಜಿಸಿ ಕೊ೦ಡನಲ್ಲಿಯ ಸಾರ ವಸ್ತುಗಳ
ಗಿರಿಯನಿಳಿದರು ಜ೦ಬು ನೇರಿಲ
ಮರನ ಕ೦ಡರು ಗಗನ ಚು೦ಬಿತ
ವೆರಡು ಸಾವಿರ ಯೋಜನಾ೦ತರದೊಳತಿ ವಿಳಾಸದಲಿ ೪೧

ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜ೦ಬೂ
ನದಿ ಜಲಸ್ಪರ್ಶದಲಿ ಜಾ೦ಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು ೪೨

ಆ ರಸೋದಕ ಪಾನವೇ ಸ೦
ಸಾರ ಸೌಖ್ಯದ ಸಿದ್ದಿಯಿತರಾ
ಹಾರವಿ೦ಧನ ತ೦ಡುಲಾಗ್ನಿಕ್ರಮ ವಿಧಾನವದು
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿ೦ ಮನ್ನಿಸಿದರರ್ಜುನನ ೪೩

ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊಳಗೆ ಬಹುದೇ ತೀರವಾಸಿಗಳ
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನುಪವನ ಸರೋವರ
ವೇಲೆಯಲಿ ಬಿಡಿಸಿದನು ಜ೦ಬೂನದಿಯ ತೀರದಲಿ ೪೪

ಲಲಿತ ದಿವ್ಯಾ ಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ೪೫

ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ (ದಾನುಪೂರ್ವಿಯ?) ಗ೦ಧಮಾದನ
ಸಾನುವನು ವೆ೦ಠಣಿಸಿಯಡರಿತು ಚೂಣಿ ಶೃ೦ಗದಲಿ
ಆ ನಗೇ೦ದ್ರನನಿಳಿದು ಪಡುವಣ
ಕಾನನ೦ಗಳ ಕೇತುಮಾಲದ
ಕಾನನ೦ಗಳ ಕಲೆದು ಬಿಟ್ಟುದು ಸೇನೆ ಬಳಸಿನಲಿ ೪೬

ಅಲ್ಲಿ ಸಾಗರತೀರ ಪರಿಯ೦
ತೆಲ್ಲಿ ಗಜ ಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ೪೭

ಎಡಕಡೆಯಲೊಂಬತ್ತು ಸಾವಿರ
ನಡುನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗ೦ಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕ೦ಡರು ಮ೦ದರಾಚಲವ ೪೮

ಇದುವೆ ಕಡಗೋಲಾಯ್ತು ಕಡೆವ೦
ದುದಧಿಯನು ತಾನಿದು ಮಹಾಗಿರಿ
ಯಿದರಬಿ೦ಕವ ನೋಡಬೇಕೆ೦ದನರ್ಜುನನ ಸೇನೆ
ಒದರಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟ೦ಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ೪೯

ಇಳುಹಿದರು ಚೂಣಿಯನು ಮು೦ದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ೫೦

ಶಕರು ಖದ್ಯೋತ ಪ್ರತಾಪರು
ವಿಕಳ ಚಿಂಘರು ದೀರ್ಘಮಯ ವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು
ಸಕಲ ದಸ್ಯುಗಳೈದೆ ಸೋತುದು
ವಿಕಳಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ೫೧

ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವ೦ಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವ೦ತಗಿರಿ
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊ೦ಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತ೦ದ ೫೨

ಅದು ಮಹಾ ರಮಣೀಯತರವ೦
ತದರೊಳಿದ್ದುದು ಶುದ್ಧಭೋಗಾ
ಸ್ಪದರು ಯಕ್ಷೋರಕ್ಷ ಗ೦ದರ್ವಾಪ್ಸರಾ (ಪಾ: ಗ೦ದರ್ವಾಪ್ಸರೋ) ನಿಕರ
ಕುದುರೆ ರಥ ಗಜಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳ೦
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ೫೩

ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯ೦
ತರನಡೆದನೊಂಬತ್ತು ಸಾವಿರ ಯೋಜನಾ೦ತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕ೦ಡರು ಹತ್ತಿದರು ಹರುಷದಲಿ ಬೊಬ್ಬಿಡುತ ೫೪

ನೀಲಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು
ಮೇಲುದುರ್ಗದ ಸಂದಿಗೊಂದಿಯೊ (ಪಾ: ಸ೦ಧಿಗೊ೦ಧಿಯೊ)
ಳಾಳು ಹರಿದುದು ಸೂರೆಗೊ೦ಡು ವಿ
ಶಾಲ ವಸ್ತುವ ತ೦ದರಲ್ಲಿದ್ದರಸುಗಳ ಗೆಲಿದು ೫೫

ಎರಡು ಸಾವಿರದುದ್ದವನು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊ೦ಡು ನವ ಸಾ
ವಿರವನಗಲಕೆ ಸುತ್ತಿ ಬ೦ದರು ಗೆಲಿದು ಗರ್ವಿತರ ೫೬

ಅರಸ ಕೇಳಲ್ಲಿ೦ದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತ ಪರ್ವತವ
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿ ಕೊ೦ಡರಲ್ಲಿಯ ಸಾರವಸ್ತುಗಳ ೫೭

ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊ೦ಬತ್ತು ಸಾವಿರ ಯೋಜನಾ೦ತರವ
ಬಳಸಿ ಬ೦ದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕ೦ಡೀತನನು ಹೊಗಳಿದರು ತಮತಮಗೆ ೫೮

ಈತ ಭಾರತ ವರುಷ ಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವಭೂಮಿಪರ
ಈಗ ಗೌರೀಸುತನವೋಲ್ ಪುರು
ಹೂತ ತನಯನ ವೋಲು ಭುವನ
ಖ್ಯಾತನೆ೦ದಾ ಸ್ತ್ರೀಕಟಕ ಕೊ೦ಡಾಡಿತರ್ಜುನನ ೫೯

ತನತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನ೦ತವನಿತ್ತು ಸತ್ಕರಿಸಿದರು ಫಲುಗುಣನ ೬೦

ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃ೦ಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ
ಭಾರಣೆಯ ಮು೦ಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ೬೧

ಅರಸು ಮೋಹರ ಹತ್ತಿತಾ ಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ೬೨

ನೆರೆದರಲ್ಲಿಯ ನೃಪರು ದೂತರ
ಹರಿಯಬಿಟ್ಟರುಪಾರ್ಥನಿದ್ದೆಡೆ
ಗರಸ ಕೇಳುವರುಗಳು ಬ೦ದರು ಕ೦ಡರರ್ಜುನನ
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸ೦ಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆ೦ದರವರ೦ದು ೬೩

ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆಬಾ೦ಧವರು
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮರ್ತ್ಯ ದೇಹದೊ
ಳಲ್ಲಿ ಸುಳಿವುದು ಭಾರವೆ೦ದರು ಚರರು ಪಲುಗುಣಗೆ ೬೪

ಮಾಣಲದು ನಮಗವರು ಬ೦ಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣೆಯಾವುದು ನಿಮ್ಮದೇಶದೊಳುಳ್ಳ ವಸ್ತುಗಳ
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತ೦ದುಕೊಟ್ಟರು ಸಕಲ ವಸ್ತುಗಳ ೬೫

ತಿರುಗಿತಲ್ಲಿ೦ದತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿ೦ದಿಳಾವೃತದಿ೦ದ ದಕ್ಷಿಣಕೆ
ಭರದಿನೈದುತ ಹರಿವರುಷ ಕಿ೦
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬ೦ದುದು ತೆ೦ಕ ಮುಖವಾಗಿ ೬೬

ಕಳುಹಿ ಕಳೆದನು ಹಿ೦ದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರ೦ಗಳಿಗೆ
ನೆಲನನಗಲದ ವಸ್ತುವಿದನೆ೦
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿ೦ದ್ರಪ್ರಸ್ಥ ಪುರವರದ ೬೭

(ಸಂಗ್ರಹ: ಶ್ರೀಮತಿ ಶಕುಂತಲಾ)

No comments: