ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, January 8, 2010

ಆದಿಪರ್ವ: ೦೨. ಎರಡನೆಯ ಸಂಧಿ

ಸೂ. ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರ ಕಥಾಮೃತವ

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು ೧

ಪರಮಪೌರಾಣಿಕ ಶಿರೋಮಣಿ
ಬರವಿದೆತ್ತಣದಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ ೨

ವಂದಿಸಿದೆನೈ (ಪಾ: ವಂದಿಸಿದನೈ) ವರ ತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹುಸಿ ವರ ನಿಗಮ ಶತವಿದ
ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು ೩

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತಕಥಾಮೃತವ ೪

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ ೫

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ ೬

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತ ಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ ೭

ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಿಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ ೮

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ ೯

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತ(ನ?) ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ೧೦

ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ ೧೧

ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರ ಮಹತ್ವದಿ ಭಾರವತ್ವದಿ
ವರಮಹಾಭಾರತವಿದೊಂದೇ
ದುರಿತದುರ್ಗ ವಿಭೇದಕರವೀರೇಳು ಲೋಕದಲಿ ೧೨

ಹೇಳಿದನು ಪೌಲೋಮ ಚರಿತೋ
ದ್ಧಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ ೧೩

ಕೇಳಿದನು ಜನಮೇಜಯಕ್ಷಿತಿ
ಪಾಲ ವೈಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ ೧೪

ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ ೧೫

ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ ೧೬

ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪುರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ ೧೭

ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ
ವಿದಿತ ಪೂರ್ವೋತ್ತರದ ಯದು ವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ೧೮

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ ೧೯

ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ
ವರ ಪರಂಪರೆಯೋಳ್ ಪ್ರತೀಪನು
ಧರಣಿಪತಿಯಾತನಲಿ ಸಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ ೨೦

ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ೨೧

ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ೨೨

ಬಳಿಕ ಮತ್ಸ್ಯದ ಬಸಿ(ಪಾ: ಸು)ರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ೨೩

ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ ೨೪

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ ೨೫

ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ ೨೬

ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ
ಅರಿದು ಸಲಿಸುವಡಿದನು ನೇ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ ೨೭

ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ
ಈ ದಿವಿಜರೀ ಹರಿ ಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ೨೮

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ ೨೯

ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ ೩೦

ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ ೩೧

ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ
ರಾಯ ಕುವರನ ಮದುವೆಗಬ್ಜದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ ೩೨

ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ ೩೩

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ೩೪

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ ೩೫

ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ ೩೬

ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ ೩೭

ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ೩೮

(ಸಂಗ್ರಹ: ಶ್ರೀಕಾಂತ್ ವೆಂಕಟೇಶ್)

8 comments:

sunaath said...

ನಾಲ್ಕನೆಯ ನುಡಿಯ ಎರಡನೆಯ ಸಾಲಿನಲ್ಲಿ ‘ಸರ್ಪಯಜ್ಞ’ ಎಂದು ಸರಿಪಡಿಸಬೇಕು.

gadugina bharata said...

ಈ ಸಂಧಿ ಇನ್ನೂ ಪೂರ್ಣವಾಗಿಲ್ಲವಾದ್ದರಿಂದ ತಿದ್ದುಪಡಿಗೊಳಪಟ್ಟಿಲ್ಲ. ತಾವು ಸೂಚಿಸಿದ ದೋಷವನ್ನು ಸರಿಪಡಿಸಲಾಗಿದೆ.

sunaath said...

ಮಾನ್ಯರೆ,
ವಿರಾಟಪರ್ವವನ್ನು ನಾನು ವಹಿಸಿಕೊಳ್ಳಲು ಇಚ್ಛಿಸುತ್ತೇನೆ.
ನನ್ನ ಇ-ಮೇಲ್ ID:
sunaath@gmail.com

Unknown said...

Please send the font details

gadugina bharata said...

Dear Ashwath,

We did not understand your request. Can you please clarify what exactly you want to know?

SunnySide said...

Admirable and rare contribution to the blogosphere. I'm very happy to see an authentic attempt at reviving Kannada literature. Can I contribute to this blog?

Unknown said...

bahala ollaya prayatna. kannadambeya charanagalige samarpitha.

Ondu binnaha - ee kavyagala aarthagala bagge prayatnisabudalva ?

Unknown said...

eegagle saramshagele enadru iddere dayavittu teelese.

dhanyavadagolendoge,

nimmava,
Shrinidhi